ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ನಡೆದ ಭೀಕರ ಉಗ್ರರ ಗುಂಡಿನ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದೆ. ಈ ಘಟನೆಯಿಂದ ಎರಡು ದೇಶಗಳ ನಡುವೆ ಯಾವುದೇ ಸಂದರ್ಭದಲ್ಲಿ ಘರ್ಷಣೆ ಸಂಭವಿಸಬಹುದೆಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಗೋಧಿ ಬೆಳೆಯ ಕಟಾವನ್ನು ಭಾರತದ ರೈತರು ಸಂಪೂರ್ಣವಾಗಿ ಮುಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ರಾಜ್ಯಗಳಲ್ಲಿ ಕಟಾವು
ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರದಂತಹ ಗಡಿ ರಾಜ್ಯಗಳಲ್ಲಿ ಸುಮಾರು 3,310 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೈತರು ಗೋಧಿ ಬೆಳೆ ಕಟಾವನ್ನು ಪೂರ್ಣಗೊಳಿಸಿದ್ದಾರೆ. ಈ ರಾಜ್ಯಗಳ ಹಲವು ರೈತರ ಬೆಳೆಗಳು ಪಾಕಿಸ್ತಾನದ ಗಡಿಯೊಂದಿಗೆ ಸಂನಿಕಟ ಸಂಪರ್ಕದಲ್ಲಿವೆ. ಒಂದು ವೇಳೆ ಎರಡು ರಾಷ್ಟ್ರಗಳ ನಡುವೆ ಯುದ್ಧದ ಸನ್ನಿವೇಶ ಉದ್ಭವಿಸಿದರೆ ಬೆಳೆಗಳು ನಾಶವಾಗಬಹುದೆಂಬ ಕಾರಣಕ್ಕಾಗಿ, ಸರ್ಕಾರಿ ಅಧಿಕಾರಿಗಳು ರೈತರಿಗೆ ಬೆಳೆಯನ್ನು ಬೇಗ ಕಟಾವು ಮಾಡಿಕೊಳ್ಳುವಂತೆ ಸೂಚಿಸಿದ್ದರು.
ಈ ಸೂಚನೆಯ ಬೆನ್ನಲ್ಲೇ, ಗಡಿ ಪ್ರದೇಶಗಳಲ್ಲಿ ಗೋಧಿ ಬೆಳೆ ಕಟಾವು ಕಾರ್ಯ ಪೂರ್ಣಗೊಂಡಿದೆ. ಕಟಾವು ಮಾಡಿದ ಬೆಳೆಯ ಇಳುವರಿ ಉತ್ತಮವಾಗಿದ್ದು, ರೈತರಿಗೆ ತೃಪ್ತಿಕರ ಫಲಿತಾಂಶ ದೊರೆತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಗಡಿ ಪ್ರದೇಶಗಳಲ್ಲಿ ಕೊಯ್ಲು ಮಾಡಿದ ಒಟ್ಟು ಗೋಧಿ ಪ್ರಮಾಣದ ಕುರಿತು ಪ್ರತ್ಯೇಕ ದತ್ತಾಂಶ ಲಭ್ಯವಿಲ್ಲ. ಇತರ ರಾಜ್ಯಗಳಿಗೆ ಹೋಲಿಸಿದರೆ, ಪಂಜಾಬ್ ಗಡಿಯಲ್ಲಿ ಹೆಚ್ಚಿನ ಪ್ರಮಾಣದ ಬೆಳೆ ಕೊಯ್ಲು ಮಾಡಲಾಗಿದೆ ಎಂದು ಕೃಷಿ ಆಯುಕ್ತ ಪ್ರವೀಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ರಾಜಸ್ಥಾನದಲ್ಲಿಯೂ ಕೊಯ್ಲು ಕಾರ್ಯ ಸಂಪೂರ್ಣವಾಗಿ ಮುಗಿದಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.