ಬೆಂಗಳೂರು, ಏಪ್ರಿಲ್ 5: ಐಪಿಎಲ್ 2026 ರ 11ನೇ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಈ ಹೈವೋಲ್ಟೇಜ್ ಪಂದ್ಯದಲ್ಲಿ RCB ತನ್ನ ಅಭಿಮಾನಿಗಳ ನಿರೀಕ್ಷೆಯಂತೆ ಭರ್ಜರಿ ಗೆಲುವು ದಾಖಲಿಸಿತು. 43 ರನ್ಗಳ ಅಂತರದ ಈ ಗೆಲುವಿನೊಂದಿಗೆ RCB ಟೂರ್ನಿಯಲ್ಲಿ ತನ್ನ ಎರಡನೇ ಜಯವನ್ನು ಸಾಧಿಸಿದೆ. CSK ಮೂರನೇ ಸತತ ಸೋಲಿನ ಕಹಿ ಅನುಭವಿಸಿತು.
ಟಾಸ್ ಮತ್ತು ಆರಂಭಿಕ ಹಂತ
CSK ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಚಿನ್ನಸ್ವಾಮಿಯಲ್ಲಿ ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲವಿದ್ದರೂ, ಗಾಯಕ್ವಾಡ್ ಅವರು ಪ್ರತಿಸ್ಪರ್ಧಿಯನ್ನು ಒತ್ತಡಕ್ಕೆ ಸಿಲುಕಿಸುವ ಉದ್ದೇಶದಿಂದ ಬೌಲಿಂಗ್ ನಿರ್ಧರಿಸಿದ್ದರು. ಆದರೆ ಆರ್ಸಿಬಿ ಆರಂಭಿಕರು ಈ ತಂತ್ರವನ್ನು ಸಂಪೂರ್ಣವಾಗಿ ವಿಫಲಗೊಳಿಸಿದರು.
CSK ಬ್ಯಾಟಿಂಗ್ ಕುಸಿತ
ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಸಿಎಸ್ಕೆಗೆ 250 ರನ್ ಗುರಿ ನೀಡಿದ್ದ RCB.. 10 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದ CSK, 30 ರನ್ ಗಳಿಸುವಷ್ಟರಲ್ಲಿ ಸಂಜು ಸ್ಯಾಮ್ಸನ್ ಕೂಡ ಪೆವಿಲಿಯನ್ ಸೇರಿದ್ದರು. ಇದಾದ ಬಳಿಕ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸರ್ಫರಾಜ್ ಖಾನ್ ಕೇವಲ 24 ಎಸೆತಗಳಲ್ಲಿ ಮತ್ತೊಂದು ಆಕರ್ಷಕ ಅರ್ಧಶತಕ (50 ರನ್) ಸಿಡಿಸಿ ಚೆನ್ನೈ ಪಾಳಯದಲ್ಲಿ ಕೊಂಚ ಗೆಲುವಿನ ಆಸೆ ಮೂಡಿಸಿದರು. ಆದರೆ ಕೃನಾಲ್ ಪಾಂಡ್ಯ ಒಂದೇ ಓವರ್ನಲ್ಲಿ ಸರ್ಫರಾಜ್ ಖಾನ್ ಹಾಗೂ ಕಾರ್ತಿಕ್ ಶರ್ಮಾ ವಿಕೆಟ್ ಕಬಳಿಸಿ CSK ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ನಂತರ CSK ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಶಿವಂ ದುಬೆ (18), ಯುವ ಕ್ರಿಕೆಟಿಗ ಪ್ರಶಾಂತ್ ವೀರ್ (43) ಹಾಗೂ ಜೇಮಿ ಓವರ್ಟನ್ (37) ರನ್ ಸಿಡಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಅಂತಿಮವಾಗಿ CSK 20 ಓವರ್ಗಳಲ್ಲಿ 207/8 ರನ್ ಗಳಿಸಿ 43 ರನ್ಗಳ ಸೋಲು ಅನುಭವಿಸಿತು.
