ವಿಶ್ವ ಕಪ್‌ ಗೆದ್ದ ಭಾರತ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆ

Untitled design 2026 03 08T232359.767

ನವದೆಹಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಮೆಚ್ಚುಗೆ

ವಿಶ್ವಕಪ್ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಚಾಂಪಿಯನ್ಸ್ ಭಾರತ ತಂಡಕ್ಕೆ ಅಭಿನಂದನೆಗಳು! ಈ ಗಮನಾರ್ಹ ಗೆಲುವು ಅಸಾಧಾರಣ ಕೌಶಲ್ಯ ಮತ್ತು ಸಂಘಟಿತ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಟೂರ್ನಿಯುದ್ದಕ್ಕೂ ನಮ್ಮ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಗೆಲುವು ಪ್ರತಿಯೊಬ್ಬ ಭಾರತೀಯನಿಗೂ ಅಪಾರ ಹೆಮ್ಮೆ ಮತ್ತು ಸಂತೋಷವನ್ನು ತಂದಿದೆ ಎಂದು ಅವರು ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಭಾರತವು ತವರಿನ ಮಣ್ಣಿನಲ್ಲಿಯೇ ಈ ಸಾಧನೆ ಮಾಡಿರುವುದು ಗೆಲುವಿನ ಸಂಭ್ರಮವನ್ನು ಹೆಚ್ಚಿಸಿದೆ ಎಂದು ಮೋದಿ ಶ್ಲಾಘಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿನಂದನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಭಾರತ ತಂಡದ ಐತಿಹಾಸಿಕ ಮೈಲಿಗಲ್ಲನ್ನು ಕೊಂಡಾಡಿದ್ದಾರೆ. ಸತತ ಎರಡು ಬಾರಿ ಮತ್ತು ಒಟ್ಟಾರೆ ಮೂರು ಬಾರಿ ಟಿ20 ವಿಶ್ವಕಪ್ ಗೆದ್ದ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿರುವುದು ಅದ್ಭುತ ಸಾಧನೆ. ಇದು ನಮ್ಮ ದೇಶದ ಕ್ರಿಕೆಟ್ ಪ್ರಿಯರಿಗೆ ಅಪಾರ ಹೆಮ್ಮೆಯನ್ನು ತರುತ್ತದೆ. ಟೀಮ್ ಇಂಡಿಯಾದ ಈ ವಿಜಯಯಾತ್ರೆ ಮುಂದುವರಿಯಲಿ ಎಂದು ಅವರು ಶುಭ ಹಾರೈಸಿದ್ದಾರೆ.

ಭಾರತವು ಈ ಪ್ರಶಸ್ತಿಯೊಂದಿಗೆ ವಿಶ್ವದ ಯಾವುದೇ ತಂಡ ಮಾಡದ ಸಾಧನೆಗಳನ್ನು ಮಾಡಿದೆ. ಸತತ ಎರಡು ಬಾರಿ ವಿಶ್ವಕಪ್ ಗೆದ್ದ (2024 ಮತ್ತು 2026) ಮೊದಲ ತಂಡವಾಗಿ ಹೊರಹೊಮ್ಮಿದೆ. ಅಲ್ಲದೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಚಾಂಪಿಯನ್ ಆದ ಮೊದಲ ದೇಶ ಎಂಬ ಕೀರ್ತಿಗೂ ಭಾಜನವಾಗಿದೆ. ಅಹಮದಾಬಾದ್ ಮೈದಾನದಲ್ಲಿ ನಡೆದ ಈ ರೋಚಕ ಹೋರಾಟದಲ್ಲಿ ಸಂಜು ಸ್ಯಾಮ್ಸನ್ ಅವರ ಅಬ್ಬರ ಮತ್ತು ಬೌಲರ್‌ಗಳ ಶಿಸ್ತಿನ ದಾಳಿ ಭಾರತಕ್ಕೆ ಈ ಸ್ಮರಣೀಯ ಗೆಲುವು ತಂದುಕೊಟ್ಟಿದೆ.

Exit mobile version