ಶ್ರೀಹರಿಕೋಟ, ಜುಲೈ 18: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಇಂದು ವೇದಿಕೆ ಸಜ್ಜಾಗಿದೆ. ದೇಶದ ಪ್ರಮುಖ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಅಭಿವೃದ್ಧಿಪಡಿಸಿರುವ ‘ವಿಕ್ರಮ್-1’ ರಾಕೆಟ್ ಇಂದು ಬೆಳಗ್ಗೆ 11.30 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ. ಇದು ಭಾರತದ ನೆಲದಿಂದ ಸಂಪೂರ್ಣವಾಗಿ ಖಾಸಗಿಯಾಗಿ ಅಭಿವೃದ್ಧಿಪಡಿಸಲಾದ ಮೊದಲ ಆರ್ಬಿಟಲ್ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
A historic new frontier for India’s space journey!
At 11:30 AM today, Skyroot Aerospace will undertake the maiden orbital launch of Vikram-1, India’s first privately developed launch vehicle.
This four-stage rocket is designed to provide rapid and on-demand launch services.… pic.twitter.com/1qFVTwNOuZ
— Narendra Modi (@narendramodi) July 18, 2026
‘ಮಿಷನ್ ಆಗಮನ್’ ವಿಶೇಷತೆ ಏನು?
ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಂ ಸಾರಾಭಾಯಿ ಅವರ ಗೌರವಾರ್ಥ ಈ ರಾಕೆಟ್ಗೆ ‘ವಿಕ್ರಮ್-1’ ಎಂದು ಹೆಸರಿಡಲಾಗಿದೆ. ಈ ಉಡಾವಣೆಗೆ ‘ಮಿಷನ್ ಆಗಮನ್’ ಎಂದು ಹೆಸರಿಡಲಾಗಿದ್ದು, ಇದು ಪ್ರಮುಖವಾಗಿ ತಂತ್ರಜ್ಞಾನ ಪ್ರದರ್ಶನ (Technology Demonstration) ಪೇಲೋಡ್ಗಳನ್ನು ಭೂಮಿಯ ಕಕ್ಷೆಗೆ ಹೊತ್ತೊಯ್ಯಲಿದೆ. ಖಾಸಗಿ ಬಾಹ್ಯಾಕಾಶ ಉದ್ಯಮದಲ್ಲಿ ಭಾರತದ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಮಹತ್ವದ ಹೆಜ್ಜೆಯಾಗಿ ಈ ಮಿಷನ್ ಪರಿಗಣಿಸಲಾಗಿದೆ.
ಪ್ರಧಾನಿ ಮೋದಿ ಹಾಗೂ ವಿಜ್ಞಾನಿಗಳ ಕೈಬರಹದ ಪೋಸ್ಟ್ಕಾರ್ಡ್
ಈ ಉಡಾವಣೆ ಕೇವಲ ತಾಂತ್ರಿಕ ಸಾಧನೆಯಷ್ಟೇ ಅಲ್ಲ, ಭಾವನಾತ್ಮಕ ಮಹತ್ವವನ್ನೂ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೈಬರಹದಲ್ಲಿ ಬರೆದಿರುವ, ‘ವಂದೇ ಮಾತರಂ’ ಎಂಬ ದೇಶಭಕ್ತಿಯ ಸಂದೇಶ ಹೊಂದಿರುವ ವಿಶೇಷ ಪೋಸ್ಟ್ಕಾರ್ಡ್ನ್ನು ವಿಕ್ರಮ್-1 ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದೆ.
ಇದರ ಜೊತೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಪ್ರಮುಖ ವಿಜ್ಞಾನಿಗಳು ಮತ್ತು ಭಾರತದ ಗಗನಯಾತ್ರಿಗಳು ಕೈಬರಹದಲ್ಲಿ ಬರೆದಿರುವ ವಿಶೇಷ ಪೋಸ್ಟ್ಕಾರ್ಡ್ಗಳನ್ನೂ ಈ ಮಿಷನ್ ಹೊತ್ತೊಯ್ಯಲಿದೆ. ಭಾರತೀಯ ಬಾಹ್ಯಾಕಾಶ ಪಯಣದ ಸ್ಮರಣೀಯ ಕ್ಷಣಗಳನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶ ಈ ಯೋಜನೆಯಲ್ಲಿದೆ.
‘X’ನಲ್ಲಿ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ವಿಕ್ರಮ್-1 ಉಡಾವಣೆಯನ್ನು ಭಾರತದ ಬಾಹ್ಯಾಕಾಶ ಪಯಣದ ಹೊಸ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.
“ಇದು ಭಾರತದ ಬಾಹ್ಯಾಕಾಶ ಕ್ಷೇತ್ರದ ಐತಿಹಾಸಿಕ ಘಟ್ಟ. ಭಾರತದ ಮೊದಲ ಖಾಸಗಿ ಆರ್ಬಿಟಲ್ ಉಡಾವಣಾ ನೌಕೆಯಾದ ವಿಕ್ರಮ್-1 ನಮ್ಮ ಯುವಕರ ಪ್ರತಿಭೆ, ನವೋದ್ಯಮ ಹಾಗೂ ಆತ್ಮವಿಶ್ವಾಸದ ಪ್ರತೀಕವಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸರ್ಕಾರ ಕೈಗೊಂಡಿರುವ ಸುಧಾರಣೆಗಳು ಹೊಸ ಅವಕಾಶಗಳನ್ನು ಸೃಷ್ಟಿಸಿವೆ,” ಎಂದು ಪ್ರಧಾನಿ ಹೇಳಿದ್ದಾರೆ.
ನಾಲ್ಕು ಹಂತಗಳ (Four-stage) ಈ ರಾಕೆಟ್ ವೇಗವಾದ ಹಾಗೂ ಬೇಡಿಕೆಗೆ ತಕ್ಕ ಉಪಗ್ರಹ ಉಡಾವಣಾ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಈ ಯಶಸ್ವಿ ಉಡಾವಣೆಯು ಭಾರತದಲ್ಲಿ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಹೊಸ ಉತ್ತೇಜನ ನೀಡುವ ನಿರೀಕ್ಷೆ ಇದೆ.





