ಮಹಮ್ಮದ್ ಶಮಿ. ಭಾರತ ದೇಶದ ಪರ್ಫೆಕ್ಟ್ ಫಾಸ್ಟ್ ಬೌಲರ್. ಅಂಗೈ ಮಧ್ಯದಲ್ಲೇ ಬಾಲ್ಗೆ ಸ್ವಿಂಗ್ ಕೊಡೋ ಶಮಿ, ಅದಕ್ಕೊಂದು ವೇಗ ಕೊಡ್ತಾರೆ. ಗಾಳಿಯಲ್ಲೇ ಸ್ವಿಂಗ್ ಮಾಡ್ತಾರೆ. ಬಾಲ್ ಇನ್ ಸ್ವಿಂಗ್ ಆಗುತ್ತೋ.. ಔಟ್ ಸ್ವಿಂಗ್ ಆಗುತ್ತೋ.. ಸ್ಟೈಟ್ ಆಗಿ ನುಗ್ಗಿ ವಿಕೆಟ್ಟಿಗೆ ಹೊಡೆಯುತ್ತೋ.. ಅಷ್ಟು ಸುಲಭವಾಗಿ ಗೊತ್ತಾಗಲ್ಲ. ಮಹಮ್ಮದ್ ಶಮಿ ತಮ್ಮ ವೇಗದ ಬೌಲಿಂಗಿನಲ್ಲೇ ಎಷ್ಟೋ ಮ್ಯಾಚುಗಳನ್ನ ಗೆಲ್ಲಿಸಿದ್ದಾರೆ. ಅಂತಹ ಶಮಿಗೆ ಕಾಂಟ್ರವರ್ಸಿಗಳೂ ಹೊಸದೇನಲ್ಲ.
ಶಮಿ, ಕಟ್ಟರ್ ಮೂಲಭೂತವಾದಿ ಮುಸ್ಲಿಂ ಅಲ್ಲ. ಅವರ ಮನೆಯಲ್ಲಿ ವಿಜಯದಶಮಿಯೂ ನಡೆಯುತ್ತೆ. ದೀಪಾವಳಿಯೂ ನಡೆಯುತ್ತೆ. ದುರ್ಗಾ ಪೂಜೆಯೂ ನಡೆಯುತ್ತೆ. ಈಗ ಇದೇ ಶಮಿ, ರಂಜಾನ್ ಸಮಯದಲ್ಲಿ ಉಪವಾಸ ಮಾಡಲಿಲ್ಲ ಅನ್ನೋ ಕಾರಣಕ್ಕೆ ಮುಸ್ಲಿಂ ಮೂಲಭೂತವಾದಿಗಳ ಟೀಕೆಗೆ ಗುರಿಯಾಗಿದ್ಧಾರೆ.
ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಶಮಿ, ಎನರ್ಜಿ ಡ್ರಿಂಕ್ ಕುಡಿಯೋ ವಿಡಿಯೋ ವೈರಲ್ ಆಗಿದ್ದೇ ತಡ, ಕೆಲವೊಂದಿಷ್ಟು ಜನ ಮೂಲಭೂತವಾದಿಗಳು ರೋಜಾ ಅಂದ್ರೆ ರಂಜಾನ್ ಉಪವಾಸ ಮಾಡದ ಮಹಮ್ಮದ್ ಶಮಿ ವಿರುದ್ಧ ಕೆಂಡಕಾರಿದ್ದಾರೆ. ಆಲ್ ಇಂಡಿಯಾ ಮುಸ್ಲಿಂ ಜಮಾತ್ನ ಅಧ್ಯಕ್ಷ ಮೌಲಾನಾ ಶಹಬಾದ್ದೀನ್ ರಜ್ವಿ ಮಹಮ್ಮದ್ ಶಮಿಯನ್ನು ಕ್ರಿಮಿನಲ್ ಎಂದು ಕರೆದಿದ್ಧಾರೆ.
ಶರಿಯಾ ಕಾನೂನಿನ ಪ್ರಕಾರ, ಶಮಿ ಕ್ರಿಮಿನಲ್. ಆತ ಆಡ್ತಾ ಇದ್ದಾನೆ ಅಂದ್ರೆ ಆರೋಗ್ಯವಾಗಿದ್ದಾನೆ ಎಂದರ್ಥ. ಆರೋಗ್ಯವಾಗಿದ್ದರೂ ರೋಜಾ ಅಂದ್ರೆ ಉಪವಾಸ ಮಾಡದೇ ಇರೋದು ಅಪರಾಧ. ಕೋಟ್ಯಂತರ ಜನ ಆತನ ಆಟವನ್ನ ನೋಡ್ತಾ ಇರ್ತಾರೆ. ಇದು ತಪ್ಪು ಸಂದೇಶ ಕೊಡ್ತಾ ಇದೆ. ಶಮಿ, ಅಲ್ಲಾಗೆ ಉತ್ತರ ಕೊಡಬೇಕು ಅಂತೆಲ್ಲ ಹೇಳಿದ್ಧಾರೆ.
ಶಮಿ, ಹೀಗೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗ್ತಾ ಇರೋದು ಇದೇ ಮೊದಲೇನೂ ಅಲ್ಲ. ನಾನು ಮೊದಲು ಭಾರತೀಯ, ಆಮೇಲೆ ಮುಸ್ಲಿಂ ಎಂಬ ಹೇಳಿಕೆ ನೀಡಿದ್ದಾಗ, ನನಗೆ ನನ್ನ ಧರ್ಮಕ್ಕಿಂತ, ಭಾರತದ ಜೆರ್ಸಿ ತೊಟ್ಟು ಆಡುವುದೇ ಹೆಮ್ಮೆ ಎಂದಾಗ ಕೂಡಾ ಒಂದಷ್ಟು ಮತಾಂಧರ ಕೆಂಗಣ್ಣು ಬಿದ್ದಿತ್ತು.
