ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದ ಒಂದು ವಿಚಿತ್ರ ಪ್ರಕರಣವು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಒಬ್ಬ ಪತಿ ತನ್ನ ಹೆಂಡತಿಯ ವಿರುದ್ಧ ಹಾವು-ನಾಗರ ಕಥೆ ಹೇಳಿ ಪೊಲೀಸರಲ್ಲಿ ದೂರು ದಾಖಲಿಸಿದ್ದು, ಆದರೆ ತನಿಖೆಯಲ್ಲಿ ಸತ್ಯ ಬಯಲಾಗಿದೆ.
ಮಹ್ಮದಾಬಾದ್ ತಹಸಿಲ್ನ ಲೋಧಾಸಾ ಗ್ರಾಮದ ನಿವಾಸಿ ಮೆರಾಜ್ ಎಂಬ ವ್ಯಕ್ತಿ ತನ್ನ ಪತ್ನಿ ನಸೀಮುನ್ ವಿರುದ್ಧ ಪೊಲೀಸರಲ್ಲಿ ನೀಡಿದ ದೂರು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. “ರಾತ್ರಿಯಾಗುತ್ತಲೇ ನನ್ನ ಹೆಂಡತಿ ಹಾವಾಗಿ ರೂಪಾಂತರಗೊಳ್ಳುತ್ತಾಳೆ. ಅವಳು ನನ್ನನ್ನು ಹೆದರಿಸುತ್ತಾಳೆ, ನಿದ್ದೆ ಮಾಡದಂತೆ ತಡೆಯುತ್ತಾಳೆ. ದಯವಿಟ್ಟು ನನ್ನನ್ನು ಕಾಪಾಡಿ” ಎಂದು ಆತ ದೂರು ದಾಖಲಿಸಿದ್ದಾನೆ.
ಪ್ರಕರಣದ ಹಿನ್ನೆಲೆ
ಮೆರಾಜ್ ಮತ್ತು ನಸೀಮುನ್ ದಂಪತಿಯ ಮಧ್ಯೆ ಕೆಲವು ತಿಂಗಳುಗಳಿಂದಲೂ ಜಗಳಗಳು ನಡೆಯುತ್ತಿದ್ದವು. ಮೆರಾಜ್ ತನ್ನ ಪತ್ನಿಯನ್ನು ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. “ನೀನು ಹೆಚ್ಚು ದುಡ್ಡು ತರಬೇಕು, ಇಲ್ಲದಿದ್ದರೆ ನಾನು ಬೇರೆ ಮದುವೆಯಾಗುತ್ತೇನೆ” ಎಂದು ಆತ ಹೆದರಿಸುತ್ತಿದ್ದನು. ಇದರಿಂದಾಗಿ ನಸೀಮುನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಆದರೆ ಮೆರಾಜ್ಗೆ, ತನ್ನ ಪತ್ನಿ ಪೊಲೀಸರ ಬಳಿ ದೂರು ನೀಡಿ ತನ್ನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ ಅಂತ ಭಯವಾಗಿತ್ತು. ಆದ್ದರಿಂದ ಆತ ಮೊದಲೇ ಒಂದು ಕಟ್ಟುಕಥೆಯನ್ನು ಹೆಣೆದು ಪೊಲೀಸರ ಬಳಿ ದೂರು ದಾಖಲಿಸಿದ್ದನು. ಆದರೆ ಮೊದಲ ದೂರುಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಕೋಪಗೊಂಡ ಮೆರಾಜ್, ಈಗ ಹಾವಿನ ರೂಪಾಂತರದ ಕಥೆಯನ್ನು ಬಳಸಿ ಮತ್ತೊಮ್ಮೆ ದೂರು ನೀಡಿದ್ದನು.
