ಹೈದರಾಬಾದ್ನ ಜೀಡಿಮೆಟ್ಟಾದಲ್ಲಿ ನಡೆದ ಒಂದು ಘೋರ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಹತ್ತನೇ ತರಗತಿಯ ಬಾಲಕಿಯೊಬ್ಬಳು ತನ್ನ ಗೆಳೆಯನೊಂದಿಗೆ ಸೇರಿ ತನ್ನ ಮಲತಾಯಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾಳೆ. ತಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಈ ಕೃತ್ಯ ಎಸಗಿದ್ದಾಳೆ.
ಜೀಡಿಮೆಟ್ಟಾದಲ್ಲಿ ವಾಸವಾಗಿರುವ ಬಾಲಕಿಯು ಸುಮಾರು ಎಂಟು ತಿಂಗಳ ಹಿಂದೆ ಇನ್ಸ್ಸ್ಟಾಗ್ರಾಮ್ ಮೂಲಕ ಶಿವ (19) ಎಂಬ ಯುವಕನ ಪರಿಚಯವನ್ನು ಮಾಡಿಕೊಂಡಿದ್ದಳು. ಈ ಪರಿಚಯ ಪ್ರೀತಿಯಾಗಿ ಬದಲಾಯಿತು. ಇಬ್ಬರೂ ಫೋನ್ ಕರೆಗಳು, ಸಂದೇಶಗಳ ಮೂಲಕ ಸಂಪರ್ಕದಲ್ಲಿದ್ದು, ಆಗಾಗ ಹೊರಗೆ ಭೇಟಿಯಾಗುತ್ತಿದ್ದರು. ಆದರೆ, ಈ ವಿಷಯ ಬಾಲಕಿಯ ತಾಯಿ ಅಂಜಲಿಗೆ ತಿಳಿಯಿತು. ಈ ವಯಸ್ಸಿನಲ್ಲಿ ಪ್ರೀತಿಯ ಬದಲು ಓದಿನತ್ತ ಗಮನಹರಿಸುವಂತೆ ಅಂಜಲಿ ತನ್ನ ಮಗಳಿಗೆ ಎಚ್ಚರಿಕೆ ನೀಡಿದ್ದಳು.
ತಾಯಿಯ ಈ ವಿರೋಧಕ್ಕೆ ಕೋಪಗೊಂಡ ಬಾಲಕಿ, ತಾಯಿಯ ವಿರುದ್ಧ ದ್ವೇಷ ಸಾಧಿಸಿದಳು. ನಂತರ ತಮ್ಮ ಪ್ರೀತಿಗೆ ಅಡ್ಡಿಯಾದ ತಾಯಿಯನ್ನು ಕೊಲ್ಲಲು ಆಕೆ ನಿರ್ಧರಿಸಿದಳು. ಈ ಯೋಜನೆಯನ್ನು ತನ್ನ ಗೆಳೆಯ ಶಿವನೊಂದಿಗೆ ಹಂಚಿಕೊಂಡಳು. ಒಂದು ವಾರದ ಹಿಂದೆ, ಬಾಲಕಿ ಶಿವನೊಂದಿಗೆ ಮನೆಯಿಂದ ಓಡಿಹೋಗಿದ್ದಳು. ಈ ಬಗ್ಗೆ ಅಂಜಲಿ ಜೀಡಿಮೆಟ್ಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೂರು ದಿನಗಳ ಬಳಿಕ ಬಾಲಕಿ ಮನೆಗೆ ವಾಪಸ್ ಬಂದಿದ್ದಳು.
ನಂತರದ ದಿನಗಳಲ್ಲಿ ತಾಯಿಯನ್ನು ಕೊಲ್ಲಲು ಬಾಲಕಿ ಕುತಂತ್ರ ರೂಪಿಸಿದ್ದಳು. ಜೂನ್ 23ರ ಸಂಜೆ ಶಿವ, ತನ್ನ ಸಹೋದರ ಯಶವಂತ್ನೊಂದಿಗೆ ಬಾಲಕಿಯ ಮನೆಗೆ ತಲುಪಿದ್ದನು. ಆ ಸಂದರ್ಭದಲ್ಲಿ ಅಂಜಲಿ ಮನೆಯಲ್ಲಿ ಪೂಜೆಯಲ್ಲಿ ತೊಡಗಿದ್ದರು. ಶಿವ ಆಕೆಯ ಮೇಲೆ ಹಿಂದಿನಿಂದ ದಾಳಿ ನಡೆಸಿದ್ದಾನೆ. ನಂತರ, ಶಿವ, ಅಂಜಲಿಯ ಮುಖವನ್ನು ಬೆಡ್ಶೀಟ್ನಿಂದ ಮುಚ್ಚಿದ್ದಾನೆ. ಆಗ ಬಾಲಕಿ ಸುತ್ತಿಗೆಯಿಂದ ತನ್ನ ತಾಯಿಯ ತಲೆಗೆ ಹೊಡೆದಿದ್ದಾಳೆ. ಶಿವನ ಕಿರಿಯ ಸಹೋದರ ಯಶವಂತ್ ಚಾಕುವಿನಿಂದ ಅಂಜಲಿಯ ತಲೆ ಗಾಯಗೊಳಿಸಿದ್ದಾನೆ. ಸುತ್ತಿಗೆಯಿಂದ ಹೊಡೆದು, ಚಾಕುವಿನಿಂದ ಕೊಯ್ದು ಆರೋಪಿಗಳು ಅಂಜಲಿಯನ್ನು ಕ್ರೂರವಾಗಿ ಕೊಂದಿದ್ದಾರೆ. ಕೊಲೆಯಾದ ಬಳಿಕ ಎಲ್ಲ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಶವವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.