ವಾಷಿಂಗ್ಟನ್: ವಿದೇಶದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಹಾರದ ಮೇಲಿನ ತಾರತಮ್ಯ ಹೊಸದೇನಲ್ಲ, ಆದರೆ ಅಂತಹ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯವನ್ನೇ ಸೋಲಿಸಿದ ಸುದ್ದಿ ಎಲ್ಲೆಡೆ ಚರ್ಚೆ ಆಗುತ್ತಿದೆ. ಪಾಲಕ್ ಪನೀರ್ ಆಹಾರದ ವಾಸನೆಯ ವಿಚಾರವಾಗಿ ಆರಂಭವಾದ ವಿವಾದದಲ್ಲಿ ಭಾರತೀಯ ಪಿಎಚ್ಡಿ ವಿದ್ಯಾರ್ಥಿಗಳಾದ ಆದಿತ್ಯ ಪ್ರಕಾಶ್ ಮತ್ತು ಉರ್ಮಿ ಭಟ್ಟಾಚಾರ್ಯ ದಂಪತಿ ಬರೋಬ್ಬರಿ 1.8 ಕೋಟಿ ರೂಪಾಯಿ (2,00,000 USD) ಪರಿಹಾರ ಪಡೆದಿದ್ದಾರೆ.
ಈ ವಿವಾದ ಆರಂಭವಾಗಿದ್ದು 2023ರ ಸೆಪ್ಟೆಂಬರ್ನಲ್ಲಿ, ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ. ಆದಿತ್ಯ ಪ್ರಕಾಶ್ ಅವರು ವಿಶ್ವವಿದ್ಯಾಲಯದ ಮೈಕ್ರೊವೇವ್ನಲ್ಲಿ ಮಧ್ಯಾಹ್ನದ ಊಟಕ್ಕೆ ತಂದಿದ್ದ ಪಾಲಕ್ ಪನೀರ್ ಅನ್ನು ಬಿಸಿ ಮಾಡಲು ಮುಂದಾದಾಗ, ಅಲ್ಲಿನ ಸಿಬ್ಬಂದಿಯೊಬ್ಬರು ತಡೆದಿದ್ದರು. ಪನೀರ್ ವಾಸನೆ ಅಸಹನೀಯವಾಗಿದೆ, ಇಲ್ಲಿ ಇದನ್ನು ಬಿಸಿ ಮಾಡುವಂತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
Shocking! Two Indian PhD students Aditya Prakash and Urmi Bhattacharyya filed a civil suit against the University of Colorado Boulder when Aditya was told not to not use the microwave to heat food (palak paneer) with pungent smell. When he refused, the university escalated the…
— Sahana Singh (@singhsahana) January 14, 2026
ಈ ಘಟನೆಯ ಬಗ್ಗೆ ಆದಿತ್ಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ದೂರು ನೀಡಿದಾಗ, ವಿವಿ ಸಕಾರಾತ್ಮಕವಾಗಿ ಸ್ಪಂದಿಸುವ ಬದಲು ದಂಪತಿಯ ಮೇಲೆ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಯಿತು. ಆದಿತ್ಯ ಅವರನ್ನು ಅಧ್ಯಾಪಕರ ಸಭೆಗೆ ಕರೆದು ಪದೇ ಪದೇ ಕಿರುಕುಳ ನೀಡಲಾಯಿತು. ಇನ್ನು ಅವರ ಪತ್ನಿ ಉರ್ಮಿ ಭಟ್ಟಾಚಾರ್ಯ ಅವರನ್ನು ಯಾವುದೇ ಸೂಕ್ತ ಕಾರಣ ನೀಡದೆ ಬೋಧನಾ ಸಹಾಯಕ (Teaching Assistant) ಹುದ್ದೆಯಿಂದ ವಜಾಗೊಳಿಸಲಾಯಿತು. ಭಾರತೀಯ ಆಹಾರ ಸೇವಿಸುವುದು ಗಲಭೆಗೆ ಪ್ರಚೋಕಾರಿಯಾಗಿದೆ ಎಂದು ವಿಚಿತ್ರ ಆರೋಪಗಳನ್ನು ಮಾಡಲಾಯಿತು.
ಬಳಿಕ ಈ ದಂಪತಿಗಳು, ಅಮೆರಿಕದ ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಿದರು. ಇದು ಕೇವಲ ಆಹಾರದ ವಾಸನೆಯ ವಿಚಾರವಲ್ಲ, ಬದಲಿಗೆ ಜನಾಂಗೀಯ ಮತ್ತು ಸಾಂಸ್ಕೃತಿಕ ತಾರತಮ್ಯ ಎಂದು ವಾದಿಸಿದರು. ಸುಮಾರು ಎರಡು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, ವಿಶ್ವವಿದ್ಯಾಲಯವು ತನ್ನ ತಪ್ಪನ್ನು ಒಪ್ಪಿಕೊಂಡು ರಾಜಿ ಮಾಡಿಕೊಂಡಿತು. 2025ರ ಸೆಪ್ಟೆಂಬರ್ನಲ್ಲಿ ದಂಪತಿಗೆ 1.8 ಕೋಟಿ ರೂಪಾಯಿ ಪರಿಹಾರ ನೀಡುವುದರ ಜೊತೆಗೆ ಅವರ ಸ್ನಾತಕೋತ್ತರ ಪದವಿಗಳನ್ನು ನೀಡಲು ಒಪ್ಪಿಕೊಂಡಿತು.
ಕಾನೂನು ಹೋರಾಟದಲ್ಲಿ ಗೆದ್ದ ದಂಪತಿ ಈಗ ಭಾರತಕ್ಕೆ ಮರಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಉರ್ಮಿ ಭಟ್ಟಾಚಾರ್ಯ, ನನ್ನ ಚರ್ಮದ ಬಣ್ಣ, ಜಾತಿ ಹಿನ್ನೆಲೆಯನ್ನು ಲೆಕ್ಕಿಸದೆ, ನನಗೆ ಇಷ್ಟವಾದ ಆಹಾರ ಸೇವಿಸುವ ಸ್ವಾತಂತ್ರ್ಯಕ್ಕಾಗಿ ನಾನು ಈ ಹೋರಾಟ ನಡೆಸಿದೆ ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದಂಪತಿಯ ಧೈರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.