ಪೊಲೀಸರು ಈ ದೂರನ್ನು ಕೇಳಿ ಮೊದಲು ನಗು ಬಂದರೂ, ಅದನ್ನು ನಿರ್ಲಕ್ಷಿಸಲಿಲ್ಲ. ಅವರು ತಕ್ಷಣವೇ ದಂಪತಿಯ ಮನೆಗೆ ಭೇಟಿ ನೀಡಿ ತನಿಖೆ ಆರಂಭಿಸಿದರು. ಮೆರಾಜ್ ಮಾಧ್ಯಮಗಳ ಎದುರು ಕೂಡ ತನ್ನ ಆರೋಪಗಳನ್ನು ಪುನರುಚ್ಚರಿಸಿದನು. “ನನ್ನ ಪತ್ನಿ ರಾತ್ರಿಯಲ್ಲಿ ಸರ್ಪದಂತೆ ಸಿಳ್ಳೆ ಹೊಡೆಯುತ್ತಾಳೆ, ನಾಗರನಂತೆ ವರ್ತಿಸುತ್ತಾಳೆ. ಅವಳು ಮಾನಸಿಕವಾಗಿ ಅಸ್ವಸ್ಥಳು” ಎಂದು ಆತ ಹೇಳಿದ್ದನು. ಇದನ್ನು ಕೇಳಿದ ಪೊಲೀಸರು ನಸೀಮುನ್ನನ್ನು ವಿಚಾರಣೆಗೆ ಕರೆದರು. ನಸೀಮುನ್ ತನ್ನ ಕಡೆಯ ಕಥೆಯನ್ನು ಹೇಳಿದಳು. “ನನ್ನ ಪತಿ ನನ್ನನ್ನು ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾನೆ. ಅವನು ನನ್ನನ್ನು ಹೆದರಿಸಿ ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದಾನೆ. ನಾನು ದೂರು ನೀಡುವ ಮೊದಲೇ ಅವನು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾನೆ.”
ತನಿಖೆಯ ಸಮಯದಲ್ಲಿ ಪೊಲೀಸರು ದಂಪತಿಯ ನೆರೆಹೊರೆಯವರನ್ನು ವಿಚಾರಿಸಿದರು. ಅವರ ಹೇಳಿಕೆಗಳು ಮೆರಾಜ್ನ ಕಥೆಯನ್ನು ಸುಳ್ಳು ಮಾಡಿದವು. ನೆರೆಯವರು ಹೇಳಿದ ಪ್ರಕಾರ ದಂಪತಿಯ ನಡುವೆ ಪದೇ ಪದೇ ಜಗಳಗಳು ನಡೆಯುತ್ತಿದ್ದವು. ಮೆರಾಜ್ ನಸೀಮುನ್ಗೆ ಕಿರುಕುಳ ನೀಡುತ್ತಿದ್ದನು. ಯಾವುದೇ ಹಾವಿನ ರೂಪಾಂತರದಂತಹ ವಿಚಿತ್ರ ಘಟನೆಗಳು ನಡೆದಿರಲಿಲ್ಲ ಎಂದು ಹೆಳಿದ್ದಾರೆ. ಇದರಿಂದ ಪೊಲೀಸರು ಮೆರಾಜ್ನ ಉದ್ದೇಶವನ್ನು ಅರ್ಥಮಾಡಿಕೊಂಡರು. ಆತ ತನ್ನ ಪತ್ನಿಯನ್ನು ಹೆದರಿಸಿ ಹಣ ಪಡೆಯಲು ಮತ್ತು ಆಕೆಯ ದೂರನ್ನು ತಡೆಯಲು ಈ ಸುಳ್ಳು ಕಥೆಯನ್ನು ಹೆಣೆದಿದ್ದನು ಎಂದು ತಿಳಿಯಿತು.
ಪೊಲೀಸರು ಮೆರಾಜ್ ವಿರುದ್ಧವೇ ಕ್ರಮ ಕೈಗೊಂಡಿದ್ದಾರೆ. ಸುಳ್ಳು ದೂರು ನೀಡಿ ಪೊಲೀಸರ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಆತನ ಮೇಲೆ ಮೊಕದ್ದಮೆ ಹೂಡಲಾಗಿದೆ.