ಅಷ್ಟೇ ಅಲ್ಲ, ಶಮಿ ಕೇವಲ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗಷ್ಟೇ ಗುರಿಯಾಗಿಲ್ಲ. 2022ರ ಟಿ-20 ವಿಶ್ವಕಪ್ ಮ್ಯಾಚಿನಲ್ಲಿ, ಪಾಕಿಸ್ತಾನ ಭಾರತ ವಿರುದ್ಧ ಸೋತಿತ್ತು. ಆಗ ಎಲ್ಲರನ್ನೂ ಬಿಟ್ಟು, ಶಮಿಯನ್ನು ಹಿಂದೂ ಮೂಲಭೂತವಾದಿಗಳು ಟೀಕೆಗೆ ಗುರಿ ಮಾಡಿದ್ದರು. ಇನ್ನಿಲ್ಲದಂತೆ ಕಾಡಿದ್ದರು. ಆಗ ಶಮಿಯ ನೆರವಿಗೆ ಮೊದಲಿಗೆ ಧಾವಿಸಿ ಬಂದಿದ್ದವರು ಸಚಿನ್ ತೆಂಡೂಲ್ಕರ್. ಯಾವಾಗ ತೆಂಡೂಲ್ಕರ್ ಶಮಿಯ ಸಪೋರ್ಟಿಗೆ ಬಂದರೋ, ಆನಂತರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಯುವರಾಜ್ ಸಿಂಗ್, ಸೆಹ್ವಾಗ್, ಸೌರವ್ ಗಂಗೂಲಿಯಂತಹ ದಿಗ್ಗಜರೂ ಶಮಿಯ ಬೆನ್ನಿಗೆ ನಿಂತರು. ಆನಂತರ ಶಮಿಯ ವಿರುದ್ಧ ಆಕ್ರೋಶ ತಣ್ಣಗಾಗಿತ್ತು.
ಇನ್ನು ಶಮಿ.. ವಿಜಯದಶಮಿ ವೇಳೆ ಮನೆಯಲ್ಲಿ ಪೂಜೆ ಮಾಡಿಸಿದಾಗ, ದೀಪಾವಳಿ ಆಚರಣೆ ಮಾಡಿದಾಗಲೂ ಒಂದಿಷ್ಟು ಮೂಲಭೂತವಾದಿಗಳು ಕೆಂಡ ಕಾರಿದ್ದರು. ಈಗ ನೋಡಿದರೆ, ಇನ್ನೊಂದು ರೀತಿಯಲ್ಲಿ ಟಾರ್ಗೆಟ್ ಆಗಿದ್ದಾರೆ. ಆದರೆ ಶಮಿಯ ಕೋಚ್ ಬದ್ರುದ್ದೀನ್ ಸಿದ್ದಿಖಿ ಹೇಳೋದೇ ಬೇರೆ. ನಾನೂ ಕೂಡಾ ಕ್ರಿಕೆಟ್ ಮ್ಯಾಚ್ ಇದ್ದಾಗ ರಂಜಾನ್ ಉಪವಾಸ ತಪ್ಪಿಸಿದ್ದೇನೆ. ದೇಶಕ್ಕಾಗಿ ಆಡುವಾಗ ದೇಶವೇ ಮೊದಲು ಎಂದಿದ್ದಾರೆ.
ಶಮಿ, ರಂಜಾನ್ ಉಪವಾಸ ಮಾಡ್ತಿಲ್ಲ. ರಂಜಾನ್ ರೋಜಾ ಮಾಡಿಕೊಂಡೇ ತ್ರಿಬಲ್ ಸೆಂಚುರಿ ಹೊಡೆದಿದ್ದ ದ.ಆಫ್ರಿಕಾ ಆಟಗಾರ ಹಶೀಂ ಆಮ್ಲಾ ನೋಡಿ ಕಲಿತುಕೊಳ್ಳಿ ಎಂದು ಪಾಠ ಮಾಡಿದ್ಧಾರೆ. ಶಮಿಯ ಬೆನ್ನಿಗೆ ನಿಂತಿರುವ ಹಿಂದೂಗಳು.. ಶಮಿಯ ಮೇಲೆ ನಂಬಿಕೆಯನ್ನು ಹೇರಬೇಡಿ. ಧರ್ಮಾಂಧತೆಯಿಂದ ದೂರ ಇರಿ. ಶಮಿ ಲವ್ಸ್ ಇಂಡಿಯಾ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಶಮಿಯ ಪರ ನಿಂತಿದ್ಧಾರೆ. ದೇಶಕ್ಕಾಗಿ, ದೇಶವನ್ನು ಗೆಲ್ಲಿಸುವುದಕ್ಕಾಗಿ ರಂಜಾನ್ ಉಪವಾಸವನ್ನೇ ಕೈಬಿಟ್ಟ ಶಮಿ ಎಂದೆಲ್ಲ ಕಮೆಂಟ್ ಮಾಡ್ತಿದ್ದಾರೆ. ಶಮಿಯ ಸಂಕಟ ಮಾತ್ರ.. ಯಾರಿಗೂ ಆಗಬಾರದು.