ಮೇಘಾಲಯದಲ್ಲಿ ಕಾಣೆಯಾಗಿದ್ದ ಇಂದೋರ್ ಮೂಲದ ದಂಪತಿಯ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ರಾಜಾ ರಘುವಂಶಿಯನ್ನು ಆತನ ಪತ್ನಿ ಸೋನಂ ಸ್ವತಃ ಹತ್ಯೆಗೆ ಸಂಚು ರೂಪಿಸಿದ್ದಳು ಎಂಬ ಆಘಾತಕಾರಿ ಸತ್ಯ ಬಯಲಾಗಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸೋನಂನ ಪ್ರಿಯಕರನೆಂದು ಆರೋಪಿಸಲಾದ ರಾಜ್ ಕುಶ್ವಾಹಾ, ರಾಜಾ ರಘುವಂಶಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ದೃಶ್ಯ ಈ ವಿಡಿಯೊದಲ್ಲಿ ಕಾಣಿಸಿಕೊಂಡಿದೆ. ಈ ವಿಷಯವನ್ನು ರಾಜಾನ ತಾಯಿ ಉಮಾ ರಘುವಂಶಿ ಮತ್ತು ಸಹೋದರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಜಾನ ಸಹೋದರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದು, ರಾಜಾನ ಮೃತದೇಹ ಮನೆಗೆ ಬಂದಾಗ ರಾಜ್ ಕುಶ್ವಾಹಾ ಅವರ ತಂದೆಯನ್ನು ಸಮಾಧಾನಪಡಿಸುತ್ತಿದ್ದ ಎಂದು ತಿಳಿಸಿದ್ದಾರೆ. ತಾಯಿ ಉಮಾ ರಘುವಂಶಿ ಕೂಡ ತಮ್ಮ ಮಗನ ಅಂತ್ಯಕ್ರಿಯೆಯಲ್ಲಿ ಈತನ ಭಾಗಿಯಾಗಿದ್ದನ್ನು ಗಮನಿಸಿದ್ದಾಗಿ ಹೇಳಿದ್ದಾರೆ. ರಾಜ್ ಕುಶ್ವಾಹಾ ಅಂತ್ಯಕ್ರಿಯೆಗೆ ಕುಟುಂಬದವರನ್ನು ಕರೆದೊಯ್ಯಲು ಬಳಸಿದ ಕಾರಿನ ಚಾಲಕನಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಈ ಕುರಿತು ಪ್ರತ್ಯಕ್ಷದರ್ಶಿಯಾದ ಲಕ್ಷ್ಮಣ್ ಸಿಂಗ್ ರಾಠೋರ್ ಮಾಹಿತಿ ನೀಡಿದ್ದು, “ನಾನು ಆ ಕಾರಿನಲ್ಲಿದ್ದೆ, ಆದರೆ ಆತನ ಜೊತೆ ಮಾತನಾಡಿರಲಿಲ್ಲ. ನಂತರ ಮಾಧ್ಯಮಗಳಲ್ಲಿ ಕುಶ್ವಾಹಾನ ಫೋಟೋ ಮತ್ತು ಬಂಧನದ ಸುದ್ದಿ ನೋಡಿದಾಗ ಆತನನ್ನು ಗುರುತಿಸಿದೆ,” ಎಂದು ಹೇಳಿದ್ದಾರೆ.
When the body of I Raja Raghuvanshi was brought back from Shillong, the alleged murderer Raj Kushwaha was present at the scene.
In this video, he (on the right) is seen supporting Sonam Raghuvanshi’s father. pic.twitter.com/jfcZC9NxRc
— Woke Eminent (@WokePandemic) June 9, 2025
ಈ ಘಟನೆ ಹಿನ್ನೆಲೆ
ರಾಜಾ ರಘುವಂಶಿ ಮತ್ತು ಸೋನಂ ದಂಪತಿಯು ಮೇ 11, 2025ರಂದು ಇಂದೋರ್ನಲ್ಲಿ ವಿವಾಹವಾಗಿದ್ದರು. ಮೇ 23ರಂದು ಇವರು ಹನಿಮೂನ್ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಆದರೆ, ದಂಪತಿಯು ಕಾಣೆಯಾದ ಬಗ್ಗೆ ವರದಿಯಾದ ನಂತರ ಪೊಲೀಸರು ತನಿಖೆ ಆರಂಭಿಸಿದರು. ಜೂನ್ 2ರಂದು ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ವೈಸಾಡಾಂಗ್ ಜಲಪಾತದ ಸಮೀಪ ರಾಜಾನ ಶವ ಪತ್ತೆಯಾಯಿತು. ತನಿಖೆಯಲ್ಲಿ ಸೋನಂ ತನ್ನ ಪ್ರಿಯಕರ ರಾಜ್ ಕುಶ್ವಾಹಾನೊಂದಿಗೆ ರಾಜಾನ ಹತ್ಯೆಗೆ ಸಂಚು ರೂಪಿಸಿದ್ದಳು ಎಂಬುದು ಬಯಲಾಯಿತು.
ಮೇಘಾಲಯ ಪೊಲೀಸರು ಈಗಾಗಲೇ ಸೋನಂ ಸೇರಿದಂತೆ ಆಕೆಯ ಸಹಚರರಾದ ಆಕಾಶ್ ರಾಜ್ಪುತ್ (19), ವಿಶಾಲ್ ಸಿಂಗ್ ಚೌಹಾನ್ (22), ಮತ್ತು ರಾಜ್ ಕುಶ್ವಾಹಾ (21)ರನ್ನು ಬಂಧಿಸಿದ್ದಾರೆ. ಆಕಾಶ್ ರಾಜ್ಪುತ್ನನ್ನು ಉತ್ತರ ಪ್ರದೇಶದ ಲಲಿತ್ಪುರದಲ್ಲಿ, ಇತರ ಇಬ್ಬರನ್ನು ಇಂದೋರ್ನಲ್ಲಿ ಬಂಧಿಸಲಾಗಿದೆ. ಸೋನಂ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ನಂದಗಂಜ್ ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಈ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ವಿಶೇಷವಾಗಿ, ರಾಜ್ ಕುಶ್ವಾಹಾನು ರಾಜಾನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ರೀತಿಯು ಕುಟುಂಬದವರಿಗೆ ಮತ್ತು ಸಾರ್ವಜನಿಕರಿಗೆ ಆಘಾತವನ್ನುಂಟು ಮಾಡಿದೆ.