ಚೆನ್ನೈ, ಮಾರ್ಚ್ 15: ತಮಿಳುನಾಡಿನ ರಾಜಧಾನಿ ಚೆನ್ನೈ ಸಮೀಪದ ನವಲ್ಲೂರ್ ಪ್ರದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಸ್ಪೋಟಗೊಂಡಿದ್ದು, ಈ ದುರ್ಘಟನೆಯಲ್ಲಿ ಇಬ್ಬರು ಪುಟ್ಟ ಮಕ್ಕಳು ಸಾವನ್ನಪ್ಪಿದ್ದು, ಕನಿಷ್ಠ ಏಳು ಮಂದಿ ತೀವ್ರ ಸುಟ್ಟ ಗಾಯಗಳಾಗಿವೆ.
ಈ ಘಟನೆ ಚೆನ್ನೈ ದಕ್ಷಿಣ ಭಾಗದ ಒಎಂಆರ್ (ಓಲ್ಡ್ ಮಹಾಬಲಿಪುರಂ ರೋಡ್) ಪ್ರದೇಶದ ನವಲ್ಲೂರ್ನ ಚಾಮುಂಡೀಶ್ವರರ್ ನಗರ 3ನೇ ಬೀದಿಯಲ್ಲಿ ಸಂಭವಿಸಿದೆ. ಪರಸ್ಪರ ಪಕ್ಕಪಕ್ಕದಲ್ಲಿದ್ದ ಮೂರು ಮನೆಗಳಲ್ಲಿ ಏಕಾಏಕಿ ಭಾರೀ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟದ ಪರಿಣಾಮ ಮನೆಯ ಗೋಡೆಗಳು ಕುಸಿದು ಬಿದ್ದಿದೆ.
ಸುತ್ತಮುತ್ತಲಿನ ನಿವಾಸಿಗಳು ಗಾಬರಿಯಿಂದ ಹೊರಗೆ ಓಡಿ ಬಂದು ಘಟನೆಯ ಸ್ಥಳಕ್ಕೆ ಧಾವಿಸಿದರು. ಅವಶೇಷಗಳ ಅಡಿಯಲ್ಲಿ ಕೆಲವರು ಸಿಲುಕಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು.
ಈ ದುರಂತದಲ್ಲಿ ಸಂಜಯ್ ಕುಮಾರ್ ಮತ್ತು ಸೋನಿಯಾ ದಂಪತಿಯ ಮಕ್ಕಳಾದ ಒಂದೂವರೆ ವರ್ಷದ ಧೀರನ್ ಮತ್ತು ನಾಲ್ಕು ವರ್ಷದ ಕೃತಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಫೋಟದ ಪರಿಣಾಮ ಹಲವು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ತಮಿಳುನಾಡು ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಏಳು ಮಂದಿಯನ್ನು ಅವಶೇಷಗಳೊಳಗಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರಲ್ಲಿ ಏಳು ವರ್ಷದ ಬಾಲಕ ಪ್ರದೀಪ್, ಸೆಲ್ವಿ (40), ವೈರಮುತ್ತು (45), ಸಂಜೀವ್ ಕುಮಾರ್ (27), ಸೋನಿಯಾ (25), ಮುರುಗನ್ (45) ಮತ್ತು ಚಿತ್ರಾ (55) ಸೇರಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸಮೀಪದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಮೂರು ಮನೆಗಳು ಭಾಗಶಃ ಕುಸಿದು ಭಾರೀ ಹಾನಿಯಾಗಿದೆ. ಮನೆಯ ಗೋಡೆಗಳು ಒಡೆದುಹೋಗಿದ್ದು, ಮನೆಯ ಒಳಗಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.





