ನವದೆಹಲಿ: ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ಬಹುನಿರೀಕ್ಷಿತ ‘GOAT ಇಂಡಿಯಾ ಟೂರ್ 2025’ನ ಅಂತಿಮ ಹಂತವಾದ ದೆಹಲಿ ಆಗಮನಕ್ಕೆ ದಟ್ಟ ಮಂಜು ಅಡ್ಡಿಯಾಗಿದೆ. ಮುಂಬೈನಿಂದ ಚಾರ್ಟರ್ ವಿಮಾನದಲ್ಲಿ ರಾಷ್ಟ್ರ ರಾಜಧಾನಿಗೆ ಬರುತ್ತಿದ್ದ ಮೆಸ್ಸಿ ಅವರ ವಿಮಾನವು ದೆಹಲಿಯ ಹವಾಮಾನದಿಂದ ವಿಳಂಬವಾಗಿದೆ. ಡಿಸೆಂಬರ್ 15ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ (ಹಿಂದಿನ ಫಿರೋಜ್ ಶಾ ಕೋಟ್ಲಾ) ನಡೆಯಬೇಕಿದ್ದ ಟಿಕೆಟ್ ಆಧಾರಿತ ಕಾರ್ಯಕ್ರಮಕ್ಕೆ ಮೆಸ್ಸಿ ಆಗಮಿಸುವುದು ತಡವಾಗಿದ್ದು, ಅಭಿಮಾನಿಗಳು ಆತುರದಿಂದ ಕಾಯುತ್ತಿದ್ದಾರೆ.
ಮೆಸ್ಸಿ ಅವರು ತಮ್ಮ ಇಂಟರ್ ಮಿಯಾಮಿ ತಂಡದ ಸಹ ಆಟಗಾರರಾದ ಲುಯಿಸ್ ಸುವಾರೆಜ್ ಮತ್ತು ರೋಡ್ರಿಗೋ ಡಿ ಪಾಲ್ ಜೊತೆಗೆ ಈ ಮೂರು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿದ್ದಾರೆ. ಪ್ರವಾಸದ ಮೊದಲ ದಿನವಾದ ಡಿಸೆಂಬರ್ 13ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆರಂಭವಾದ ಕಾರ್ಯಕ್ರಮ ದುರದೃಷ್ಟಕರವಾಗಿ ಅಸ್ತವ್ಯಸ್ತಗೊಂಡಿತ್ತು. ಮೆಸ್ಸಿ ಅವರ ಕೇವಲ 20-30 ನಿಮಿಷಗಳ ಉಪಸ್ಥಿತಿಯಿಂದ ಅಸಮಾಧಾನಗೊಂಡ ಅಭಿಮಾನಿಗಳು ಕುಳಿತುಕೊಳ್ಳುವ ಆಸನಗಳನ್ನು ಹರಿದು, ಬಾಟಲ್ಗಳನ್ನು ಎಸೆದು, ಪಿಚ್ಗೆ ನುಗ್ಗಿ ಗಲಾಭೆ ಸೃಷ್ಟಿಸಿದರು. ರಾಜಕಾರಣಿಗಳು ಮತ್ತು ವಿಐಪಿಗಳ ಉಪಸ್ಥಿತಿಯಿಂದ ಸಾಮಾನ್ಯ ಅಭಿಮಾನಿಗಳು ಮೆಸ್ಸಿಯನ್ನು ಸರಿಯಾಗಿ ನೋಡಲಾಗದೇ ಇದ್ದದ್ದು ಈ ಗಲಭೆಗೆ ಕಾರಣವಾಯಿತು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೆಸ್ಸಿ ಮತ್ತು ಅಭಿಮಾನಿಗಳಿಗೆ ಕ್ಷಮೆಯಾಚಿಸಿ, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಆದರೆ ಪ್ರವಾಸದ ಎರಡನೇ ದಿನ ಮುಂಬೈಯಲ್ಲಿ ಸಂಪೂರ್ಣ ಯಶಸ್ವಿಯಾಯಿತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆಸ್ಸಿ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿ ಇಬ್ಬರೂ ಜರ್ಸಿಗಳನ್ನು ವಿನಿಮಯ ಮಾಡಿಕೊಂಡರು. ಸಚಿನ್ ಅವರು ಮೆಸ್ಸಿಗೆ ಸಹಿ ಹಾಕಿದ ಭಾರತೀಯ ಜರ್ಸಿಯನ್ನು ನೀಡಿದರೆ, ಮೆಸ್ಸಿ ಅವರು ಫುಟ್ಬಾಲ್ ನೀಡಿದರು. ಭಾರತೀಯ ಫುಟ್ಬಾಲ್ ದಿಗ್ಗಜ ಸುನಿಲ್ ಛೆತ್ರಿ ಅವರೊಂದಿಗೂ ಮೆಸ್ಸಿ ಸಂವಾದ ನಡೆಸಿದರು. ಬಾಲಿವುಡ್ ತಾರೆಯರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಫುಟ್ಬಾಲ್ ತರಬೇತಿ ನೀಡಿದರು.
ಹೈದರಾಬಾದ್ನಲ್ಲೂ ಮೆಸ್ಸಿ ಅವರು ಮಕ್ಕಳೊಂದಿಗೆ ಫುಟ್ಬಾಲ್ ಕ್ಲಿನಿಕ್ ನಡೆಸಿ, ಅಭಿಮಾನಿಗಳನ್ನು ರಂಜಿಸಿದರು. ಈ ಪ್ರವಾಸದಲ್ಲಿ ಮೆಸ್ಸಿ ಅವರು ಯುವ ಫುಟ್ಬಾಲ್ಗಳನ್ನು ಪ್ರೋತ್ಸಾಹಿಸುವುದು ಮತ್ತು ದಾನ ಕಾರ್ಯಗಳು ಮುಖ್ಯ ಉದ್ದೇಶವಾಗಿದೆ. ದೆಹಲಿಯಲ್ಲಿ ನಡೆಯಲಿರುವ ಅಂತಿಮ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಭಾರತೀಯ ಕ್ರಿಕೆಟರ್ಗಳು ಭಾಗಿಯಾಗುವ ನಿರೀಕ್ಷೆಯಿದೆ. ಆದರೆ ಉತ್ತರ ಭಾರತದ ದಟ್ಟ ಮಂಜಿನಿಂದಾಗಿ ವಿಮಾನಗಳು ವಿಳಂಬವಾಗುತ್ತಿರುವುದು ಮೆಸ್ಸಿ ಅವರ ಆಗಮನಕ್ಕೂ ಅಡ್ಡಿಯಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಮೆಸ್ಸಿ ಶೀಘ್ರದಲ್ಲೇ ದೆಹಲಿಗೆ ತಲುಪುವ ನಿರೀಕ್ಷೆಯಿದೆ.





