ಭಗವದ್ಗೀತೆ ಹಾಗೂ ನಾಟ್ಯಶಾಸ್ತ್ರವನ್ನು ಯುನೆಸ್ಕೋ ಸಂಸ್ಥೆಯ ಮೆಮೊರಿ ಆಫ್ ದಿ ವರ್ಲ್ಡ್ (Memory of the World) ರಿಜಿಸ್ಟರ್ನಲ್ಲಿ ಸೇರ್ಪಡೆ ಮಾಡಲಾಗಿದೆ. ಇದು ಭಾರತೀಯ ಸಾಂಸ್ಕೃತಿಕ ಶ್ರೇಷ್ಠತೆಗೆ ಜಾಗತಿಕ ಮಟ್ಟದಲ್ಲಿ ದೊರಕಿದ ಗೌರವವಾಗಿದೆ.
ಈ ಸಾಧನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, “ವಿಶ್ವದಾದ್ಯಂತ ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ. ಯುನೆಸ್ಕೋದ ಮೆಮೊರಿ ಆಫ್ ದಿ ವರ್ಲ್ಡ್ ರಿಜಿಸ್ಟರ್ನಲ್ಲಿ ಗೀತೆ ಮತ್ತು ನಾಟ್ಯಶಾಸ್ತ್ರವನ್ನು ಸೇರಿಸಿರುವುದು, ನಮ್ಮ ಕಾಲಾತೀತ ಬುದ್ಧಿವಂತಿಕೆ ಮತ್ತು ಶ್ರೀಮಂತ ಸಂಸ್ಕೃತಿಯ ಜಾಗತಿಕ ಮನ್ನಣೆಯಾಗಿದೆ. ಗೀತೆ ಮತ್ತು ನಾಟ್ಯಶಾಸ್ತ್ರವು ಶತಮಾನಗಳಿಂದ ನಾಗರಿಕತೆಯನ್ನು ಪೋಷಿಸುತ್ತಿವೆ. ಇವುಗಳ ಒಳನೋಟಗಳು ಇಂದಿಗೂ ಜಗತ್ತಿಗೆ ಸ್ಫೂರ್ತಿ ನೀಡುತ್ತಲೇ ಇವೆ” ಎಂದು ಹೇಳಿದ್ದಾರೆ.
ಭಗವದ್ಗೀತೆ
ಭಗವದ್ಗೀತೆ, ಮಹಾಭಾರತದ ಭಾಗವಾಗಿ ಬರುವ, ಭಗವಾನ್ ಶ್ರೀಕೃಷ್ಣ ಮತ್ತು ಅರ್ಜುನರ ನಡುವೆ ನಡೆದ ಪವಿತ್ರ ಸಂವಾದವಾಗಿದೆ. ಇದು ಕೇವಲ ಧಾರ್ಮಿಕ ಗ್ರಂಥವಲ್ಲ, ಅದರಲ್ಲಿರುವ ತತ್ತ್ವಚಿಂತನೆ, ನೈತಿಕತೆ, ಧರ್ಮ ಮತ್ತು ಕರ್ತವ್ಯಗಳ ಬಗ್ಗೆ ನೀಡಿರುವ ಮಾರ್ಗದರ್ಶನ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ಭಗವದ್ಗೀತೆ ವಿವಿಧ ಭಾಷೆಗಳಿಗೆ ಅನುವಾದವಾಗಿರುವುದರ ಜೊತೆಗೆ ಜಗತ್ತಿನ ಹಲವಾರು ತತ್ತ್ವಜ್ಞಾನಿಗಳು, ಚಿಂತಕರು ಇದರ ಪ್ರಭಾವದಿಂದ ಪ್ರೇರಿತರಾಗಿದ್ದಾರೆ.
ನಾಟ್ಯಶಾಸ್ತ್ರ
ಭರತ ಮುನಿಗಳ ನಾಟ್ಯಶಾಸ್ತ್ರವು ಪ್ರಾಚೀನ ಭಾರತದ ನೃತ್ಯ, ಸಂಗೀತ ಮತ್ತು ರಂಗಭೂಮಿಯ ಸಂಪೂರ್ಣ ವೈಜ್ಞಾನಿಕ ಮತ್ತು ಕಲಾತ್ಮಕ ವಿಶ್ಲೇಷಣೆಯಾದ ಗ್ರಂಥವಾಗಿದೆ. ಇದು ಸುಮಾರು ಎರಡನೇ ಶತಮಾನದ ಹಿನ್ನೋಟವನ್ನು ನೀಡುತ್ತದೆ. ಭಾರತೀಯ ಶಾಸ್ತ್ರೀಯ ಕಲೆಯ ಬೇರುಗಳನ್ನು ಈ ಪಠ್ಯದಲ್ಲಿ ಕಂಡುಹಿಡಿಯಬಹುದಾಗಿದೆ. ನಾಟ್ಯಶಾಸ್ತ್ರದಲ್ಲಿ ನವರಸಗಳ ತತ್ವ, ಅಭಿನಯದ ವಿಧಿಗಳು, ವೇಷಭೂಷಣ, ಸಂಗೀತದ ಷಡ್ಜ-ಮಧ್ಯಮ ಸಿದ್ಧಾಂತಗಳು, ನೃತ್ಯದ ಭಂಗಿ-ಪದ್ಧತಿಗಳು ಮೊದಲಾದವುಗಳನ್ನು ಸೂಕ್ಷ್ಮವಾಗಿ ವಿವರಿಸಲಾಗಿದೆ.
ಯುನೆಸ್ಕೋ ‘ಮೆಮೊರಿ ಆಫ್ ದಿ ವರ್ಲ್ಡ್’ ರಿಜಿಸ್ಟರ್
ಈ ರಿಜಿಸ್ಟರ್, ಜಾಗತಿಕವಾಗಿ ಪ್ರಭಾವ ಬೀರುವಂತಹ ಐತಿಹಾಸಿಕ ದಾಖಲೆಗಳನ್ನು ಸಂರಕ್ಷಿಸಿ, ಮುಂದಿನ ತಲೆಮಾರಿಗೆ ಹಸ್ತಾಂತರ ಮಾಡುವ ಉದ್ದೇಶದಿಂದ 1992ರಲ್ಲಿ ಪ್ರಾರಂಭವಾಯಿತು. ಇದರಲ್ಲಿ ಸೇರ್ಪಡೆಗೊಳ್ಳುವುದು ಅತಿ ಶ್ರೇಷ್ಠ ಹಾಗೂ ಪ್ರಭಾವಶಾಲಿ ಪಠ್ಯ, ಹಸ್ತಪ್ರತಿ ಅಥವಾ ದಾಖಲಾತಿಗೆ ದೊರಕುವ ಅಪರೂಪದ ಮಾನ್ಯತೆ. ಗೀತೆ ಹಾಗೂ ನಾಟ್ಯಶಾಸ್ತ್ರದ ಸೇರ್ಪಡೆ, ಭಾರತೀಯ ಐತಿಹಾಸಿಕ ಸಾಕ್ಷ್ಯಾಧಾರಗಳ ಗಂಭೀರತೆಯನ್ನು, ಅದರ ಜ್ಞಾನಮೂಲ್ಯವನ್ನು ಮತ್ತು ಜಾಗತಿಕ ಅಗತ್ಯತೆಯನ್ನು ದೃಢಪಡಿಸುತ್ತದೆ.





