ಮಾನವ ಜೀವ ಉಳಿಸುವ ವೈದ್ಯರು ದೇವರ ಸಮಾನರು, ಹಿಂದಿನ ಕಾಲದಲ್ಲಿ ರೋಗ ಚಿಕಿತ್ಸೆಗೆ ಮುಖ್ಯವಾಗಿ ಆಯುರ್ವೆದ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. ನಂತರ ಬ್ರಿಟಿಷರ ಆಡಳಿತದ ಅವಧಿಯಲ್ಲಿ ಪಾಶ್ಚಾತ್ಯ ವೈದ್ಯಕೀಯ ಪದ್ಧತಿ (ಅಲೋಪಥಿ) ವ್ಯಾಪಕವಾಗಿ ಪರಿಚಯಗೊಂಡು, ಪರಂಪರಾಗತ ವ್ಯವಸ್ಥೆಗಳ ಪ್ರಭಾವ ಕಡಿಮೆಯಾಯಿತು ಎಂದು ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ್ ಹೇಳಿದರು.
ಅವರು, ತದ್ವಿದ್ಯ ಸಂಭಾಷಾ ಪರಿಷತ್ ಟ್ರಸ್ಟ್ ವತಿಯಿಂದ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿರುವ ಅಂತಾರಾಷ್ಟ್ರೀಯ ಬೌದ್ಧಿಕ ಆಯುರ್ವೇದ ಸಮ್ಮೇಳನ ಹಾಗೂ ಎಕ್ಸ್ಪೋ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯತಿಥಿಗಳಾಗಿ ಪಾಲ್ಗೊಂಡು, ತದ್ವಿದ್ಯ ಸಂಭಾಷಾ ಪರಿಷತ್ನಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ ಅವರು ಭಾರತದ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಾದ ಗುರುಕುಲ ಪದ್ಧತಿ ಕೂಡ ಬ್ರಿಟಿಷರ ಕಾಲದಲ್ಲಿ ಹಿನ್ನಡೆ ಕಂಡಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಮುಂದಾಳತ್ವದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಸಂಪ್ರದಾಯಗಳಿಗೆ ಪುನರುಜ್ಜೀವನ ಸಿಕ್ಕಿದೆ ಎಂದು ಅವರು ಹೇಳಿದರು.

ವಿಶೇಷವಾಗಿ ಯೋಗಕ್ಕೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರೆತಿದ್ದು, ಅನೇಕ ದೇಶಗಳಲ್ಲಿ ಅದನ್ನು ಆಚರಿಸಲಾಗುತ್ತಿದೆ. ಆಯುರ್ವೇದಕ್ಕೂ ಮರುಪ್ರತಿಷ್ಠೆ ಸಿಗುತ್ತಿದ್ದು, ಪರಂಪರೆ ಮತ್ತು ಆಧುನಿಕತೆಯ ಸಮನ್ವಯದತ್ತ ದೇಶ ಸಾಗುತ್ತಿದೆ ಎಂದರು. ಶೀಘ್ರದಲ್ಲೇ ಭಾರತದ ವಿಶ್ವಗುರು ಆಗಲಿ ಆಶಯವನ್ನು ವ್ಯಕ್ತಪಡಿಸಿದರು, ಇದು ಸ್ವಾಮಿ ವೀವೇಕಾನಂದ ಅವರ ಕನಸಾಗಿದೆ ಎಂದು ಹೇಳಿದರು. ಈಗ ನಡೆಯುತ್ತಿರುವ ಸಮ್ಮೇಳನವು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುವಂತಾಗಿದೆ ಎಂದು ಡಾ. ವಿ ಎಸ್ವಿ ಪ್ರಸಾದ ಬಣ್ಣಿಸಿದರು. ತದ್ವಿದ್ಯ ಸಂಭಾಷಾ ಪರಿಷತ್ ಟ್ರಸ್ಟ್ ಅಧ್ಯಕ್ಷರಾದ ಗೋವಿಂದ ಜೋಶಿ ಗಣ್ಯರ ಸಾನ್ನಿಧ್ಯದಲ್ಲಿ ಸಮ್ಮೇಳನದ ಉದ್ಘಾಟನೆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ನವದೆಹಲಿಯ ಎನ್ಸಿಐಎಸ್ಎಂನ ಬೋರ್ಡ್ ಆಫ್ ಆಯುರ್ವೇದದ ಅಧ್ಯಕ್ಷರಾದ ಡಾ. ಅಲ್ಲಮಪ್ರಭು ಗುಡ್ಡ, ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಕಾರ್ಯದರ್ಶಿ ಸಂಜೀವ ಜೋಶಿ, ತದ್ವಿದ್ಯ ಸಂಭಾಷಾ ಪರಿಷತ್ ಉಪಾಧ್ಯಕ್ಷ ಡಾ. ಜೆ. ಆರ್. ಜೋಶಿ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಹಾಗೂ ಸಮ್ಮೇಳನದ ಆಯೋಜನಾ ಕಾರ್ಯದರ್ಶಿ ಡಾ. ಸೌರಭ ಕೊಕಟ್ನೂರ್ ಭಾಗವಹಿಸಿದ್ದರು.
ಡಾ. ಅಲ್ಲಮಪ್ರಭು ಗುಡ್ಡ ಅವರು ಆಯುರ್ವೇದದಲ್ಲಿ ಹೊಸದಾಗಿ ಪ್ರಾರಂಭವಾಗಲಿರುವ 18ನೇ ಪಿಜಿ ವಿಭಾಗವಾದ ಆಯುರ್ವೇದ ಬೈಯಾಲಜಿ ಹಾಗೂ ಡಿಎಂ ಕೋರ್ಸ್ಗಳ ಕುರಿತು ಮಾಹಿತಿ ನೀಡಿದರು.
ಡಾ. ಸೌರಭ ಕೊಕಟ್ನೂರ್ ಅವರು ಸಮ್ಮೇಳನದ ಥೀಮ್ ಹಾಗೂ ಅದರ ಪರಂಪರೆಯ ಮಹತ್ವವನ್ನು ವಿವರಿಸಿದರು.
ಡಾ. ಜೆ. ಆರ್. ಜೋಶಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಟ್ರಸ್ಟಿ ಡಾ. ನಾರಾಯಣ ಕೆ. ಆರ್ ವಂದಿಸಿದರು.





