ತುಮಕೂರು ಜಿಲ್ಲೆಯಲ್ಲಿ ಹಕ್ಕಿ ಜ್ವರದ (Bird Flu) ಭೀತಿ ತೀವ್ರಗೊಂಡಿದೆ. ಕಳೆದ ಒಂದು ತಿಂಗಳಲ್ಲಿ 54ಕ್ಕೂ ಹೆಚ್ಚು ನವಿಲುಗಳು ನಿಗೂಢ ಸಾವನ್ನಪ್ಪಿದ್ದು, ಇದರಲ್ಲಿ ಹಕ್ಕಿ ಜ್ವರವೇ ಕಾರಣ ಎಂದು ಲ್ಯಾಬ್ ವರದಿ ದೃಢಪಡಿಸಿದೆ. ಇದರಿಂದ ಸಾರ್ವಜನಿಕರಲ್ಲಿ ತೀವ್ರ ಆತಂಕ ಹೆಚ್ಚಾಗಿದೆ.
ತುಮಕೂರು ತಾಲೂಕಿನಲ್ಲಿ ಈ ಹಿಂದೆ 44 ನವಿಲುಗಳು ಸಾವನ್ನಪ್ಪಿದ್ದವು. ಈಗ ಆ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ ಕುಣಿಗಲ್ನಲ್ಲೂ ನವಿಲಿನ ಕಳೆಬರ ಪತ್ತೆಯಾಗಿದ್ದು, ಹಕ್ಕಿ ಜ್ವರ ಜಿಲ್ಲೆಯ ಇತರ ಭಾಗಗಳಿಗೂ ಹರಡುವ ಸಾಧ್ಯತೆಯನ್ನು ಹೆಚ್ಚಿಸಿದೆ.
ಕೋಳಿಗಳಲ್ಲಿ ಸಮಾಧಾನ ತುಮಕೂರು ತಾಲೂಕಿನ ಬೊಮ್ಮನಹಳ್ಳಿ ಕೋಳಿ ಫಾರಂನಲ್ಲಿ ಸುಮಾರು 30 ಕೋಳಿಗಳು ಏಕಕಾಲದಲ್ಲಿ ಸಾವನ್ನಪ್ಪಿದ್ದವು. ಇದರಿಂದ ಹಕ್ಕಿ ಜ್ವರದ ಭೀತಿ ಉಂಟಾಗಿತ್ತು. ಆದರೆ ಮೃತ ಕೋಳಿಗಳ ಸ್ಯಾಂಪಲ್ ಪರೀಕ್ಷೆಯಲ್ಲಿ ಹಕ್ಕಿ ಜ್ವರ ನೆಗೆಟಿವ್ ಬಂದಿದೆ. ಇದು ಕೋಳಿ ಫಾರಂ ಮಾಲೀಕರು ಮತ್ತು ಸ್ಥಳೀಯರಲ್ಲಿ ಸ್ವಲ್ಪ ಸಮಾಧಾನ ತಂದಿದೆ.
ಅಧಿಕಾರಿಗಳ ಹೈ ಅಲರ್ಟ್ ಪಶುಸಂಗೋಪನಾ ಇಲಾಖೆಯು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದೆ. ನವಿಲು, ಕೋಳಿ ಮತ್ತು ಇತರ ಕಾಡುಪ್ರಾಣಿಗಳ ಸಾವು ಕಂಡುಬಂದ ತಕ್ಷಣ ವರದಿ ಮಾಡುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಹಕ್ಕಿಗಳ ಚಲನವಲನದ ಮೇಲೆ ನಿಗಾ ಹೆಚ್ಚಿಸಲಾಗಿದೆ. ಸ್ಯಾಂಪಲ್ಗಳನ್ನು ತ್ವರಿತವಾಗಿ ಪರೀಕ್ಷೆಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.
ಸಾರ್ವಜನಿಕರಿಗೆ ಎಚ್ಚರಿಕೆ : ಹಕ್ಕಿ ಜ್ವರ ಸಾಂಕ್ರಾಮಿಕ ರೋಗವಾಗಿರುವುದರಿಂದ, ಮೃತ ಹಕ್ಕಿಗಳನ್ನು ಮುಟ್ಟದಂತೆ, ಮಾಂಸ ಸೇವನೆಯಲ್ಲಿ ಜಾಗರೂಕತೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಯಾವುದೇ ಅಸಹಜ ಸಾವುಗಳು ಕಂಡುಬಂದಲ್ಲಿ ತಕ್ಷಣ ಪಶುಸಂಗೋಪನಾ ಇಲಾಖೆ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.