ಭುವನೇಶ್ವರ್ ಕುಮಾರ್ ಅಪರೂಪದ ದಾಖಲೆ
RCB ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಯುವ ಕ್ರಿಕೆಟಿಗ ಆಯುಷ್ ಮ್ಹಾತ್ರೆ ಅವರನ್ನು ಕೇವಲ ಒಂದು ರನ್ಗೆ ಔಟ್ ಮಾಡುವ ಮೂಲಕ ಐಪಿಎಲ್ನಲ್ಲಿ ತಮ್ಮ 200ನೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಕಬಳಿಸಿದ ಮೊದಲ ವೇಗಿ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಒಟ್ಟಾರೆ ಎರಡನೇ ಬೌಲರ್ (ಸ್ಪಿನ್ನರ್ ಯಜುವೇಂದ್ರ ಚಹಲ್ ನಂತರ) ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
RCB ಸ್ಫೋಟಕ ಬ್ಯಾಟಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ RCB ಮೊದಲ ಮೂರು ಓವರ್ಗಳಲ್ಲಿ ಎಚ್ಚರಿಕೆಯ ಆರಂಭ ಪಡೆಯಿತು. ವಿರಾಟ್ ಕೊಹ್ಲಿ 18 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 28 ರನ್ ಗಳಿಸಿ ಅಂಶುಲ್ ಕಾಂಬೋಜ್ ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ದೇವದತ್ ಪಡಿಕ್ಕಲ್ ಹಾಗೂ ಫಿಲ್ ಸಾಲ್ಟ್ ಜೋಡಿ ಎರಡನೇ ವಿಕೆಟ್ಗೆ ಕೇವಲ 37 ಎಸೆತಗಳಲ್ಲಿ 56 ರನ್ ಸಿಡಿಸಿತು. ಸಾಲ್ಟ್ 30 ಎಸೆತಗಳಲ್ಲಿ 46 ರನ್ ಸಿಡಿಸಿ ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು.
ಪಡಿಕ್ಕಲ್ ಸತತ ಎರಡನೇ ಅರ್ಧಶತಕ
ಕೊಹ್ಲಿ ವಿಕೆಟ್ ಪತನದ ಬಳಿಕ ಕ್ರೀಸ್ಗಿಳಿದ ದೇವದತ್ ಪಡಿಕ್ಕಲ್ ಆರಂಭದಲ್ಲಿ ತಡಬಡಾಯಿಸಿದರೂ, ಪಿಚ್ಗೆ ಹೊಂದಿಕೊಂಡ ಬಳಿಕ ಮಿಂಚಿದರು. ಸನ್ರೈಸರ್ಸ್ ಎದುರು ಕೇವಲ 26 ಎಸೆತಗಳಲ್ಲಿ 61 ರನ್ ಸಿಡಿಸಿದ್ದ ಪಡಿಕ್ಕಲ್, ಇದೀಗ CSK ಎದುರು 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಚಚ್ಚಿದರು. ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಬಾರಿಸಿದ ಅವರು ಜೇಮಿ ಓವರ್ಟನ್ಗೆ ವಿಕೆಟ್ ಒಪ್ಪಿಸಿದರು.
ಪಾಟೀದಾರ್-ಟಿಮ್ ಡೇವಿಡ್ ಗುಡುಗು
ದೇವದತ್ ಪಡಿಕ್ಕಲ್ ವಿಕೆಟ್ ಪತನದ ಬಳಿಕ ಜತೆಯಾದ ಟಿಮ್ ಡೇವಿಡ್ ಹಾಗೂ ರಜತ್ ಪಾಟೀದಾರ್ CSK ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 35 ಎಸೆತಗಳಲ್ಲಿ ಈ ಜೋಡಿ 99 ರನ್ಗಳ ಜತೆಯಾಟವಾಡಿತು. ನಾಯಕ ರಜತ್ ಪಾಟೀದಾರ್ 19 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 48 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್ಗಳ ನೆರವಿನಿಂದ ಅಜೇಯ 70 ರನ್ ಸಿಡಿಸಿದರು. ಇದರೊಂದಿಗೆ RCB 3 ವಿಕೆಟ್ ನಷ್ಟಕ್ಕೆ 250 ರನ್ ಕಲೆಹಾಕಿತು.





