ತಿರುವನಂತಪುರಂ: ಕೇರಳದ ಪ್ರಸಿದ್ಧ ತೀರ್ಥಕ್ಷೇತ್ರವಾದ ಶಬರಿಮಲೆ ಶ್ರೀ ಧರ್ಮಶಾಸ್ತ ದೇವಾಲಯದಲ್ಲಿ ದ್ವಾರಪಾಲಕ ವಿಗ್ರಹಗಳ ಮೇಲಿನ ಚಿನ್ನಲೇಪಿತ ತಾಮ್ರ ತಟ್ಟೆಗಳಲ್ಲಿ ಚಿನ್ನದ ಪ್ರಮಾಣ ಕಡಿಮೆಯಾಗಿರುವುದು ಬಹಿರಂಗವಾಗಿದೆ. ಈ ಆಘಾತಕಾರಿ ವಿಚಾರವನ್ನು ಗಮನಿಸಿದ ಕೇರಳ ಹೈಕೋರ್ಟ್ ತನಿಖೆಗೆ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ರಾಜ ವಿಜಯ ರಾಘವನ್ ವಿ ಮತ್ತು ಕೆವಿ ಜಯಕುಮಾರ್ ಅವರ ಪೀಠವು ಈ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.
ಏನಿದು ಪ್ರಕರಣ?
ಶಬರಿಮಲೆ ದೇಗುಲದ ದ್ವಾರದಲ್ಲಿ ಸ್ಥಾಪಿಸಲಾಗಿರುವ ದ್ವಾರಪಾಲಕ ವಿಗ್ರಹಗಳ ಕೈಯಲ್ಲಿ ಚಿನ್ನಲೇಪಿತ ತಾಮ್ರ ತಟ್ಟೆಗಳಿವೆ. ಇವುಗಳನ್ನು ನಿಯಮಿತವಾಗಿ ಪಾಲಿಷ್ ಮಾಡಲಾಗುತ್ತದೆ. 2019ರಲ್ಲಿ ಹೊಸ ಲೇಪನಕ್ಕಾಗಿ ತಟ್ಟೆಗಳನ್ನು ತೆಗೆದಾಗ ಅವುಗಳ ತೂಕ 42.8 ಕೆಜಿ ಇತ್ತು. ಪ್ರಾಯೋಜಕರಾದ ಉನ್ನಿಕೃಷ್ಣನ್ ಪೊಟ್ಟಿ ಅವರು ತಟ್ಟೆಗಳನ್ನು ಚೆನ್ನೈಯ ಸಾರ್ಟ್ ಕ್ರಿಯೇಷನ್ಸ್ ಸಂಸ್ಥೆಗೆ ಕೊಂಡೊಯ್ದರು. ಆದರೆ ಪರೀಕ್ಷೆಯಲ್ಲಿ ಕೇವಲ 38.258 ಕೆಜಿ ಮಾತ್ರ ಇದ್ದಿದ್ದು ಕಂಡುಬಂದಿತ್ತು. ಇದರಿಂದ 4.542 ಕೆಜಿ ಚಿನ್ನದ ಕೊರತೆ ಉಂಟಾಗಿದೆ ಎಂದು ಕೋರ್ಟ್ ಗಮನಿಸಿದ ಕೇರಳ ಹೈಕೋರ್ಟ್ ತನಿಖೆಗೆ ಆದೇಶ ನೀಡಿದೆ.
ವಿಗ್ರಹಗಳ ಇತಿಹಾಸ
1999ರಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅನುಮೋದನೆಯೊಂದಿಗೆ ಈ ವಿಗ್ರಹಗಳನ್ನು ಸ್ಥಾಪಿಸಲಾಯಿತು. ಆದರೆ ಆರು ವರ್ಷಗಳ ನಂತರ ಲೇಪನದಲ್ಲಿ ದೋಷಗಳು ಕಂಡುಬಂದವು. 2019ರಲ್ಲಿ ದುರಸ್ತಿ ಮತ್ತು ಮರುಪಾಲಿಷ್ಗಾಗಿ ತಟ್ಟೆಗಳನ್ನು ತೆಗೆದಾಗ ವಿವಾದ ಶುರುವಾಯಿತು. ಟಿಡಿಬಿ ಅಧಿಕಾರಿಗಳು ನ್ಯಾಯಾಲಯದ ಅನುಮೋದನೆ ಇಲ್ಲದೆಯೇ ಈ ಕೆಲಸ ಮಾಡಿದ್ದರು ಎಂಬ ಆರೋಪಗಳಿವೆ.
ದೇವಸ್ವಂ ಸಮಿತಿಯ ಮುಖ್ಯ ಜಾಗೃತ ಮತ್ತು ಭದ್ರತಾ ಅಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮೂರು ವಾರಗಳಲ್ಲಿ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ. ಎಲ್ಲಾ ದಾಖಲೆಗಳು, ರಿಜಿಸ್ಟರ್ಗಳನ್ನು ವಿಜಿಲೆನ್ಸ್ ಅಧಿಕಾರಿಗೆ ಹಸ್ತಾಂತರಿಸಬೇಕು. ಟಿಡಿಬಿಗೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಲಾಗಿದೆ.





