ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಒಂದು ಹೇಳಿಕೆ ಭಾರತೀಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. “75 ವರ್ಷ ದಾಟಿದವರು ಜವಾಬ್ದಾರಿಗಳನ್ನು ವರ್ಗಾಯಿಸಿ ವಿಶ್ರಾಂತಿ ಪಡೆಯಬೇಕು” ಎಂದು ಭಾಗವತ್ ಹೇಳಿದ್ದಾರೆ.
74 ವರ್ಷದ ಭಾಗವತ್ ಅವರಿಗೆ ಸೆಪ್ಟೆಂಬರ್ಗೆ 75 ವರ್ಷ ಪೂರ್ಣಗೊಳಿಸಲಿದ್ದಾರೆ. ಇದರ ನಂತರ ಅವರು RSS ನಾಯಕತ್ವದಿಂದ ಹಿಂದೆ ಸರಿಯಬಹುದೆಂದು ಊಹಿಸಲಾಗಿದೆ. ಅವರ ಈ ಮಾತು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಇತರ ಹಿರಿಯ ನಾಯಕರ ನಿವೃತ್ತಿ ಕುರಿತು ಊಹಾಪೋಹಗಳು ಜೋರಾಗಿದೆ.
ಭಾಗವತ್ ಅವರ ಈ ಹೇಳಿಕೆಯು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರಾಜಕೀಯ ಭವಿಷ್ಯದ ಕುರಿತೂ ಚರ್ಚೆಗೆ ಕಾರಣವಾಗಿದೆ. 74 ವರ್ಷದ ಮೋದಿಯವರಿಗೆ ಈಗಾಗಲೇ ಬಿಜೆಪಿಯ 75 ವರ್ಷದ ನಿವೃತ್ತಿ ನಿಯಮದ ಚರ್ಚೆ ಜೋರಾಗಿದೆ. ಶಿವಸೇನಾ ಸಂಸದ ಸಂಜಯ್ ರಾವತ್, “ಭಾಗವತ್ 75ರಲ್ಲಿ ನಿವೃತ್ತಿಯಾದರೆ, ಈ ನಿಯಮ ಮೋದಿಗೂ ಅನ್ವಯವಾಗಬೇಕು” ಎಂದು ಒತ್ತಾಯಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಒಂದು ವೇಳೆ ಈ ನಿಯಮವನ್ನು ಬಿಜೆಪಿಯು ಕಟ್ಟುನಿಟ್ಟಾಗಿ ಪಾಲಿಸಿದರೆ, ಮೋದಿಯವರ ರಾಜಕೀಯ ಭವಿಷ್ಯದ ಮೇಲೆ ಇದರ ಪರಿಣಾಮ ಬೀರಬಗುದೆಂಬ ಕುತೂಹಲ ಮೂಡಿದೆ.
ಆರ್ಎಸ್ಎಸ್ನಲ್ಲಿ ನಾಯಕತ್ವ ಬದಲಾವಣೆಯು ಸಾಮಾನ್ಯವಾಗಿ ಸಾರ್ವಜನಿಕ ಚರ್ಚೆಯಿಂದ ದೂರವಿರುತ್ತದೆ. ಆದರೆ, ಭಾಗವತ್ ಅವರ ಹೇಳಿಕೆಯಿಂದಾಗಿ ದತ್ತಾತ್ರೇಯ ಹೊಸಬಾಳೆ, ಕೃಷ್ಣ ಗೋಪಾಲ್, ಭಯ್ಯಾಜಿ ಜೋಶಿ ಮುಂತಾದವರ ಹೆಸರುಗಳು ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಕೇಳಿಬರುತ್ತಿವೆ. ಆರ್ಎಸ್ಎಸ್ನ ಇತಿಹಾಸದಲ್ಲಿ, ಹೆಡ್ಗೆವಾರ್ ಮತ್ತು ಗೋಲ್ವಾಲ್ಕರ್ ಬಳಿಕ ನಾಯಕತ್ವ ಬದಲಾವಣೆಗಳು ದೀರ್ಘಕಾಲದ ಚಿಂತನೆಯ ಬಳಿಕವೇ ನಡೆದಿವೆ. ಈ ಬಾರಿಯೂ ಇಂತಹ ಒಂದು ಪರಿವರ್ತನೆಯ ಸಾಧ್ಯತೆಯ ಬಗ್ಗೆ ಊಹಾಪೋಹಗಳು ಜೋರಾಗಿವೆ.
ಇದೇ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಒಂದು ಹೇಳಿಕೆಯೂ ಗಮನ ಸೆಳೆದಿದೆ. ಗುಜರಾತ್ಗೆ ಭೇಟಿ ನೀಡಿದ ಅವರು, ತಮ್ಮ ಎರಡು ದಶಕಗಳ ರಾಜಕೀಯ ಜೀವನವು ಸಾಕೆಂದು, ನಿವೃತ್ತಿಯ ಬಳಿಕ ವೇದಗಳು, ಉಪನಿಷತ್ತುಗಳ ಅಧ್ಯಯನ ಮತ್ತು ನೈಸರ್ಗಿಕ ಕೃಷಿಯತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ. ಇದು ಅವರ ವೈಯಕ್ತಿಕ ಆಲೋಚನೆಯೋ ಅಥವಾ ಬಿಜೆಪಿಯ ಒಳಗಿನ ಬದಲಾವಣೆಯ ಸಂಕೇತವೋ ಎಂಬ ಅನುಮಾನಗಳು ಮೂಡಿವೆ.
ಭಾಗವತ್ರವರ ಹೇಳಿಕೆಯು ಕೇವಲ ಆರ್ಎಸ್ಎಸ್ಗೆ ಸಂಬಂಧಿಸಿದ್ದಲ್ಲ, ಬದಲಿಗೆ ಬಿಜೆಪಿಯ ಭವಿಷ್ಯದ ನಾಯಕತ್ವದ ಮೇಲೂ ಪರಿಣಾಮ ಬೀರಬಹುದು. 2024ರ ಲೋಕಸಭೆ ಚುನಾವಣೆಯ ಬಳಿಕ ಬಿಜೆಪಿಯು ಸಂಪೂರ್ಣ ಬಹುಮತ ಪಡೆಯದಿರುವ ಹಿನ್ನೆಲೆಯಲ್ಲಿ, ಈ ಚರ್ಚೆಯು ಮತ್ತಷ್ಟು ಮಹತ್ವ ಪಡೆದಿದೆ. ಒಂದು ವೇಳೆ 75 ವರ್ಷದ ನಿಯಮವನ್ನು ಬಿಜೆಪಿಯು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ, ಮೋದಿಯವರ ನಾಯಕತ್ವದ ಭವಿಷ್ಯದ ಬಗ್ಗೆ ದೊಡ್ಡ ಪ್ರಶ್ನೆಗಳು ಎದುರಾಗಬಹುದು.





