ನವದೆಹಲಿ (ಜ.29): ಇದು ನಿಜವಾದ ಪ್ರೀತಿಯ ಕಥೆ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಅಸಾಧಾರಣ ಬಾಂಧವ್ಯಕ್ಕೆ ಇದು ಜೀವಂತ ಉದಾಹರಣೆ. ಭಾರತೀಯ ದಂಪತಿಯೊಬ್ಬರು ತಮ್ಮ ಮುದ್ದಿನ ನಾಯಿಗಾಗಿ ಬರೋಬ್ಬರಿ 15 ಲಕ್ಷ ರೂಪಾಯಿ ವೆಚ್ಚ ಮಾಡಿ ಆಸ್ಟ್ರೇಲಿಯಾಗೆ ಕರೆದೊಯ್ದು ಎಲ್ಲರ ಗಮನ ಸೆಳೆದಿದ್ದಾರೆ..
ಹೈದರಾಬಾದ್ನ ದಿವ್ಯ ಮತ್ತು ಜಾನ್ ದಂಪತಿ, ಉತ್ತಮ ಉದ್ಯೋಗಾವಕಾಶ ಮತ್ತು ಜೀವನಮಟ್ಟದ ಸುಧಾರಣೆಯ ಹಿನ್ನೆಲೆ ಹೈದರಾಬಾದ್ನಿಂದ ಆಸ್ಟ್ರೇಲಿಯಾಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದರು. ಆದರೆ ಅವರ ಜೀವನದ ಅತ್ಯಂತ ಪ್ರೀತಿಯ ಸದಸ್ಯನಾದ ಮುದ್ದಿನ ನಾಯಿಯನ್ನು ಭಾರತದಲ್ಲೇ ಬಿಟ್ಟು ಹೋಗುವುದು ಅವರಿಗೆ ಅಸಾಧ್ಯವಾಗಿತ್ತು. ಆಸ್ಟ್ರೇಲಿಯಾದ ಕಠಿಣ ಪ್ರಾಣಿ ಆಮದು ನಿಯಮಗಳು ಇವರ ಮುಂದೆ ದೊಡ್ಡ ಅಡ್ಡಿಯಾಗಿ ನಿಂತವು.
ಆಸ್ಟ್ರೇಲಿಯಾ ಸರ್ಕಾರದ ನಿಯಮದ ಪ್ರಕಾರ, ಭಾರತದಿಂದ ನೇರವಾಗಿ ನಾಯಿಯನ್ನು ಆಸ್ಟ್ರೇಲಿಯಾಗೆ ಕರೆದುಕೊಂಡು ಹೋಗಲು ಅವಕಾಶವಿಲ್ಲ. ನಾಯಿ ಕನಿಷ್ಠ ಆರು ತಿಂಗಳು ರೇಬಿಸ್ ಮುಕ್ತ ದೇಶದಲ್ಲಿ ವಾಸಿಸಿರಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ. ಈ ನಿಯಮವನ್ನು ತಿಳಿದ ದಿವ್ಯ ಹಾಗೂ ಜಾನ್ ದಂಪತಿ ಹಿಂಜರಿಯಲಿಲ್ಲ. ತಮ್ಮ ಮುದ್ದಿನ ನಾಯಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದರು.
ಬಹಳ ಪರಿಶೀಲನೆ ಮತ್ತು ಕಾನೂನು ಪ್ರಕ್ರಿಯೆಗಳ ನಂತರ ಅವರು ದುಬೈಯನ್ನು ಮಧ್ಯಂತರ ತಾಣವಾಗಿ ಆಯ್ಕೆ ಮಾಡಿಕೊಂಡರು. ಎಲ್ಲಾ ದಾಖಲೆಗಳು, ಆರೋಗ್ಯ ಪ್ರಮಾಣಪತ್ರಗಳು, ಲಸಿಕೆಗಳು ಮತ್ತು ಕ್ವಾರಂಟೈನ್ ನಿಯಮಗಳನ್ನು ಪೂರೈಸಿ, ನಾಯಿಯನ್ನು ದುಬೈಗೆ ಕರೆದುಕೊಂಡು ಹೋಗಿದರು. ಈ ಸಂಪೂರ್ಣ ಪ್ರಕ್ರಿಯೆಗೆ ಸುಮಾರು 15 ಲಕ್ಷ ರೂಪಾಯಿ ವೆಚ್ಚವಾಯಿತು.
ದುಬೈಗೆ ತೆರಳಿದ ಬಳಿಕ, ಮುದ್ದಿನ ನಾಯಿಗೆ ಹೊಸ ಪರಿಸರ, ಹೊಸ ಜನರಿಂದ ಒತ್ತಡವಾಗಬಾರದು ಎಂಬ ಕಾರಣಕ್ಕೆ ದಂಪತಿ ಒಂದು ತಿಂಗಳು ಸಂಪೂರ್ಣವಾಗಿ ನಾಯಿಯ ಜೊತೆಯಲ್ಲೇ ಉಳಿದರು. ಡಾಗ್ ಕೇರ್ ಸೆಂಟರ್ ಆಯ್ಕೆ, ವೈದ್ಯಕೀಯ ತಪಾಸಣೆ, ಆಹಾರ ವ್ಯವಸ್ಥೆ ಸೇರಿದಂತೆ ಎಲ್ಲದರ ಮೇಲೂ ವಿಶೇಷ ಗಮನ ಹರಿಸಿದರು.
