ಹರಿಯಾಣದ ಅಂಬಾಲ ವಾಯುಪಡೆ ನಿಲ್ದಾಣದಲ್ಲಿ ಇಂದು (ಬುಧವಾರ) ಭಾರತದ ರಾಷ್ಟ್ರಪತಿ ದೌಪದಿ ಮುರ್ಮು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ರಾಷ್ಟ್ರಪತಿಯವರ ಈ ಸಾಹಸಮಯ ಹಾರಾಟವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೇರ ಪ್ರಸಾರದ ಮೂಲಕ ದೇಶವಾಸಿಗಳಿಗೆ ತಲುಪಿಸಿತು. ಈ ಕಾರ್ಯಕ್ರಮದಲ್ಲಿ ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಷ್ಟ್ರಪತಿ ಮುರ್ಮು ಅವರು ಬೆಳಿಗ್ಗೆ ಅಂಬಾಲ ವಾಯುಪಡೆ ನಿಲ್ದಾಣಕ್ಕೆ ಆಗಮಿಸಿದರು. ರಫೇಲ್ ಯುದ್ಧ ವಿಮಾನದ ಕಾಕ್ಪಿಟ್ನಲ್ಲಿ ಕುಳಿತು, ಅವರು ಆಕಾಶದಲ್ಲಿ ಸಾಹಸಮಯ ಹಾರಾಟವನ್ನು ಕೈಗೊಂಡರು. ಈ ಘಟನೆಯನ್ನು ಗುರುತಿಸುವ ಸಲುವಾಗಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, “ಸಂದೇಶವು ಮಹಿಳೆಯರನ್ನು ಸಬಲೀಕರಣಗೊಳಿಸುವುದು… ರಕ್ಷಣಾ ಮತ್ತು ಮಿಲಿಟರಿ ಕ್ಷೇತ್ರದಲ್ಲಿ ಅವರನ್ನು ಪ್ರೋತ್ಸಾಹಿಸುವುದು” ಎಂದು ಬರೆದುಕೊಂಡಿದೆ. ರಫೇಲ್ ಯುದ್ಧ ವಿಮಾನವು ಭಾರತೀಯ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.
ಇದಕ್ಕೂ ಮೊದಲು, 2023ರ ಏಪ್ರಿಲ್ 8ರಂದು ರಾಷ್ಟ್ರಪತಿ ಮುರ್ಮು ಅಸ್ಸಾಂನ ತೇಜ್ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಈ ಘಟನೆಯೊಂದಿಗೆ ಅವರು ಭಾರತದ ಮೂರನೇ ರಾಷ್ಟ್ರಪತಿಯಾಗಿ ಮತ್ತು ಎರಡನೇ ಮಹಿಳಾ ರಾಷ್ಟ್ರಾಧ್ಯಕ್ಷರಾಗಿ ಈ ಸಾಧನೆಯನ್ನು ಗುರುತಿಸಿದ್ದರು. ಇದಕ್ಕೂ ಮುಂಚೆ, ಮಾಜಿ ರಾಷ್ಟ್ರಪತಿಗಳಾದ ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಅವರು 2006ರ ಜೂನ್ 8 ಮತ್ತು 2009ರ ನವೆಂಬರ್ 25ರಂದು ಪುಣೆಯ ಲೋಹೆಗಾಂವ್ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 ಎಂಕೆಐ ವಿಮಾನದಲ್ಲಿ ಹಾರಾಟ ನಡೆಸಿದ್ದರು.





