ಛತ್ತೀಸ್ಗಢ: ಛತ್ತೀಸ್ಗಢದ ಧಮ್ತಾರಿ ಜಿಲ್ಲೆಯಲ್ಲಿ 9 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಎಲ್ಲರ ತಲೆಗೂ ಸೇರಿ ಸುಮಾರು 47 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 47 ಲಕ್ಷ ರೂಪಾಯಿ ಬಹುಮಾನ ಹೊಂದಿದ್ದ 9 ಮಂದಿ ಮಾವೋವಾದಿಗಳು ಶುಕ್ರವಾರ ಪೊಲೀಸರ ಮುಂದೆ ಶರಣಾಗಿದ್ದು, ಇದರೊಂದಿಗೆ ರಾಯ್ಪುರ ಪೊಲೀಸ್ ವಲಯ ಸಂಪೂರ್ಣ ನಕ್ಸಲ್ ಮುಕ್ತವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಘೋಷಿಸಿದ್ದಾರೆ.
ಶರಣಾಗಿದ ಮಾವೋವಾದಿಗಳಿಂದ ಇನ್ಸಾಸ್ ರೈಫಲ್ಗಳು, ಎರಡು ಎಸ್ಎಲ್ಆರ್ಗಳು, ಒಂದು ಕಾರ್ಬೈನ್, ಮಜಲ್ ಲೋಡಿಂಗ್ ಗನ್ ಹಾಗೂ ಹಲವು ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ರಾಯ್ಪುರ ವಲಯದ ಪೊಲೀಸ್ ಮಹಾನಿರೀಕ್ಷಕ ಅಮರೇಶ್ ಮಿಶ್ರಾ, “ಮಾವೋವಾದಿ ಸಿದ್ಧಾಂತದ ಮೇಲಿನ ನಂಬಿಕೆ ಕಳೆದುಕೊಂಡು, ಕಾಡುಗಳಲ್ಲಿನ ಕಷ್ಟದ ಜೀವನದಿಂದ ಬೇಸತ್ತು ಹಾಗೂ ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಪ್ರೇರಣೆಯಿಂದ ಈ ಒಂಬತ್ತು ಮಂದಿ ಶರಣಾಗಿದ್ದಾರೆ” ಎಂದು ಹೇಳಿದರು.
ಶರಣಾದವರಲ್ಲಿ ಏಳು ಮಹಿಳೆಯರು ಇರುವುದರಿಂದ ಇದು ವಿಶೇಷ ಮಹತ್ವ ಪಡೆದುಕೊಂಡಿದೆ. ಇವರಲ್ಲಿ ನಾಗ್ರಿ ಮತ್ತು ಸೀತಾನದಿ ಪ್ರದೇಶ ಸಮಿತಿ, ಒಡಿಶಾ ರಾಜ್ಯ ಮಾವೋವಾದಿ ಸಮಿತಿ ಹಾಗೂ ಧಮ್ತಾರಿ–ಗರಿಯಾಬಂದ್–ನುವಾಪಾದ ವ್ಯಾಪ್ತಿಯ ಮೈನ್ಪುರ್ ಸ್ಥಳೀಯ ಗೆರಿಲ್ಲಾ ಸ್ಕ್ವಾಡ್ (ಎಲ್ಜಿಎಸ್) ಗೆ ಸೇರಿದ ಕಾರ್ಯಕರ್ತರು ಸೇರಿದ್ದಾರೆ.
ಶರಣಾದವರ ವಿವರಗಳು ಹೀಗಿವೆ
-
ಜ್ಯೋತಿ ಅಲಿಯಾಸ್ ಜೈನಿ (28) – ಸೀತಾನದಿ ಪ್ರದೇಶ ಸಮಿತಿ ಕಾರ್ಯದರ್ಶಿ
-
ಉಷಾ ಅಲಿಯಾಸ್ ಬಾಲಮ್ಮ (45) – ವಿಭಾಗೀಯ ಸಮಿತಿ ಸದಸ್ಯೆ
-
ರಾಮದಾಸ್ ಮಾರ್ಕಮ್ (30)
-
ರೋನಿ ಅಲಿಯಾಸ್ ಉಮಾ (25)
-
ನಿರಂಜನ್ ಅಲಿಯಾಸ್ ಪೊಡಿಯಾ (25)
-
ಸಿಂಧು ಅಲಿಯಾಸ್ ಸೋಮದಿ (25)
-
ರೀನಾ ಅಲಿಯಾಸ್ ಚಿರೋ (25)
-
ಅಮಿಲಾ ಅಲಿಯಾಸ್ ಸನ್ನಿ (25)
-
ಲಕ್ಷ್ಮಿ ಪುಣೆಂ (18)
ಇವರಲ್ಲಿ ಬಾಲಮ್ಮ ತೆಲಂಗಾಣ ಮೂಲದವರಾಗಿದ್ದು, ಉಳಿದವರು ಛತ್ತೀಸ್ಗಢದ ವಿವಿಧ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಶರಣಾಗತಿಯೊಂದಿಗೆ ಧಮ್ತಾರಿ ಮತ್ತು ಗರಿಯಾಬಂದ್ ಜಿಲ್ಲೆಗಳು ಹಾಗೂ ಪಕ್ಕದ ಒಡಿಶಾದ ನುವಾಪಾದ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಮಾವೋವಾದಿಗಳು ಅಥವಾ ಶರಣಾಗಿದ್ದಾರೆ. ಹೀಗಾಗಿ ಈ ಪ್ರದೇಶದಲ್ಲಿ ಇನ್ನು ಮುಂದೆ ಯಾವುದೇ ಸಕ್ರಿಯ ನಕ್ಸಲ್ ಚಟುವಟಿಕೆ ಇಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಧಮ್ತಾರಿ ಪೊಲೀಸ್ ವರಿಷ್ಠಾಧಿಕಾರಿ ಸೂರಜ್ ಸಿಂಗ್ ಪರಿಹಾರ್ ಮಾತನಾಡಿ, “ಇದು ಹಲವು ವರ್ಷಗಳ ನಿರಂತರ ಕಾರ್ಯಾಚರಣೆ, ಗುಪ್ತಚರ ಜಾಲ ಬಲಪಡಿಕೆ, ಮನವೊಲಿಕೆ ಹಾಗೂ ಸರ್ಕಾರದ ಪುನರ್ವಸತಿ ಯೋಜನೆಯ ಪರಿಣಾಮ. ಈ ವರ್ಷ ಮಾತ್ರವೇ ಛತ್ತೀಸ್ಗಢದಲ್ಲಿ 189 ಮಾವೋವಾದಿಗಳು ಶರಣಾಗಿದ್ದಾರೆ” ಎಂದು ತಿಳಿಸಿದರು.





