ಬೆಂಗಳೂರು: ಐಪಿಎಲ್ 2026 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಭರ್ಜರಿ ಪ್ರದರ್ಶನದ ಮೂಲಕ ಪ್ಲೇಆಫ್ ಹಂತಕ್ಕೆ ಅಧಿಕೃತವಾಗಿ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಸಂದೇಶದಲ್ಲಿ ಕನ್ನಡ ಪದಗಳನ್ನು ಬಳಸಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಆರ್ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಜಯದೊಂದಿಗೆ ರಜತ್ ಪಾಟೀದಾರ್ ನೇತೃತ್ವದ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ 13 ಪಂದ್ಯಗಳಿಂದ 18 ಅಂಕಗಳನ್ನು ಪಡೆದು ಮೊದಲ ಸ್ಥಾನಕ್ಕೇರಿತು. ಈ ಸಾಧನೆಯೊಂದಿಗೆ ಪ್ಲೇಆಫ್ಗೆ ಪ್ರವೇಶ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ತಂಡದ ಈ ಶ್ರೇಷ್ಠ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಮಲ್ಯ, ಕನ್ನಡದಲ್ಲೇ ಮಾಡಿದ ಪೋಸ್ಟ್ ಅಭಿಮಾನಿಗಳ ಹೃದಯ ಗೆದ್ದಿದೆ. ಅವರು “ಆರ್ಸಿಬಿ, ಆರ್ಸಿಬಿ, ಆರ್ಸಿಬಿ ನಮ್ಮ ದೊಡ್ಡ ಸಿಂಹಗಳು… ನೀವು ನಮ್ಮನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ಬೆಂಗಳೂರಿನ ಸಿಂಹಗಳಂತೆ ಗರ್ಜಿಸಿ ಆಡಿದ್ದೀರಿ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಜೊತೆಗೆ ತಂಡಕ್ಕೆ ಅಭಿನಂದನೆ ಸಲ್ಲಿಸಿ, ಮುಂದಿನ ಹಂತದಲ್ಲೂ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
RCB, RCB, RCB namma dodda Simhagulu… you made us all soooo proud today – first team to qualify. You played BOLD and roared even louder as the Lions from Bengaluru. Well done and congratulations. Onward and Upward to the best team in the IPL.
— Vijay Mallya (@TheVijayMallya) May 17, 2026
RCB ತಂಡದ ನಾಯಕ ರಜತ್ ಪಟಿದರ್ (Rajat Patidar) ಅವರ ಸ್ಥಿರ ನಾಯಕತ್ವ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಸಮತೋಲನದ ಪ್ರದರ್ಶನ ತಂಡವನ್ನು ಯಶಸ್ಸಿನ ದಾರಿಗೆ ಕರೆದೊಯ್ದಿದೆ. ಕಳೆದ ಕೆಲ ಸೀಸನ್ಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದ RCB ಈ ಬಾರಿ ಸಂಪೂರ್ಣವಾಗಿ ಹೊಸ ಉತ್ಸಾಹದೊಂದಿಗೆ ಮೈದಾನಕ್ಕಿಳಿದಿದೆ.
ಈಗ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದರೆ, ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನು ಗಟ್ಟಿಗೊಳಿಸುವ ಅವಕಾಶ ಆರ್ಸಿಬಿಗೆ ಇದೆ. ಇದು ಪ್ಲೇಆಫ್ ಹಂತದಲ್ಲಿ ಸುಲಭ ಮಾರ್ಗ ನೀಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಐಪಿಎಲ್ ಇತಿಹಾಸದಲ್ಲಿ ಹಾಲಿ ಚಾಂಪಿಯನ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಾತ್ರ ಸತತ ಎರಡು ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿವೆ. RCB ಈ ಬಾರಿ ಟ್ರೋಫಿ ಗೆದ್ದರೆ, ಆ ವಿಶೇಷ ಪಟ್ಟಿಗೆ ಸೇರುವ ಮೂರನೇ ತಂಡವಾಗುವ ಇತಿಹಾಸ ನಿರ್ಮಾಣ ಮಾಡುವ ಸಾಧ್ಯತೆ ಇದೆ.
ಮಲ್ಯ ಅವರ ಪೋಸ್ಟ್ನಲ್ಲಿ ಬಳಸಿದ “ಬೆಂಗಳೂರಿನ ಸಿಂಹಗಳು” ಎಂಬ ಪದವು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದು, ಅಭಿಮಾನಿಗಳು ಅದನ್ನು ಮಿಮ್ಸ್ ಮತ್ತು ಸಂಭ್ರಮದ ಪೋಸ್ಟ್ಗಳಾಗಿ ಹಂಚಿಕೊಳ್ಳುತ್ತಿದ್ದಾರೆ. RCB ಅಭಿಮಾನಿ ವಲಯದಲ್ಲಿ ಈಗ “Ee Sala Cup Namde” ಘೋಷಣೆ ಮತ್ತೆ ಜೋರಾಗಿದೆ.





