ಇತ್ತಿಚಿನ ದಿನಗಳಲ್ಲಂತೂ ಎಲ್ಲವೂ ಹಣದ ಮೇಲೆಯೇ ನಿಂತಿದೆ. ನಾವು ಬಳಸುವ ಪ್ರತಿಯೊಂದು ಸೇವೆಗೂ ದರ ನಿಶ್ಚಿತವಾಗಿದೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ರಾಜಸ್ಥಾನದ ಖಾತು ಶ್ಯಾಮ್ ದೇವಸ್ಥಾನದ ಬಳಿ ಇಂತಹ ಘಟನೆ ನಡೆದಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
ಮೆಘಾ ಉಪಾಧ್ಯಾಯ ಎಂಬ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದು, ಇದನ್ನು ಓದಿದ ಪ್ರತಿಯೊಬ್ಬರೂ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಅವರು ಬರೆದಂತೆ, ಕುಟುಂಬ ಸಮೇತ ಖಾತು ಶ್ಯಾಮ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಎರಡು ಗಂಟೆಗಳ ಕಾಲ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ನಂತರ ಮನೆ ಕಡೆಗೆ ಮರಳಿ ಬರುತ್ತಿದ್ದಾಗ ತಾಯಿಗೆ ತೀವ್ರ ಅಸ್ವಸ್ಥತೆ ಉಂಟಾಯಿತು. ಹೊಟ್ಟೆ ನೋವು, ವಾಂತಿ, ವಾಕರಿಕೆ ಇದರಿಂದ ತಾಯಿಯ ಸ್ಥಿತಿ ತುಂಬಾ ಕಷ್ಟಕರವಾಗಿತ್ತು.
ಆ ತಕ್ಷಣ ಅವರು ಸುತ್ತಮುತ್ತಲಲ್ಲಿ ಶೌಚಾಲಯಕ್ಕಾಗಿ ಹುಡುಕಲಾರಂಭಿಸಿದರು. ಆದರೆ ಯಾವುದೇ ಶೌಚಾಲಯವಿರಲಿಲ್ಲ. ಇದ್ದ ಒಂದು ಶೌಚಾಲಯ ಬಳಸುವಂತಿರಲಿಲ್ಲ. ತಾಯಿಯ ಆರೋಗ್ಯ ಸ್ಥಿತಿ ತುಂಬಾ ಕಷ್ಟಕರವಾಗತೊಡಗಿತ್ತು. ಹೀಗಾಗಿ ಹತ್ತಿರದಲ್ಲಿದ್ದ ಒಂದು ಹೋಟೆಲ್ ಗೆ ಹೋಗಿದ್ದವು.
ಅವರು ಹೋಟೆಲ್ ಸಿಬ್ಬಂದಿಗೆ ನಮಗೆ ರೂಮ್ ಬೇಡ, ಕೇವಲ ಐದು..ಹತ್ತು ನಿಮಿಷ ಶೌಚಾಲಯ ಬಳಸಲು ಅವಕಾಶ ನೀಡಿ ಎಂದು ವಿನಂತಿಸಿದರು. ಸಿಬ್ಬಂದಿ ಒಪ್ಪಿಗೆ ನೀಡಿದರೂ ನಂತರ ಬಿಲ್ ನೀಡುವ ವೇಳೆಗೆ ನೂರು ರೂ. ಕೊಡಿ, ಕಾಗದ ಕೊಡುತ್ತೇನೆ ಎಂದು ಹೇಳಿದರು. ಆದರೆ ಶೌಚಾಲಯ ಬಳಕೆಗಾದ ಬಿಲ್ ನೀಡಿದಾಗ ಅದು 800 ರೂ. ಆಗಿತ್ತು. ಕೇವಲ ಆರು ನಿಮಿಷ ಶೌಚಾಲಯ ಉಪಯೋಗಿಸಿದಕ್ಕೆ ಇಷ್ಟು ದುಬಾರಿ ಶುಲ್ಕ ವಿಧಿಸಿರುವುದನ್ನು ನೋಡಿ ಆಕೆ ಶಾಕ್ಗೆ ಒಳಗಾದರು.
ಮೆಘಾ ತಮ್ಮ ಪೋಸ್ಟ್ನಲ್ಲಿ, ‘ನಾನು ಸಹಾನುಭೂತಿಗಾಗಿ ಇದನ್ನು ಬರೆಯುತ್ತಿಲ್ಲ. ಆದರೆ ಇಂತಹ ಸಂದರ್ಭಗಳಲ್ಲಿ ನಾವು ಎಷ್ಟು ಮಾನವೀಯತೆ ಕಳೆದುಕೊಂಡಿದ್ದೇವೆ ಎಂಬುದನ್ನು ಪ್ರಶ್ನಿಸುತ್ತಿದ್ದೇನೆ. ಅಸ್ವಸ್ಥ ಮಹಿಳೆಗೆ ಸಹಾಯ ಮಾಡುವ ಬದಲು ಹಣಕ್ಕೆ ಮಹತ್ವ ನೀಡಲಾಗಿದೆ. ಇದು ನಿಜಕ್ಕೂ ವಿಷಾದನೀಯ’ ಎಂದು ಬರೆದಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ಹರಡುತ್ತಿದ್ದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದು, ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದೆ. ಕೆಲವು ಮಂದಿ, ‘ಇದು ಮಾನವೀಯತೆ ಇಲ್ಲದ ಜಗತ್ತು. ಇಲ್ಲಿರುವವರಿಗೆ ಹಣಕ್ಕಿಂತ ಮನುಷ್ಯನಿಗೆ ಬೆಲೆ ಇಲ್ಲ’ ಎಂದು ಟೀಕಿಸಿದ್ದಾರೆ. ಮತ್ತೊಬ್ಬರು, ‘ದೊಡ್ಡ ಹೋಟೆಲ್ಗಳು ಈ ರೀತಿಯಾಗಿ ಹೆಚ್ಚುವರಿ ಹಣ ವಸೂಲಿ ಮಾಡುತ್ತವೆ. ಆದರೆ ಇದಕ್ಕೆ ವಿರೋಧವಾಗಿ ಯಾರೂ ಧ್ವನಿ ಎತ್ತುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬರು, ‘ಇಂತಹ ಸಂದರ್ಭಗಳಲ್ಲಿ ನಾವು ಹೆಚ್ಚು ಹಣ ಪಾವತಿಸಬೇಕಾದ ಪರಿಸ್ಥಿತಿಯಲ್ಲಿರುತ್ತೇವೆ. ಆದರೆ ಇದನ್ನು ದುರ್ಬಳಕೆ ಮಾಡಬಾರದು’ ಎಂದಿದ್ದಾರೆ.