ಚೆನ್ನೈ: ತಮಿಳು ಚಿತ್ರರಂಗದ ಅಗ್ರ ನಟನಾಗಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ನಟ ವಿಜಯ್, ಇದೀಗ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನಕ್ಕೇರಿರುವ ಐತಿಹಾಸಿಕ ಕ್ಷಣ ರಾಜ್ಯ ರಾಜಕೀಯದಲ್ಲೇ ಹೊಸ ಅಧ್ಯಾಯ ಸೃಷ್ಟಿಸಿದೆ. ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಭವ್ಯ ಸಮಾರಂಭದಲ್ಲಿ ವಿಜಯ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಅವರ ತಂದೆ ಖ್ಯಾತ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಹಾಗೂ ತಾಯಿ ಶೋಭಾ ಭಾವುಕರಾದರು.
ವರ್ಷಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ವಿಜಯ್, ಬಳಿಕ ರಾಜಕೀಯ ಪ್ರವೇಶ ಮಾಡಿ ಹೊಸ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದರು. ಜನಪರ ಭರವಸೆಗಳು, ಯುವಜನರನ್ನು ಸೆಳೆಯುವ ಭಾಷಣಗಳು ಮತ್ತು ಬದಲಾವಣೆಯ ಘೋಷಣೆಗಳ ಮೂಲಕ ಅವರು ಜನಮನ ಗೆದ್ದಿದ್ದರು. ಇಂದು ಆ ಹೋರಾಟದ ಫಲವಾಗಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ಮಗನನ್ನು ಕಂಡ ತಂದೆ- ತಾಯಿ ಭಾವುಕರಾಗಿದ್ದಾರೆ.
ರಾಜ್ಯಪಾಲರ ಎದುರು ನಿಂತು ವಿಜಯ್ ಅವರು ಪ್ರತಿಜ್ಞಾವಿಧಿ ಸ್ವೀಕರಿಸುತ್ತಿದ್ದಾಗ, ಮುಂಭಾಗದಲ್ಲಿ ಕುಳಿತಿದ್ದ ಎಸ್.ಎ. ಚಂದ್ರಶೇಖರ್ ಅವರು ಭಾವುಕರಾಗಿ ಕಾಣಿಸಿಕೊಂಡರು. ಮಗನ ರಾಜಕೀಯ ಪಯಣ, ಆರಂಭದ ಸವಾಲುಗಳು ಹಾಗೂ ಸಿನಿ ಲೋಕದಿಂದ ರಾಜಕೀಯದವರೆಗಿನ ದೀರ್ಘ ಹಾದಿ ನೆನಪಾಗಿ ಅವರ ಕಣ್ಣಲ್ಲಿ ಆನಂದಬಾಷ್ಪ ಹರಿದಿತು. ಕರವಸ್ತ್ರದಿಂದ ಕಣ್ಣೀರು ಒರೆಸಿಕೊಳ್ಳುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.
ವಿಜಯ್ ಅವರ ತಾಯಿ ಶೋಭಾ ಕೂಡ ಮಗನ ಪ್ರಮಾಣ ವಚನ ಕ್ಷಣವನ್ನು ಕಣ್ಣೀರಿಡುತ್ತಲೇ ವೀಕ್ಷಿಸಿದರು. ಮಗ ರಾಜ್ಯದ ಆಡಳಿತದ ಹೊಣೆ ಹೊತ್ತ ಕ್ಷಣವನ್ನು ಕಂಡು ತಾಯಿ-ತಂದೆ ಇಬ್ಬರೂ ಹೆಮ್ಮೆಪಟ್ಟರು. ಕುಟುಂಬದ ಸದಸ್ಯರು ಪರಸ್ಪರ ಅಭಿನಂದಿಸಿಕೊಂಡು ಸಂತಸ ಹಂಚಿಕೊಂಡರು.
ವಿಜಯ್ ಹಾಗೂ ಅವರ ತಂದೆ ಎಸ್.ಎ. ಚಂದ್ರಶೇಖರ್ ನಡುವೆ ಕೆಲವು ರಾಜಕೀಯ ಮತ್ತು ವೈಯಕ್ತಿಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು ಎಂಬ ಮಾತುಗಳು ಕೇಳಿಬಂದಿದ್ದವು. ಕೆಲ ಸಂದರ್ಭಗಳಲ್ಲಿ ಇಬ್ಬರ ನಡುವೆ ಅಂತರ ಉಂಟಾಗಿದೆ ಎನ್ನುವ ಸುದ್ದಿಗಳೂ ಹರಿದಾಡಿದ್ದವು. ಆದರೆ ಮಗನ ಜೀವನದ ಅತ್ಯಂತ ಮಹತ್ವದ ದಿನದಲ್ಲಿ ಆ ಎಲ್ಲಾ ಕಹಿ ಕ್ಷಣಗಳನ್ನು ಮರೆತು ಕುಟುಂಬ ಒಂದಾಗಿ ಕಾಣಿಸಿಕೊಂಡರು.
ಪ್ರಮಾಣ ವಚನ ಸಮಾರಂಭಕ್ಕೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು.





