ಬೆಂಗಳೂರು: ಅಮೆರಿಕಾ ಹಾಗೂ ಇರಾನ್ ನಡುವೆ ಕಳೆದ 110 ದಿನಗಳಿಂದ ಜಾಗತಿಕ ಆತಂಕಕ್ಕೆ ಕಾರಣವಾಗಿದ್ದ ಭೀಕರ ಯುದ್ಧಕ್ಕೆ ಕಡೆಗೂ ತೆರೆ ಬಿದ್ದಿದೆ. ಈ ಎರಡು ದೇಶಗಳ ನಡುವಿನ ಸಂಘರ್ಷದಿಂದಾಗಿ ಇಡೀ ಪ್ರಪಂಚವೇ ತಲ್ಲಣಗೊಂಡಿತ್ತು. ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ ಜಾಗತಿಕ ಮಾರುಕಟ್ಟೆಗಳು ನಿಟ್ಟಿಸಿರು ಬಿಟ್ಟಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣ ತಹಬದಿಗೆ ಬರುವ ಮುನ್ಸೂಚನೆ ಸಿಕ್ಕಿದೆ.
ರಾಕೆಟ್ನಂತೆ ಏರಿದ್ದ ತೈಲ ದರಕ್ಕೆ ಬ್ರೇಕ್!
ಯುದ್ಧ ಆರಂಭವಾದ ದಿನದಿಂದ ಜಾಗತಿಕವಾಗಿ ತೈಲ ಬಿಕ್ಕಟ್ಟು ತೀವ್ರವಾಗಿ ಕಾಡಿತ್ತು. ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಕಚ್ಚಾ ತೈಲಕ್ಕಾಗಿ ಇರಾನ್ ಒಳಗೊಂಡಿರುವ ಮಧ್ಯಪ್ರಾಚ್ಯ (Gulf) ರಾಷ್ಟ್ರಗಳನ್ನೇ ಹೆಚ್ಚಾಗಿ ಅವಲಂಬಿಸಿವೆ. ಯುದ್ಧದ ಹಿನ್ನೆಲೆಯಲ್ಲಿ ತೈಲ ಪೂರೈಕೆ ಸಂಪೂರ್ಣ ಏರುಪೇರಾಗಿ, ಬೆಲೆಗಳು ರಾಕೆಟ್ ವೇಗದಲ್ಲಿ ಚಿಮ್ಮಿದ್ದವು. ಇದೀಗ ದೀರ್ಘಾವಧಿಯ ನಂತರ ಯುದ್ಧ ನಿಂತಿರುವುದರಿಂದ ಕಚ್ಚಾ ತೈಲದ ಸರಬರಾಜು ಮತ್ತೆ ಸುಗಮಗೊಳ್ಳಲಿದ್ದು, ಜಾಗತಿಕ ಇಂಧನ ಮಾರುಕಟ್ಟೆ ಶಾಂತವಾಗಿದೆ.
ಚೇತರಿಸಿಕೊಂಡ ಷೇರುಪೇಟೆ: ಹೂಡಿಕೆದಾರರ ಮೊಗದಲ್ಲಿ ಮಂದಹಾಸ
ಯುದ್ಧದ ನೆರಳಿನಲ್ಲೇ ತತ್ತರಿಸಿದ್ದ ದಲ್ಲಾಳ್ ಸ್ಟ್ರೀಟ್ನಲ್ಲಿ ಮತ್ತೆ ಸಂಭ್ರಮ ಮನೆಮಾಡಿದೆ. ಕಳೆದ 110 ದಿನಗಳಿಂದ ನಿಫ್ಟಿ ಹಾಗೂ ಸೆನ್ಸೆಕ್ಸ್ ತೀವ್ರ ಏರಿಳಿತ ಕಂಡು ಹೂಡಿಕೆದಾರರನ್ನು ಕಂಗಾಲು ಮಾಡಿತ್ತು. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದವರು ಮತ್ತು ಹೊಸದಾಗಿ ಮಾರುಕಟ್ಟೆಗೆ ಪ್ರವೇಶಿಸಲು ಬಯಸಿದ್ದವರು ಗೊಂದಲದಕ್ಕೀಡಾಗಿದ್ದರು. ಆದರೆ, ಶಾಂತಿ ಒಪ್ಪಂದದ ಸುದ್ದಿ ಹೊರಬೀಳುತ್ತಿದ್ದಂತೆ ನಿಫ್ಟಿ ಮತ್ತು ಸೆನ್ಸೆಕ್ಸ್ ಭಾರಿ ಜಿಗಿತ ಕಂಡಿದ್ದು, ಹೂಡಿಕೆದಾರರು ನಿರಾಳರಾಗಿದ್ದಾರೆ.
ಭಾರತದಲ್ಲಿ ಇಳಿಯುತ್ತಾ ಪೆಟ್ರೋಲ್-ಡೀಸೆಲ್ ರೇಟ್?
ಯುದ್ಧದ ಅವಧಿಯಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹಂತ ಹಂತವಾಗಿ ಸುಮಾರು 10 ರೂಪಾಯಿಗಳವರೆಗೆ ಏರಿಕೆ ಕಂಡಿದ್ದವು. ಇದು ದೇಶೀಯವಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿತ್ತು. ಇದೀಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಭಾರಿ ಕುಸಿತ ಕಂಡಿರುವುದರಿಂದ, ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ದೇಶದಲ್ಲಿ ಇಂಧನ ದರ ಇಳಿಕೆ ಮಾಡುತ್ತವಾ ಎಂಬ ಯಕ್ಷಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಮುಂಬರುವ ದಿನಗಳಲ್ಲಿ ತೈಲ ಬೆಲೆ ಇಳಿಕೆಯಾದರೆ ಗ್ರಾಹಕರು ನಿಟ್ಟಿಸಿರು ಬಿಡುವುದಂತೂ ಗ್ಯಾರಂಟಿ.
ಯುದ್ಧ ನಿಂತಿದ್ದಕ್ಕೆ ಇಸ್ರೇಲ್ ಅಸಮಾಧಾನ!
ಮತ್ತೊಂದೆಡೆ, ಇರಾನ್ ಮೇಲಿನ ಯುದ್ಧವನ್ನು ಅಮೆರಿಕಾ ದಿಢೀರ್ ನಿಲ್ಲಿಸಿರುವುದು ಅದರ ಪರಮಾಪ್ತ ರಾಷ್ಟ್ರವಾದ ಇಸ್ರೇಲ್ನ ಕೆಂಗಣ್ಣಿಗೆ ಕಾರಣವಾಗಿದೆ. ಇರಾನ್ನ ಪರಮಾಣು ಮತ್ತು ಮಿಲಿಟರಿ ಶಕ್ತಿಯನ್ನು ಸಂಪೂರ್ಣವಾಗಿ ಮಟ್ಟಹಾಕಬೇಕೆಂದು ಬಯಸಿದ್ದ ಇಸ್ರೇಲ್, ಅಮೆರಿಕಾದ ಈ ಶಾಂತಿ ಒಪ್ಪಂದದ ನಡೆಯಿಂದ ತೀವ್ರ ಅಸಮಾಧಾನಗೊಂಡಿದೆ ಎನ್ನಲಾಗಿದೆ. ಅಮೆರಿಕಾದ ವಿರುದ್ಧವೇ ಬುಸುಗುಡುತ್ತಿರುವ ಇಸ್ರೇಲ್, ಮುಂಬರುವ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಯಾವ ಹೆಜ್ಜೆ ಇಡಲಿದೆ ಎಂಬುದು ಕುತೂಹಲ ಮೂಡಿಸಿದೆ.




