ಗುಜರಾತ್: ಗುಜರಾತ್ನ ಭಾವನಗರ ನಗರದಲ್ಲಿ ನಂಬಲಾಗದಂತಹ ದಾರುಣ ಘಟನೆ ನಡೆದಿದೆ. ಮದುವೆಗೆ ಕೇವಲ ಒಂದು ಗಂಟೆಗೂ ಮೊದಲೇ ವಧುವನ್ನು ವರ ಕೊಲೆ ಮಾಡಿದ್ದಾನೆ.
ಘಟನೆ ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ಶನಿವಾರ ರಾತ್ರಿ ನಡೆದಿದೆ. ಸಜನ್ ಬರಯ್ಯ ಎಂಬವರೇ ಆರೋಪಿಯಾಗಿದ್ದು, ಮೃತಪಟ್ಟ ವಧುವಿನ ಹೆಸರು ಸೋನಿ ಹಿಮ್ಮತ್ ರಾಥೋಡ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಳೆದ ಒಂದೂವರೆ ವರ್ಷಗಳಿಂದ ಕುಟುಂಬದ ವಿರೋಧದ ನಡುವೆಯೂ ಒಟ್ಟಿಗೆ ವಾಸಿಸುತ್ತಿದ್ದರು. ಅವರ ನಿಶ್ಚಿತಾರ್ಥಕ್ಕೂ ಬಹಳ ಸಮಯವಾಗಿದ್ದು, ಮದುವೆಗೆ ಬೇಕಾದ ಪ್ರಮುಖ ಎಲ್ಲ ಕಾರ್ಯಳು ಪೂರ್ಣಗೊಂಡಿದ್ದವು. ಶನಿವಾರ ರಾತ್ರಿ ಇಬ್ಬರೂ ಹೊಸ ಜೀವನ ಆರಂಭಿಸಬೇಕಾಗಿತ್ತು.
ಪೊಲೀಸರ ಮಾಹಿತಿ ಪ್ರಕಾರ, ಸೀರೆ ಆಯ್ಕೆ ಮತ್ತು ಹಣಕಾಸು ವಿಷಯಗಳ ಬಗ್ಗೆ ಇಬ್ಬರ ನಡುವೆ ತೀವ್ರ ವಾಗ್ವಾದ ಶುರುವಾಗಿದೆ. ಸಜನ್ ಬರಯ್ಯ ಕೋಪದಿಂದ ಕಬ್ಬಿಣದ ಪೈಪ್ ಎತ್ತಿಕೊಂಡು ಸೋನಿಗೆ ಹೊಡೆದಿದ್ದಾನೆ. ಆಕೆಯ ತಲೆಯನ್ನು ಗೋಡೆಗೆ ಗುದ್ದಿ ಗಂಭೀರ ಗಾಯಗೊಳಿಸಿದ್ದಾನೆ. ಈ ಹಲ್ಲೆಯಿಂದಾಗಿ ಸೋನಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಕೊಲೆಯ ನಂತರ ಆರೋಪಿ ಮನೆಯನ್ನು ಧ್ವಂಸಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮನೆಯಲ್ಲಿ ಎಲ್ಲೆಡೆ ರಕ್ತದ ಕಲೆಗಳು ಮತ್ತು ಒಡವೆಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದವು.
ಒಂದೂವರೆ ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರೂ, ಕುಟುಂಬಗಳು ಇವರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದವು. ಆದರೂ ಇವರು ಮದುವೆಗೆ ಮುಂದಾಗಿದ್ದರು. ಮದುವೆಯ ದಿನವೇ ಇಂತಹ ಘಟನೆ ನಡೆದಿದೆ. “ಸೀರೆ ಮತ್ತು ಹಣದ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಕೋಪದಿಂದಲೇ ಈ ಕೃತ್ಯ ನಡೆದಿದೆ” ಎಂದು ಭಾವನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಆರ್.ಆರ್. ಸಿಂಘಾಲ್ ಹೇಳಿದ್ದಾರೆ.
ಮಾಹಿತಿ ದೊರೆತ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿತು. ಮನೆಯನ್ನು ಪರಿಶೀಲಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು. ಸೋನಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು ಆರೋಪಿ ಸಜನ್ ಬರಯ್ಯನನ್ನು ಬಂಧಿಸಲು ಬಲೆ ಬೀಸಿದ್ದಾರೆ.
ಪಾಟ್ನಾದಲ್ಲಿ ಭೀಕರ ಕೃತ್ಯ: ಅಕ್ಕ-ತಮ್ಮನ ಶವ ಸುಟ್ಟು ಕೊಲೆ, ಕುಟುಂಬದ ಆಕ್ರೋಶ!
