ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಫೆಬ್ರವರಿ 4ರಂದು ನಡೆದ ಅಂಡರ್-19 ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಯುವ ತಂಡ ಅಸಾಧಾರಣ ಪ್ರದರ್ಶನ ನೀಡುವ ಮೂಲಕ ಪ್ರಪಂಚದ ಗಮನ ಸೆಳೆದಿದೆ. ಬಲಿಷ್ಠ ಅಫ್ಘಾನಿಸ್ತಾನ ತಂಡ ನೀಡಿದ್ದ 311 ರನ್ಗಳ ಕಠಿಣ ಗುರಿಯನ್ನು ಕೇವಲ 41.1 ಓವರ್ಗಳಲ್ಲಿ ಚೇಸ್ ಮಾಡಿದ ಭಾರತ, 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಸತತ ಆರನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು. ಆರಂಭಿಕ ಬ್ಯಾಟ್ಸ್ಮನ್ಗಳಾದ ಒಸ್ಮಾನ್ ಸಾದತ್ ಮತ್ತು ಖಲೀದ್ ಅಹ್ಮದ್ಝ ತಂಡಕ್ಕೆ ಸ್ಥಿರ ಆರಂಭ ಒದಗಿಸಿದರು. ಒಸ್ಮಾನ್ ಸಾದತ್ 39 ರನ್ ಗಳಿಸಿದರೆ, ಖಲೀದ್ ಅಹ್ಮದ್ಝ 31 ರನ್ ಗಳಿಸಿ ಉತ್ತಮ ವೇದಿಕೆ ನಿರ್ಮಿಸಿದರು.
ಆ ನಂತರ ಮೂರನೇ ವಿಕೆಟ್ಗೆ ಕಣಕ್ಕಿಳಿದ ಫೈಸಲ್ ಶಿನೊಜಾದಾ ಮತ್ತು ಉಜೈರುಲ್ಲಾ ನಿಯಾಜಿ ಅಫ್ಘಾನಿಸ್ತಾನದ ಇನ್ನಿಂಗ್ಸ್ಗೆ ಬಲ ತುಂಬಿದರು. ಈ ಜೋಡಿ ಶತಕದ ಜತೆಯಾಟವಾಡಿ ಭಾರತೀಯ ಬೌಲರ್ಗಳಿಗೆ ದೊಡ್ಡ ಸವಾಲು ಎಸೆದರು. ಫೈಸಲ್ ಶಿನೊಜಾದಾ 110 ರನ್ಗಳ ಆಕರ್ಷಕ ಶತಕ ಬಾರಿಸಿದರೆ, ಉಜೈರುಲ್ಲಾ ನಿಯಾಜಿ 101 ರನ್ಗಳ ಅಜೇಯ ಶತಕದೊಂದಿಗೆ ಕ್ರೀಸ್ನಲ್ಲಿ ಉಳಿದರು. ಇನ್ನುಳಿದಂತೆ ಅಝೀಝುಲ್ಲಾ ಮಿಯಾಖಿಲ್ 12 ರನ್ ಮತ್ತು ಅಬ್ದುಲ್ ಅಜೀಜ್ 7 ರನ್ ಗಳಿಸಿದರು. ಭಾರತದ ಪರ ದೀಪೇಶ್ ದೇವೇಂದ್ರನ್ ಮತ್ತು ಕನಿಷ್ಕ ಚೌಹಾಣ್ ತಲಾ ಎರಡು ವಿಕೆಟ್ ಪಡೆದು ಗಮನಸೆಳೆದರು.
311 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಇನ್ನಿಂಗ್ಸ್ನಲ್ಲಿ ಯುವ ಆಟಗಾರರ ಆತ್ಮವಿಶ್ವಾಸ ಮತ್ತು ಆಕ್ರಮಣಕಾರಿ ಆಟ ಸ್ಪಷ್ಟವಾಗಿ ಕಾಣಿಸಿತು. ಆರಂಭಿಕರಾಗಿ ಕಣಕ್ಕಿಳಿದ ಆರನ್ ಜಾರ್ಜ್ ಮತ್ತು ವೈಭವ್ ಸೂರ್ಯವಂಶಿ ಮೊದಲ ವಿಕೆಟ್ಗೆ 90 ರನ್ಗಳ ಜತೆಯಾಟವಾಡಿ ತಂಡಕ್ಕೆ ಪರಿಪೂರ್ಣ ಆರಂಭ ನೀಡಿದರು. ವಿಶೇಷವಾಗಿ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿತು. ಅವರು ಕೇವಲ 33 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ಗಳೊಂದಿಗೆ 68 ರನ್ ಗಳಿಸಿ ವೇಗದ ಇನ್ನಿಂಗ್ಸ್ ಆಡಿದರು.
ವೈಭವ್ ಔಟ್ ಆದ ಬಳಿಕ ನಾಯಕ ಆಯುಷ್ ಮ್ಯಾತ್ರೆ ಮತ್ತು ಆರನ್ ಜಾರ್ಜ್ ಎರಡನೇ ವಿಕೆಟ್ಗೆ 114 ರನ್ಗಳ ಜತೆಯಾಟವಾಡಿದರು. ಆಯುಷ್ ಮ್ಯಾತ್ರೆ 62 ರನ್ ಗಳಿಸಿ ನಾಯಕತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರೆ, ಆರನ್ ಜಾರ್ಜ್ ಶತಕದ ಮಿಂಚು ಹರಿಸಿದರು. 115 ರನ್ ಗಳಿಸಿದ ಆರನ್ ಜಾರ್ಜ್ ಅವರ ಶಾಂತ ಹಾಗೂ ನಿಯಂತ್ರಿತ ಬ್ಯಾಟಿಂಗ್ ಭಾರತದ ಗೆಲುವಿಗೆ ಕೀಲಕವಾಯಿತು.
ಅಂತಿಮ ಹಂತದಲ್ಲಿ ವಿಹಾನ್ ಮಲ್ಲೊತ್ರ 38 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರೆ, ವೇದಾಂತ್ ತ್ರಿವೇದಿ 5 ರನ್ಗಳೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಫ್ಘಾನಿಸ್ತಾನದ ಪರ ನೂರಿಸ್ತಾನಿ ಒಮರ್ಝ ಎರಡು ವಿಕೆಟ್ ಹಾಗೂ ವಾಹಿದುಲ್ಲಾ ಝರ್ದಾನ್ ಒಂದು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಭಾರತ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಫೈನಲ್ ಪಂದ್ಯ ಫೆಬ್ರವರಿ 6ರಂದು ಹರಾರೆಯಲ್ಲಿ ನಡೆಯಲಿದ್ದು, ಮತ್ತೊಮ್ಮೆ ಕಪ್ ಎತ್ತುವ ಕನಸಿನತ್ತ ಟೀಂ ಇಂಡಿಯಾ ಯುವ ಪಡೆ ಹೆಜ್ಜೆ ಹಾಕಿದೆ.





