ಚಂಡೀಗಢ: ವಿವಾಹದಲ್ಲಿ ವಂಚನೆಯಿಂದ ಕೂಡಿದ ಕೊಲೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಹರಿಯಾಣದ ಸೋನಿಪತ್ನಲ್ಲಿ ಸುಮಾರು ಒಂದು ವರ್ಷದ ಹಿಂದೆ ನಡೆದ ಒಂದು ಭಯಾನಕ ಕೊಲೆ ಪ್ರಕರಣವನ್ನು ದೆಹಲಿ ಪೊಲೀಸರು ಇದೀಗ ಬಯಲಿಗೆಳೆದಿದ್ದಾರೆ. ಈ ಪ್ರಕರಣದಲ್ಲಿ ಒಬ್ಬ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆಗೈದು, ಶವವನ್ನು ಚರಂಡಿಗೆ ಎಸೆದಿದ್ದಾಳೆ. ಒಂದು ವರ್ಷದ ಬಳಿಕ ಈ ಕೊಲೆಯ ರಹಸ್ಯವನ್ನು ಆವ್ಯಕ್ತಿಯ ಮೊಬೈಲ್ ಫೋನ್ ಬಯಲಿಗೆಳೆಯಲು ಕಾರಣವಾಗಿದೆ. ಈ ಫೋನ್ನ ಸಕ್ರಿಯತೆಯಿಂದ ಪೊಲೀಸರಿಗೆ ಸುಳಿವು ಸಿಕ್ಕಿತ್ತು, ಇದರಿಂದ ಆರೋಪಿಗಳಾದ ಸೋನಿಯಾ (34) ಮತ್ತು ಆಕೆಯ ಗೆಳೆಯ ರೋಹಿತ್ (28) ಅವರನ್ನು ಪೊಲೋಸರು ಬಂಧಿಸಿದ್ದಾರೆ.
ಹರಿಯಾಣದ ಸೋನಿಪತ್ನಲ್ಲಿ ಪ್ರೀತಮ್ ಪ್ರಕಾಶ್ (42) ಎಂಬಾತನನ್ನು ಕೊಲೆಗೈದು ಶವವನ್ನು ಚರಂಡಿಗೆ ಎಸೆದ ಆರೋಪದ ಮೇಲೆ ದೆಹಲಿಯ ಅಲಿಪುರ ನಿವಾಸಿ ಸೋನಿಯಾ ಮತ್ತು ಸೋನಿಪತ್ನ ರೋಹಿತ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ವಿಜಯ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಉಪ ಆಯುಕ್ತ (ಅಪರಾಧ) ಹರ್ಷ್ ಇಂದೋರಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಕೊಲೆಯಾದ ಪ್ರೀತಮ್ ಪ್ರಕಾಶ್ನ ವಿರುದ್ಧ ಶಸ್ತ್ರಸ್ತ್ರ ಕಾಯ್ದೆ, ಮಾದಕ ದ್ರವ್ಯ ಕಾಯ್ದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳಡಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಅವನನ್ನು ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯವು ಅಪರಾಧಿಯೆಂದು ಘೋಷಿಸಿತ್ತು.
