ಒಡಿಶಾದ ಪುರಿಯಲ್ಲಿ ನಡೆಯುವ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆಯು ಭಕ್ತರಿಗೆ ಉತ್ಸಾಹವನ್ನು ತುಂಬಿದರೂ, ಈ ವರ್ಷದ ಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತವು ಭಕ್ತರ ಮನಸ್ಸಿನಲ್ಲಿ ಆಘಾತವನ್ನು ಉಂಟುಮಾಡಿದೆ. ಜೂನ್ 29, 2025 ರಂದು, ಗುಂಡಿಚಾ ದೇವಾಲಯದ ಬಳಿಯ ಶಾರದಾಬಲಿಯಲ್ಲಿ ಮುಂಜಾನೆ ಉಂಟಾದ ಕಾಲ್ತುಳಿತದಿಂದ ಕನಿಷ್ಟ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಘಟನೆಯ ವಿವರ
ಶಾರದಾಬಲಿಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ್ದು, ಮರದ ದಿಮ್ಮಿಗಳನ್ನು ಹೊತ್ತ ಎರಡು ಟ್ರಕ್ಗಳು ಜನದಟ್ಟಣೆಯಿಂದ ಕೂಡಿದ್ದ ಪ್ರದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದು ಕಾರಣವಾಗಿದೆ. ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವ ಪ್ರಕಾರ, ಕಿರಿದಾದ ಸಮಾರಂಭದ ಸ್ಥಳ, ಸೀಮಿತ ಪೊಲೀಸ್ ಉಪಸ್ಥಿತಿ, ಮತ್ತು ರಥಗಳ ಬಳಿ ಚದುರಿದ ತಾಳೆ ಮರದ ಏಣಿಗಳು ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಪ್ರಭಾತಿ ದಾಸ್, ಬಸಂತಿ ಸಾಹು, ಮತ್ತು ಪ್ರೇಮಕಾಂತ್ ಮೊಹಂತಿ (70) ಎಂದು ಗುರುತಿಸಲಾಗಿದೆ. ಒಡಿಶಾದ ಖುರ್ದಾ ಜಿಲ್ಲೆಯವರಾದ ಇವರು ರಥಯಾತ್ರೆಗಾಗಿ ಪುರಿಗೆ ಆಗಮಿಸಿದ್ದರು.
ಈ ಘಟನೆಯಲ್ಲಿ ಗಾಯಗೊಂಡ 10 ಮಂದಿಯ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಶನಿವಾರದ ರಥಯಾತ್ರೆಯ ಸಂದರ್ಭದಲ್ಲಿ ಜನಸಂದಣಿಯ ಒತ್ತಡ ಮತ್ತು ಶಾಖದಿಂದಾಗಿ 750ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದು, 12 ಜನರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. 230ಕ್ಕೂ ಹೆಚ್ಚು ಭಕ್ತರನ್ನು ಸಾಂಕ್ರಾಮಿಕ ರೋಗ ಆಸ್ಪತ್ರೆಗೆ ಮತ್ತು 520 ಮಂದಿಯನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಡಿಶಾ ಕಾನೂನು ಸಚಿವ ಪೃಥಿವಿರಾಜ್ ಹರಿಚಂದನ್ ಈ ದುರಂತಕ್ಕೆ ಸಂತಾಪ ಸೂಚಿಸಿ, ಉನ್ನತ ಮಟ್ಟದ ತನಿಖೆಯನ್ನು ಘೋಷಿಸಿದ್ದಾರೆ. “ಮೂರು ಸಾವುಗಳನ್ನು ಒಳಗೊಂಡ ಈ ಘಟನೆ ನಮ್ಮನ್ನು ತೀವ್ರವಾಗಿ ದುಃಖಕ್ಕೀಡುಮಾಡಿದೆ. ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದ್ದರೆ, ಕಾರಣಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ತಿಳಿಸಿದ್ದಾರೆ.