ನವದೆಹಲಿ: ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದಂದು ಅಥವಾ ಅದಕ್ಕೂ ಮುನ್ನ ಭಾರತದಲ್ಲಿ ಹೊಸ ಮಾದರಿಯ ಭೀಕರ ಉಗ್ರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ದಾಳಿಯ ಸಂಚಿಗೆ ಉಗ್ರರು ‘26-26’ ಎಂಬ ಕೋಡ್ನೇಮ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಗುಪ್ತಚರ ಮೂಲಗಳ ಪ್ರಕಾರ, ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ, ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ಹಾಗೂ ಪಂಜಾಬ್ ಮೂಲದ ಅಪರಾಧಿ ಗ್ಯಾಂಗ್ಸ್ಟರ್ಗಳ ಸಹಕಾರದೊಂದಿಗೆ ಈ ದಾಳಿಯ ಸಂಚು ರೂಪಿಸಲಾಗಿದೆ. ಉಗ್ರರು ಸ್ಥಳೀಯ ಅಪರಾಧಿಗಳನ್ನು “ ಸೈನಿಕರಂತೆ” ಬಳಸಿಕೊಂಡು ದಾಳಿ ನಡೆಸುವ ಯೋಜನೆ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಉಗ್ರ ದಾಳಿಯ ಪ್ರಮುಖ ಗುರಿಯಾಗಿ ಅಯೋಧ್ಯೆಯ ರಾಮಮಂದಿರವನ್ನು ಗುರುತಿಸಲಾಗಿದೆ. ಇದಲ್ಲದೆ ಜಮ್ಮುವಿನ ರಘುನಾಥ ದೇಗುಲ, ಪ್ರಮುಖ ಧಾರ್ಮಿಕ ಕೇಂದ್ರಗಳು, ಜನಸಂದಣಿ ಇರುವ ನಗರ ಪ್ರದೇಶಗಳು ಹಾಗೂ ಸಾರಿಗೆ ಕೇಂದ್ರಗಳು ಉಗ್ರರ ಹಿಟ್ ಲಿಸ್ಟ್ನಲ್ಲಿ ಇರುವ ಸಾಧ್ಯತೆ ಇದೆ ಎಂದು ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಾದ್ಯಂತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಮೆಟ್ರೋ ಕೇಂದ್ರಗಳು ಸೇರಿದಂತೆ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಶಂಕಿತರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಬೇಕಾಗಿರುವ ಉಗ್ರರ ಮತ್ತು ಆರೋಪಿಗಳ ಪೋಸ್ಟರ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗಿದೆ.
ಮೂಲಗಳ ಪ್ರಕಾರ, ಈ ಸಂಚುವಿನ ಹಿಂದೆ ಜೈಷ್-ಎ-ಮೊಹಮ್ಮದ್ ಪ್ರಮುಖ ಪಾತ್ರ ವಹಿಸಿದೆ. ಕಳೆದ ವರ್ಷ ನವೆಂಬರ್ನಲ್ಲಿ ಕೆಂಪುಕೋಟೆ ಸಮೀಪ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ 15 ಮಂದಿ ಸಾವನ್ನಪ್ಪಿದ್ದ ಘಟನೆಗೂ ಇದೇ ಉಗ್ರ ಸಂಘಟನೆ ಸಂಬಂಧ ಹೊಂದಿತ್ತು ಎನ್ನಲಾಗಿದೆ. ಇದೀಗ ಅದಕ್ಕಿಂತಲೂ ದೊಡ್ಡ ದಾಳಿ ನಡೆಸುವ ಉದ್ದೇಶದಿಂದ ಈ ಹೊಸ ಸಂಚು ರೂಪಿಸಲಾಗಿದೆ.
ಈ ಪಟ್ಟಿಯಲ್ಲಿ ಮೊಹಮ್ಮದ್ ರೆಹಾನ್, ಮೊಹಮ್ಮದ್ ಉಮರ್, ಅಬು ಸುಫಿಯಾನ್, ಮೊಹಮ್ಮದ್ ಶಾಹಿದ್ ಫೈಸಲ್, ಸೈಯದ್ ಅರ್ಷಿಯಾ, ಶಾರ್ಜೀಲ್ ಅಖ್ತರ್ ಸೇರಿದಂತೆ ಹಲವು ಉಗ್ರರ ಹೆಸರುಗಳು ಸೇರಿವೆ. ಇವರಲ್ಲಿ ಕೆಲವರು 2016ರಲ್ಲಿ ಉತ್ತರ ಪ್ರದೇಶದ ಸಂಭಲ್ನಲ್ಲಿ ಪತ್ತೆಯಾದ ಅಲ್ ಖೈದಾ ಮಾಡ್ಯೂಲ್ ಪ್ರಕರಣದ ನಂತರ ಭೂಗತರಾಗಿದ್ದರು.





