ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕರುಂಗಲ್ ಬಳಿಯ ಬಾಲೂರ್ ಕಟ್ಟುವಿಲೈ ಪ್ರದೇಶದಲ್ಲಿ ಒಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಕೇವಲ 40 ದಿನಗಳ ಹಿಂದೆ ಜನಿಸಿದ ತನ್ನ ಮಗುವನ್ನು ತಾಯಿಯೇ ಕೊಂದಿರುವ ಘಟನೆ ಎಲ್ಲರನ್ನೂ ಬೆಚ್ಚಿಬಿಳಿಸಿದೆ. ಗಂಡನ ಪ್ರೀತಿ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ ಕೃತ್ಯವನ್ನು ಎಸಗಿರುವುದಾಗಿ ಮಹಿಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಈ ಘಟನೆ ಸಂಬಂಧ ಆರೋಪಿತ ತಾಯಿ ಬೆನಿತಾ ಜಯ ಅನ್ನಲ್ (20) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ
ಬೆನಿತಾ ಜಯ ಅನ್ನಲ್ ಕನ್ಯಾಕುಮಾರಿ ಜಿಲ್ಲೆಯ ನಿವಾಸಿಯಾಗಿದ್ದು, ಒಂದು ವರ್ಷದ ಹಿಂದೆ ದಿಂಡಿಗಲ್ ಜಿಲ್ಲೆಯ ಉತ್ತರ ವೇದಚಂದೂರಿನ ನಾಗಕೋಣನೂರು ಪ್ರದೇಶದ ಕಾರ್ತಿಕ್ (21) ಎಂಬಾತನನ್ನು ಪ್ರೀತಿಸಿ ವಿವಾಹವಾದವಳು. ಈ ಜೋಡಿಗೆ 40 ದಿನಗಳ ಹಿಂದೆ ಒಂದು ಹೆಣ್ಣು ಮಗು ಜನಿಸಿತ್ತು. ಆದರೆ, ಈಗ ಆ ಮಗುವಿನ ಪ್ರಾಣವನ್ನೇ ತಾಯಿ ತೆಗೆದಿದ್ದಾಳೆ. ಕಾರ್ತಿಕ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ವಿವಾಹದ ನಂತರ ಪತ್ನಿಯ ಮನೆಯಲ್ಲಿಯೇ ವಾಸವಾಗಿದ್ದ.
ಸೆಪ್ಟೆಂಬರ್ 9ರಂದು ಕಾರ್ತಿಕ್ ಎಂದಿನಂತೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಮರಳಿದಾಗ, ಮಗುವನ್ನು ಎತ್ತಿಕೊಂಡಾಗ ಯಾವುದೇ ಚಲನೆ ಇಲ್ಲದಿರುವುದನ್ನು ಗಮನಿಸಿದ್ದ. ಮಗು ಉಸಿರಾಡದಿರುವುದನ್ನು ಕಂಡು ಗಾಬರಿಗೊಂಡ ಕಾರ್ತಿಕ್, ತಕ್ಷಣ ಮಗುವನ್ನು ಕರುಂಗಲ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದ. ಆದರೆ, ವೈದ್ಯರು ಮಗು ಈಗಾಗಲೇ ಮೃತಪಟ್ಟಿರುವುದನ್ನು ಖಚಿತಪಡಿಸಿದರು. ಮಗುವಿನ ಹಣೆಯ ಮೇಲೆ ಗಾಯವಿರುವುದನ್ನು ಗಮನಿಸಿದ ಕಾರ್ತಿಕ್, ಈ ಬಗ್ಗೆ ಪತ್ನಿಯನ್ನು ಪ್ರಶ್ನಿಸಿದಾಗ, ಮಗು ಹಾಲು ಕುಡಿಯುವಾಗ ಕೆಳಗೆ ಬಿದ್ದು ಗಾಯಗೊಂಡಿದೆ ಎಂದು ಬೆನಿತಾ ಹೇಳಿದ್ದಳು.
ಕಾರ್ತಿಕ್ ಈ ಘಟನೆಯ ಬಗ್ಗೆ ಕರುಂಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಪೊಲೀಸರು ಮಗುವಿನ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಆಸರಿಪಲ್ಲಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಶವಪರೀಕ್ಷೆ ವರದಿಯಿಂದ ಮಗುವಿನ ಮರಣ ಕೊಲೆಯಿಂದ ಆಗಿರುವುದು ದೃಢಪಟ್ಟಿತ್ತು. ವರದಿಯ ಪ್ರಕಾರ, ಮಗುವಿನ ಬಾಯಿಯಲ್ಲಿ ಟಿಶೂ ಪೇಪರ್ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು.
ಪೊಲೀಸರು ಬೆನಿತಾಳನ್ನು ವಿಚಾರಣೆ ನಡೆಸಿದಾಗ, ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಳು. ಮಗು ಜನಿಸಿದ 40 ದಿನಗಳಿಂದ ಗಂಡನ ಪ್ರೀತಿ ಕಡಿಮೆಯಾಗಿದೆ ಎಂದು ಆಕೆ ಭಾವಿಸಿದ್ದಳು. ಇದರಿಂದ ಮನೆಯಲ್ಲಿ ಸಮಸ್ಯೆಗಳು ಉಂಟಾಗಿದ್ದವು. ಘಟನೆಯ ದಿನ ಕೋಪದಲ್ಲಿ ಮಗುವಿನ ಬಾಯಿಯಲ್ಲಿ ಟಿಶೂ ಪೇಪರ್ ತುರುಕಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಗಂಡನ ಪ್ರೀತಿ ಕಡಿಮೆಯಾಗಲು ಮಗುವೇ ಕಾರಣ ಎಂದು ಆಕೆ ಭಾವಿಸಿದ್ದಳು. ಈ ಒಪ್ಪಿಗೆಯ ಆಧಾರದ ಮೇಲೆ ಪೊಲೀಸರು ಬೆನಿತಾಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಿದ್ದಾರೆ.