ಆದರೆ ಆಸ್ಟ್ರೇಲಿಯಾದಲ್ಲಿ ಕೆಲಸ ಆರಂಭಿಸುವ ಸಮಯ ಹತ್ತಿರವಾದ ಕಾರಣ, ಒಂದು ತಿಂಗಳ ಬಳಿಕ ಅವರು ತಮ್ಮ ಮುದ್ದಿನ ನಾಯಿಯನ್ನು ದುಬೈನಲ್ಲೇ ಬಿಡಬೇಕಾಯಿತು. ಈ ಐದು ತಿಂಗಳ ಅವಧಿ ಇವರಿಗೆ ಭಾರೀ ಮಾನಸಿಕ ಸಂಕಟವನ್ನು ತಂದಿತ್ತು. ಪ್ರತಿ ದಿನ ಡಾಗ್ ಕೇರ್ ಸೆಂಟರ್ಗೆ ಕರೆ ಮಾಡಿ ನಾಯಿಯ ಆರೋಗ್ಯ ವಿಚಾರಿಸುತ್ತಿದ್ದರು. ವಿಡಿಯೋ ಕಾಲ್ ಮೂಲಕ ನಾಯಿಯ ಮುಖ ನೋಡಿಕೊಂಡು ಮನಸ್ಸಿಗೆ ಸಮಾಧಾನ ಪಡಿಸುತ್ತಿದ್ದರು.
“ನಾಯಿ ನಮ್ಮ ಮಗುವಿನಂತಿತ್ತು. ಪ್ರತಿದಿನ ಅವನ ನೆನಪು ಕಾಡುತ್ತಿತ್ತು. ಮನೆಯಲ್ಲಿ ಅವನಿಲ್ಲದೆ ಎಲ್ಲವೂ ಖಾಲಿ ಖಾಲಿ ಅನ್ನಿಸುತ್ತಿತ್ತು,” ಎಂದು ದಿವ್ಯ ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ..
ಆರು ತಿಂಗಳ ರೇಬಿಸ್ ಮುಕ್ತ ವಾಸದ ಅವಧಿ ಮುಗಿದ ಬಳಿಕ, ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ, ಕೊನೆಗೂ ದುಬೈನಿಂದ ಆಸ್ಟ್ರೇಲಿಯಾಗೆ ನಾಯಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಹಲವು ತಿಂಗಳ ವಿರಹದ ನಂತರ ಮುದ್ದಿನ ನಾಯಿ ಮತ್ತೆ ತಮ್ಮ ಮಡಿಲು ಸೇರಿದ ಕ್ಷಣವನ್ನು ದಂಪತಿ “ನಮ್ಮ ಜೀವನದ ಅತ್ಯಂತ ಸಂತಸದ ದಿನ” ಎಂದು ವರ್ಣಿಸಿದ್ದಾರೆ.
ಈ ಸಂಪೂರ್ಣ ಪ್ರಕ್ರಿಯೆಯಲ್ಲಿ 15 ಲಕ್ಷ ರೂಪಾಯಿ ಖರ್ಚು ಮಾಡಿದ ವಿಚಾರ ಕೇಳಿ ಹಲವರು ಆಶ್ಚರ್ಯ ವ್ಯಕ್ತಪಡಿಸಿದರು. “ಬೇರೆ ನಾಯಿ ಖರೀದಿಸಿದರೆ ಸಾಕಲ್ಲವೇ? ಇಷ್ಟು ಹಣ ಮತ್ತು ಕಷ್ಟ ಯಾಕೆ?” ಎಂಬ ಪ್ರಶ್ನೆಗಳು ಎದುರಾದವು. ಆದರೆ ದಿವ್ಯ ಮತ್ತು ಜಾನ್ ಅವರ ಉತ್ತರ ತುಂಬಾ ಸ್ಪಷ್ಟವಾಗಿತ್ತು.
“ನಮ್ಮ ನಾಯಿ ನಮಗೆ ಕೇವಲ ಪಾಳು ಪ್ರಾಣಿ ಅಲ್ಲ. ಅದು ನಮ್ಮ ಕುಟುಂಬದ ಸದಸ್ಯ. ಮಗುವಿನಂತೆ ಸಾಕಿದ್ದೇವೆ. ಆ ಪ್ರೀತಿಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಬೇರೆ ನಾಯಿ ಆ ಸ್ಥಾನವನ್ನು ತುಂಬಲಾರದು. ನಮಗೆ ಹಣಕ್ಕಿಂತ ನಮ್ಮ ನಾಯಿಯ ಪ್ರೀತಿ ಮುಖ್ಯ,” ಎಂದು ಅವರು ಹೇಳುತ್ತಾರೆ.





