ಏಪ್ರಿಲ್ 22, 2025ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲುಗಳಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದರು. ಈ ದಾಳಿಯಿಂದ ಕುಟುಂಬದ ಆಧಾರ ಸ್ತಂಭವನ್ನೇ ಕಳೆದುಕೊಂಡವರು ಕಂಗಾಲಾಗಿದ್ದರು. ಮಹಿಳೆಯರು ತಮ್ಮ ತಂದೆ, ಪತಿ, ಮಕ್ಕಳನ್ನು ಕಣ್ಮುಂದೆಯೇ ಕಳೆದುಕೊಂಡು ಕಣ್ಣೀರಿನಲ್ಲಿ ಮುಳುಗಿದ್ದರು. ಈ ದುರಂತದ ಸ್ಮರಣಾರ್ಥ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಬೈಸರನ್ನಲ್ಲಿ ಸ್ಮಾರಕ ನಿರ್ಮಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.
“ನಾವು ಈ ದಾಳಿಯಿಂದ ಬಲಿಯಾದ 26 ಜನರಿಗೆ ಗೌರವ ಸಲ್ಲಿಸಲು ಬೈಸರನ್ನಲ್ಲಿ ಸ್ಮಾರಕವನ್ನು ಸ್ಥಾಪಿಸುತ್ತೇವೆ. ಇದು ಶಾಶ್ವತ ಗೌರವವಾಗಿದ್ದು, ಅವರನ್ನು ಎಂದಿಗೂ ಮರೆಯಲಾಗದ ಜ್ಞಾಪನೆಯಾಗಿರುತ್ತದೆ,” ಎಂದು ಸಿಎಂ ಒಮರ್ ಅಬ್ದುಲ್ಲಾ ಹೇಳಿದರು. ಪ್ರವಾಸ ಮತ್ತು ಪ್ರಯಾಣ ನಿರ್ವಾಹಕರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಕ್ಷೀಣಿಸುತ್ತಿರುವ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಮಹತ್ವವನ್ನು ಹೇಳಿದರು. “ನಿನ್ನೆಯ ಸಂಪುಟ ಸಭೆಯಲ್ಲಿ, ಸ್ಮಾರಕಕ್ಕೆ ತಾತ್ವಿಕ ಅನುಮೋದನೆ ನೀಡಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ,” ಎಂದು ಅವರು ತಿಳಿಸಿದರು.
ಈ ಘೋಷಣೆಗೂ ಮುನ್ನ, ಸಿಎಂ ಒಮರ್ ಅಬ್ದುಲ್ಲಾ ಪಹಲ್ಗಾಮ್ನಲ್ಲಿ ವಿಶೇಷ ಸಂಪುಟ ಸಭೆ ಕರೆದಿದ್ದರು. ಈ ಸಭೆಯು ಭಯೋತ್ಪಾದನೆಗೆ ಧಿಕ್ಕಾರವನ್ನು ಸಾರುವ ಜೊತೆಗೆ, ಪ್ರದೇಶದ ಅಭಿವೃದ್ಧಿಗೆ ದೃಢ ಸಂಕಲ್ಪವನ್ನು ಪ್ರದರ್ಶಿಸಿತು. ಏಪ್ರಿಲ್ 22ರ ದಾಳಿಯಿಂದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಈ ಸಂದರ್ಭದಲ್ಲಿ ನಡೆದ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಒಮರ್ ಅಬ್ದುಲ್ಲಾ, “ಪ್ರವಾಸೋದ್ಯಮವು ಸಂಘರ್ಷ-ತಟಸ್ಥವಾಗಿರಬೇಕು ಮತ್ತು ಸಾಮಾನ್ಯತೆಯ ಮಾಪಕವಾಗಿ ಕಾರ್ಯನಿರ್ವಹಿಸಬಾರದು,” ಎಂದು ಹೇಳಿದರು. ಪಹಲ್ಗಾಮ್ನ ನಿವಾಸಿಗಳ ಜೊತೆ ಒಗ್ಗಟ್ಟನ್ನು ತೋರಲು ಈ ಸ್ಥಳವನ್ನೇ ಸಂಪುಟ ಸಭೆಗೆ ಆಯ್ಕೆ ಮಾಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಸಂಕೀರ್ಣ ಆಡಳಿತ ರಚನೆಯ ಬಗ್ಗೆಯೂ ಅಬ್ದುಲ್ಲಾ ಗಮನ ಸೆಳೆದರು. “ಪ್ರವಾಸೋದ್ಯಮ ನನ್ನ ಜವಾಬ್ದಾರಿಯಾದರೂ, ಭದ್ರತೆ ನನ್ನ ವ್ಯಾಪ್ತಿಯಿಂದ ಹೊರಗಿದೆ,” ಎಂದು ಅವರು ಹೇಳಿದರು.
ಈ ಸ್ಮಾರಕ ಯೋಜನೆಗೆ ಮುನ್ನ, ಪೀಪಲ್ಸ್ ಆಕ್ಷನ್ ಎಂಬ ಎನ್ಜಿಒ ಮತ್ತು ವಕಾಲತ್ತು ಗುಂಪು ಮೇ 2ರಂದು ಸಿಎಂಗೆ ಪತ್ರ ಬರೆದು, ಬೈಸರನ್ ಕಣಿವೆಯಲ್ಲಿ ಸ್ಮಾರಕ ಸ್ಥಾಪನೆಯ ಪ್ರಸ್ತಾವನೆ ಸಲ್ಲಿಸಿತ್ತು. ಈ ಪತ್ರದಲ್ಲಿ, ಭಯೋತ್ಪಾದನೆ ಮತ್ತು ಧಾರ್ಮಿಕ ಕಿರುಕುಳದ ವಿರುದ್ಧ ಜಮ್ಮು ಕಾಶ್ಮೀರದ ದೀರ್ಘಕಾಲದ ಹೋರಾಟವನ್ನು ನೆನಪಿಸುವ, ಮುಗ್ಧ ಜೀವಗಳ ನಷ್ಟವನ್ನು ಒಪ್ಪಿಕೊಳ್ಳುವ ಸ್ಮಾರಕದ ಅಗತ್ಯವನ್ನು ಒತ್ತಿ ಹೇಳಲಾಗಿತ್ತು.
ಪಹಲ್ಗಾಮ್ ದಾಳಿಯು ಜಮ್ಮು ಮತ್ತು ಕಾಶ್ಮೀರದ ಇತಿಹಾಸದ ಅತಿದೊಡ್ಡ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ. ಲಷ್ಕರ್ನ ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಆದರೆ, ಜಾಗತಿಕ ಆಕ್ರೋಶದ ನಂತರ ಅದು ಹಿಂದೆ ಸರಿಯಿತು. ಈ ದಾಳಿಯಲ್ಲಿ ವಿದೇಶಿ ಪ್ರವಾಸಿಗರು ಸೇರಿದಂತೆ 26 ಮಂದಿ ಸಾವನ್ನಪ್ಪಿದ್ದರು, ಮತ್ತು ಹಲವರು ಗಾಯಗೊಂಡಿದ್ದರು.