ವಿಶ್ವಸಂಸ್ಥೆ (UN): ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯಿಂದ ಜಾಗತಿಕ ಆಹಾರ ವ್ಯವಸ್ಥೆಗಳಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗುವ ಸಾಧ್ಯತೆ ಇದೆ. ವಿಶ್ವಸಂಸ್ಥೆಯ ಯೋಜನಾ ಸೇವೆಗಳ ಕಚೇರಿ ಎಚ್ಚರಿಕೆ ಹೊರಡಿಸಿದೆ. ಅವರ ಪ್ರಕಾರ, ಹಾರ್ಮುಜ್ ಜಲಸಂಧಿಯ ಮುಚ್ಚಿದ ನಂತರ, ಪೂರೈಕೆ ಸರಪಳಿಗಳಲ್ಲಿ ಉಂಟಾಗುವ ಅಡಚಣೆಗಳು ಜಾಗತಿಕ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಬಹುದು. ಇದು ಲಕ್ಷಾಂತರ ಜನರನ್ನು ಹಸಿವಿಗೆ, ಕ್ಷಾಮಕ್ಕೆ ತಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ.
ಬಿಕ್ಕಟ್ಟಿನ ತೀವ್ರತೆ
ಹಾರ್ಮುಜ್ ಜಲಸಂಧಿಯು ಪ್ರಪಂಚದ ಅತಿ ಮುಖ್ಯ ತೈಲ ಮತ್ತು ಅನಿಲ ಸಾಗಣೆ ಮಾರ್ಗವಾಗಿದೆ. ಜೊತೆಗೆ, ಇದು ರಸಗೊಬ್ಬರ ಉತ್ಪಾದನೆಗೆ ಅಗತ್ಯವಾದ ಕಚ್ಚಾ ಸಾಮಗ್ರಿಗಳ ಸಾಗಣೆಗೂ ಮಾರ್ಗವಾಗಿದೆ. ಈ ಮಾರ್ಗ ಮುಚ್ಚಿಕೊಂಡರೆ ಅಥವಾ ಅಡ್ಡಿಯಾದರೆ, ರಸಗೊಬ್ಬರಗಳ ಕೊರತೆ ತೀವ್ರವಾಗಿ, ಕೃಷಿ ಉತ್ಪಾದನೆ ಕುಸಿಯಲಿದೆ. ಇದರ ಪರಿಣಾಮವಾಗಿ ಆಹಾರದ ಬೆಲೆಗಳು ಆಕಾಶಕ್ಕೇರಲಿದ್ದು, ಆಮದು ಅವಲಂಬಿತ ದೇಶಗಳು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಲಿವೆ.
ಯುಎನ್ ಅಧಿಕಾರಿಯ ಎಚ್ಚರಿಕೆ
ವಿಶ್ವಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಾರ್ಜ್ ಮೊರೆರಾ ಡ ಸಿಲ್ವಾ ಅವರು ತಮ್ಮ ಹೇಳಿಕೆಯಲ್ಲಿ, “ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಮತ್ತು ಸಮುದ್ರ ಮಾರ್ಗಗಳ ನಿರ್ಬಂಧವು ಜಾಗತಿಕ ಆಹಾರ ವ್ಯವಸ್ಥೆಯನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ರಾಸಾಯನಿಕ ಗೊಬ್ಬರಗಳ ಕೊರತೆಯು ಬೆಳೆ ಇಳುವರಿಯನ್ನು ಕುಸಿಯುವಂತೆ ಮಾಡುತ್ತದೆ. ದುರ್ಬಲ ದೇಶಗಳಲ್ಲಿ ಈ ಬಿಕ್ಕಟ್ಟು ತೀವ್ರ ಮಾನವೀಯ ವಿಪತ್ತನ್ನು ಸೃಷ್ಟಿಸಬಹುದು“ ಎಂದು ತಿಳಿಸಿದ್ದಾರೆ.
ರಸಗೊಬ್ಬರ ಬೆಲೆ ದಾಖಲೆಯ ಮಟ್ಟಕ್ಕೆ
ವಿಶ್ವಸಂಸ್ಥೆಯ ವರದಿಯ ಪ್ರಕಾರ, ಹಾರ್ಮುಜ್ ಜಲಸಂಧಿಯ ಅಡಚಣೆಯಿಂದಾಗಿ ರಸಗೊಬ್ಬರದ ಒಳಹರಿವಿನ (ಇನ್ಪುಟ್) ವೆಚ್ಚವು ದಾಖಲೆಯ ಮಟ್ಟಕ್ಕೆ ಏರಿದೆ. ಇದರಿಂದಾಗಿ ರೈತರು ದುಬಾರಿ ಬೆಲೆಯ ರಸಗೊಬ್ಬರಗಳನ್ನು ಖರೀದಿಸಲು ಸಾಧ್ಯವಾಗದೆ, ಕೃಷಿ ಉತ್ಪಾದನೆಯನ್ನೇ ಕಡಿತಗೊಳಿಸುವ ಸಾಧ್ಯತೆಯಿದೆ. ಈಗಾಗಲೇ ಆಹಾರ ಅಭದ್ರತೆಯನ್ನು ಎದುರಿಸುತ್ತಿರುವ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದ ಕೆಲವು ದೇಶಗಳು ಅತ್ಯಂತ ದುರ್ಬಲ ಸ್ಥಿತಿಯಲ್ಲಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆಮದು ಮಾಡಿಕೊಳ್ಳುವ ಗೊಬ್ಬರದ ಬೆಲೆಯನ್ನು ಭರಿಸುವುದು ಅಸಾಧ್ಯವಾಗಬಹುದು.
ಹಡಗು ಸಾಗಣೆ ಮಂಡಳಿ ಖಂಡನೆ
ಇದೇ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಹಡಗು ಸಾಗಣೆ ಮಂಡಳಿ (International Chamber of Shipping) ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವುದು ಮತ್ತು ಸಿಬ್ಬಂದಿಯನ್ನು ಬಂಧಿಸುವುದು ಅಂತಾರಾಷ್ಟ್ರೀಯ ಕಾನೂನು ಮತ್ತು ಸಂಚರಣೆ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆ ಸಂಸ್ಥೆ ಖಂಡಿಸಿದೆ.
ಸಮುದ್ರಯಾನ ನಿರ್ದೇಶಕ ಜಾನ್ ಸ್ಟಾವ್ಪರ್ಟ್ ಮಾತನಾಡಿ, “ಸಮುದ್ರಯಾನಿಗಳು ‘ಮುಕ್ತವಾಗಿ ಮತ್ತು ಕಿರುಕುಳವಿಲ್ಲದೆ’ ತಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು. ರಾಜಕೀಯ ಹತೋಟಿಗಾಗಿ ವಾಣಿಜ್ಯ ಸಾಗಣೆಯನ್ನು ಬಳಸಿಕೊಳ್ಳುವುದು ಅತ್ಯಂತ ಅಪಾಯಕಾರಿ. ಇದರಿಂದ ಜಾಗತಿಕ ವ್ಯಾಪಾರ ಮಾರ್ಗಗಳು ಮತ್ತಷ್ಟು ಅಸ್ಥಿರಗೊಳ್ಳಲಿವೆ“ ಎಂದು ಎಚ್ಚರಿಸಿದ್ದಾರೆ. ಬಂಧಿತ ಸಿಬ್ಬಂದಿಯ ತಕ್ಷಣ ಬಿಡುಗಡೆಗೂ ಅವರು ಕರೆ ನೀಡಿದ್ದಾರೆ.