ಬಿಹಾರದ ಪಾಟ್ನಾದ ಫುಲ್ವಾರಿ ಶರೀಫ್ನಲ್ಲಿ ನಡೆದ ಭೀಕರ ಘಟನೆಯೊಂದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. 15 ವರ್ಷದ ಹುಡುಗಿ ಅಂಜಲಿ ಕುಮಾರಿ ಮತ್ತು 10 ವರ್ಷದ ಬಾಲಕ ಅಂಶುಲ್ ಕುಮಾರ್ರ ಸುಟ್ಟ ಶವಗಳು ಅವರ ಮನೆಯೊಳಗಿನ ಕೋಣೆಯಲ್ಲಿ ಪತ್ತೆಯಾಗಿವೆ. ಈ ಘಟನೆಯನ್ನು ಕೊಲೆ ಎಂದು ಆರೋಪಿಸಿರುವ ಮೃತರ ಕುಟುಂಬ, ಯಾರೋ ಮಕ್ಕಳನ್ನು ಕೊಂದು ನಂತರ ಅವರ ದೇಹಗಳಿಗೆ ಬೆಂಕಿ ಹಚ್ಚಿ ಅಪರಾಧವನ್ನು ಮರೆಮಾಚಲು ಯತ್ನಿಸಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದೆ.
ಪಾಟ್ನಾದ ಫುಲ್ವಾರಿ ಶರೀಫ್ನಲ್ಲಿ ನಡೆದ ಈ ದುರ್ಘಟನೆಯಲ್ಲಿ, ಮೃತರ ತಾಯಿ, ಎಐಎಂಎಸ್ (AIIMS) ಪಾಟ್ನಾದಲ್ಲಿ ದಾದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆ, ಕೆಲಸದಿಂದ ಮನೆಗೆ ಹಿಂದಿರುಗಿದಾಗ ಈ ಭಯಾನಕ ದೃಶ್ಯವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. “ಮನೆಯ ಬಳಿ ಮೂವರು ಅಪರಿಚಿತ ಪುರುಷರು ಕಾಣಿಸಿಕೊಂಡಿದ್ದರು. ನಂತರ ನನ್ನ ಮಕ್ಕಳ ಶವಗಳು ಸುಟ್ಟ ಸ್ಥಿತಿಯಲ್ಲಿ ಕೋಣೆಯಲ್ಲಿ ಕಂಡುಬಂದಿವೆ. ಇದು ಕೊಲೆಯಾಗಿದ್ದು, ನಂತರ ಶವಗಳಿಗೆ ಬೆಂಕಿ ಹಚ್ಚಲಾಗಿದೆ. ಒಂದು ವೇಳೆ ಇದು ಅಪಘಾತವಾಗಿದ್ದರೆ, ಮಕ್ಕಳು ತಮ್ಮ ಜೀವ ಉಳಿಸಿಕೊಳ್ಳಲು ಓಡಾಡುತ್ತಿದ್ದರು ಇಲ್ಲವೇ ಬಾಗಿಲು ತೆರೆಯುವ ಪ್ರಯತ್ನ ಮಾಡುತ್ತಿದ್ದರು. ಆದರೆ ಯಾವುದೇ ಚಿಹ್ನೆಗಳಿಲ್ಲ. ಇದು ಕೊಲೆ ಎಂದು ಸ್ಪಷ್ಟವಾಗುತ್ತದೆ,” ಎಂದು ಮೃತರ ತಂದೆ ಲಲ್ಲನ್ ಗುಪ್ತಾ ಹೇಳಿದ್ದಾರೆ.
ಲಲ್ಲನ್ ಗುಪ್ತಾ ಸ್ಥಳೀಯ ಚುನಾವಣಾ ಕಚೇರಿಯಲ್ಲಿ ಉದ್ಯೋಗಿಯಾಗಿದ್ದು, ಅವರ ಪತ್ನಿಯ ಕಿರಿಚಾಟದಿಂದಾಗಿ ನೆರೆಹೊರೆಯವರು ಘಟನೆಯ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಶವಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ತನಿಖೆಯನ್ನು ಆರಂಭಿಸಿದ್ದಾರೆ.
ಪಾಟ್ನಾದ ಫುಲ್ವಾರಿ ಶರೀಫ್ ಡಿಎಸ್ಪಿ-2 ದೀಪಕ್ ಕುಮಾರ್ ಅವರು, “ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಶವಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತಾಂತ್ರಿಕ ಮತ್ತು ಭೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ. ಆದರೆ, ಪೊಲೀಸರು ಈ ಪ್ರಕರಣದಲ್ಲಿ ಕ್ರಿಮಿನಲ್ ಕೋನವನ್ನು ಇನ್ನೂ ಸ್ಪಷ್ಟವಾಗಿ ದೃಢಪಡಿಸಿಲ್ಲ. ಸಾವಿನ ನಿಖರ ಕಾರಣವನ್ನು ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
ಕುಟುಂಬದ ಆರೋಪದಂತೆ, ಈ ಘಟನೆಯ ಹಿಂದೆ ಕೊಲೆಯ ಉದ್ದೇಶವಿರಬಹುದು ಎಂಬ ಶಂಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು, ಫೋರೆನ್ಸಿಕ್ ವರದಿಗಳು ಮತ್ತು ಸ್ಥಳೀಯರಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ತನಿಖೆ ಮುಂದುವರಿಯುತ್ತಿದೆ.