2024ರ ಜುಲೈ 5ರಂದು ಪ್ರೀತಮ್, ಸೋನಿಯಾಳ ಸಹೋದರಿಯನ್ನು ಕರೆದುಕೊಂಡು ಹೋಗಲು ಗನ್ನೌರ್ನಲ್ಲಿರುವ ಮನೆಗೆ ಬಂದಿದ್ದ. ಈ ವೇಳೆ ಸೋನಿಯಾಳ ಜತೆ ಜಗಳವಾಡಿ, ಅವನು ಅಲ್ಲಿಂದ ಹೊರಟುಹೋಗಿದ್ದ. ಆದರೆ, ಸೋನಿಯಾ ತನ್ನ ಸಹೋದರಿಯ ಸೋದರ ಮಾವ ವಿಜಯ್ಗೆ 50,000 ರೂ.ಗಳನ್ನು ನೀಡಿ, ಪತಿಯನ್ನು ಕೊಲ್ಲುವಂತೆ ಸುಪಾರಿ ನೀಡಿದ್ದಳು. ಆ ದಿನ ರಾತ್ರಿ, ಪ್ರೀತಮ್ ಟೆರೇಸ್ನಲ್ಲಿ ಮಲಗಿದ್ದಾಗ, ವಿಜಯ್ ಆತನನ್ನು ಕೊಂದು, ಶವವನ್ನು ಅಗ್ವಾನ್ಪುರದ ಬಳಿಯ ಚರಂಡಿಗೆ ಎಸೆದ. ಈ ಕೃತ್ಯದ ವಿಡಿಯೊವನ್ನು ವಿಜಯ್ ಸಾಮಾಜಿಕ ಮಾಧ್ಯಮದ ಮೂಲಕ ಸೋನಿಯಾಗೆ ಕಳುಹಿಸಿದ್ದ. 15 ದಿನಗಳ ಬಳಿಕ ಸೋನಿಯಾ, ತನ್ನ ಪತಿ ನಾಪತ್ತೆಯಾಗಿದ್ದಾನೆ ಎಂದು ಅಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಪೊಲೀಸರು ತನಿಖೆ ನಡೆಸಿದರೂ ಆರಂಭದಲ್ಲಿ ಯಾವುದೇ ಕುರುಹು ಸಿಗಲಿಲ್ಲ. ಆದರೆ, ಪ್ರೀತಮ್ನ ಮೊಬೈಲ್ ಫೋನ್ ಒಂದು ವರ್ಷದ ಬಳಿಕ ಸಕ್ರಿಯವಾದಾಗ, ಪೊಲೀಸರು ಆ ಫೋನ್ನ ಬೆನ್ನುಹಿಡಿದು ರೋಹಿತ್ನನ್ನು ಪತ್ತೆಹಚ್ಚಿದರು. ವಿಚಾರಣೆಯಲ್ಲಿ ರೋಹಿತ್ ಕೃತ್ಯವನ್ನು ಒಪ್ಪಿಕೊಂಡು, ಪ್ರಕರಣದ ಸಂಪೂರ್ಣ ವಿವರವನ್ನು ಬಿಚ್ಚಿಟ್ಟಿದ್ದ. ಈ ಮೊಬೈಲ್ ಫೋನ್ನಿಂದಾಗಿ ಪೊಲೀಸರಿಗೆ ಕೊಲೆಯ ರಹಸ್ಯ ಬಯಲಾಯಿತು.
ಕೊಲೆಯಾದ ಕೆಲವೇ ದಿನಗಳಲ್ಲಿ ಹರಿಯಾಣ ಪೊಲೀಸರು ಚರಂಡಿಯಲ್ಲಿ ಶವವನ್ನು ಪತ್ತೆಹಚ್ಚಿದ್ದರು. ಆದರೆ, ಗುರುತಿಸಲಾಗದ ಕಾರಣದಿಂದ ಅದು ಅಪರಿಚಿತ ಶವವೆಂದೇ ದಾಖಲಾಗಿತ್ತು. ದೆಹಲಿ ಪೊಲೀಸರ ತನಿಖೆಯಿಂದ ಈ ಶವವನ್ನು ಪ್ರೀತಮ್ ಎಂದು ಡಿಎನ್ಎ ಪರೀಕ್ಷೆಯ ಮೂಲಕ ಖಚಿತಪಡಿಸಲಾಯಿತು.
ಕೊಲೆಯ ಬಳಿಕ, ಸೋನಿಯಾ ಪ್ರೀತಮ್ನ ಆಟೋ ರಿಕ್ಷಾವನ್ನು 4.5 ಲಕ್ಷ ರೂ.ಗೆ ಮಾರಾಟ ಮಾಡಿದ್ದಳು ಮತ್ತು ಆತನ ಮೊಬೈಲ್ ಫೋನ್ನ್ನು ರೋಹಿತ್ಗೆ ನೀಡಿದ್ದಳು. ಸೋನಿಯಾ 15 ವರ್ಷದವಳಿದ್ದಾಗ ಪ್ರೀತಮ್ನನ್ನು ಪ್ರೀತಿಸಿ, ಕುಟುಂಬದವರ ಒಪ್ಪಿಗೆಯಿಲ್ಲದೇ ಮದುವೆಯಾಗಿದ್ದಳು. ಆದರೆ, ಕುಟುಂಬವು ಅಂತಿಮವಾಗಿ ಒಪ್ಪಿಕೊಂಡಿತ್ತು. ದಂಪತಿಗೆ 16 ವರ್ಷದ ಒಬ್ಬ ಗಂಡು ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ರೋಹಿತ್ನ ವಿರುದ್ಧವೂ ಕೊಲೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದಂತೆ ನಾಲ್ಕು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಮೂರನೇ ಆರೋಪಿ ವಿಜಯ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.





