ನವದೆಹಲಿ/ಬೆಂಗಳೂರು: ದೇಶಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಭಾರತ್ ಬಂದ್ಗೆ ಕರೆ ನೀಡಿದ್ದು, ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ರದ್ದತಿ ಸೇರಿದಂತೆ ಒಟ್ಟು ಒಂಬತ್ತು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಪ್ರತಿಭಟನೆ ನಡೆಯುತ್ತಿದೆ.
ಐಎನ್ಟಿಯುಸಿ, ಎಐಟಿಯುಸಿ, ಎಚ್ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್ಇಡಬ್ಲ್ಯೂಎ, ಎಐಸಿಸಿಟಿಯು, ಎಲ್ಪಿಎಫ್ ಹಾಗೂ ಯುಟಿಯುಸಿ ಸೇರಿದಂತೆ 10 ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳು ಈ ಬಂದ್ಗೆ ಬೆಂಬಲ ನೀಡಿವೆ. ಈ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ಕಿಸಾನ್ ಸಭಾ ಸಹ ಸಂಪೂರ್ಣ ಬೆಂಬಲ ಸೂಚಿಸಿವೆ.
ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ
ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆ 11 ಗಂಟೆಗೆ ಟೌನ್ ಹಾಲ್ನಿಂದ ಬೃಹತ್ ಪ್ರತಿಭಟನೆ ನಡೆಸಲು ಕಾರ್ಮಿಕ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ. ರಾಜ್ಯ ಕಾರ್ಮಿಕ ಸಂಘಟನೆಗಳು ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿವೆ.
ಸೇವೆಗಳಲ್ಲಿ ವ್ಯತ್ಯಯ ಇದೆಯೇ?
ಭಾರತ್ ಬಂದ್ಗೆ ಕರೆ ನೀಡಿದರೂ ರಾಜ್ಯದಲ್ಲಿ ಅಗತ್ಯ ಸೇವೆಗಳು ಬಹುತೇಕ ಎಂದಿನಂತೆ ಮುಂದುವರಿಯಲಿವೆ.
-
ಬಸ್, ರೈಲು, ಮೆಟ್ರೋ ಸಂಚಾರದಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಇಲ್ಲ
-
ಆಟೋ ಹಾಗೂ ಕ್ಯಾಬ್ ಸೇವೆಗಳು ಲಭ್ಯ
-
ಅಂಗಡಿ ಮುಂಗಟ್ಟುಗಳು ತೆರೆದಿರುವ ಸಾಧ್ಯತೆ
-
ಶಾಲೆ ಹಾಗೂ ಕಾಲೇಜುಗಳ ಕಾರ್ಯಾಚರಣೆ ಸಾಮಾನ್ಯ
ಆದರೆ ಕೈಗಾರಿಕಾ ವಲಯದಲ್ಲಿ ಬಂದ್ ಪರಿಣಾಮ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬಿಎಸ್ಎನ್ಎಲ್ ಮತ್ತು ವಿಮಾ ಕ್ಷೇತ್ರದ ಕೆಲವು ಸಂಘಟನೆಗಳು ಸೇವೆ ಸ್ಥಗಿತಗೊಳಿಸುವ ಸೂಚನೆ ಇದೆ ಎನ್ನಲಾಗಿದೆ…
ಪ್ರಮುಖ ಬೇಡಿಕೆಗಳ ಪಟ್ಟಿ
ಕಾರ್ಮಿಕ ಸಂಘಟನೆಗಳು ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು ಹೀಗಿವೆ.
-
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿ
-
ನರೇಗಾ ಯೋಜನೆ ಪುನರ್ ಸ್ಥಾಪನೆ
-
ಭೂಸ್ವಾಧೀನ ಕಾಯ್ದೆ ಮತ್ತು ಬೀಜ ಮಸೂದೆ ಹಿಂಪಡೆಯುವುದು
-
ವಿದ್ಯುತ್ ಖಾಸಗೀಕರಣ ನಿಲ್ಲಿಸುವುದು
-
ವಿಮಾ ತಿದ್ದುಪಡಿ ಕಾಯ್ದೆ ಹಾಗೂ ಶಾಂತಿ ಕಾಯ್ದೆ ರದ್ದತಿ
-
ಕನಿಷ್ಠ ವೇತನ ಪರಿಷ್ಕರಣೆ
ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಹೋರಾಟ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಆಟೋ ಯೂನಿಯನ್ ಬೆಂಬಲ
ಬೆಂಗಳೂರು ಆಟೋ ರಿಕ್ಷಾ ಚಾಲಕರ ಯೂನಿಯನ್ ಕೂಡಾ ಈ ಬಂದ್ಗೆ ಬೆಂಬಲ ಸೂಚಿಸಿದೆ. ಆದರೆ ಇಂದು ಆಟೋ ಸಂಚಾರ ಸಂಪೂರ್ಣ ಸ್ಥಗಿತವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರಿಗೆ ಸೇವೆ ನೀಡುವುದನ್ನು ಮುಂದುವರಿಸಲಿದ್ದಾರೆ.
ಆಟೋ ಯೂನಿಯನ್ನ ಪ್ರಮುಖ ಬೇಡಿಕೆಗಳು ಇಂತಿವೆ..
-
ಅನಧಿಕೃತ ಬೈಕ್ ಟ್ಯಾಕ್ಸಿಗಳಿಗೆ ಸುಗ್ರೀವಾಜ್ಞೆ ಮೂಲಕ ನಿಷೇಧ
-
ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ–2019 ವಾಪಸ್
-
ಚಾಲಕರ ಮೇಲಿನ ಹಿಟ್ ಅಂಡ್ ರನ್ ಪ್ರಕರಣಗಳನ್ನು ಹಿಂಪಡೆಯುವುದು
-
ಸಾರಿಗೆ ಚಾಲಕರ ಕಲ್ಯಾಣ ಮಂಡಳಿಗೆ ₹500 ಕೋಟಿ ಅನುದಾನ
-
ಓಲಾ, ಊಬರ್ ಸೇರಿದಂತೆ ಖಾಸಗಿ ಆಪ್ ವ್ಯವಸ್ಥೆ ನಿಯಂತ್ರಣೆ
-
ಆಟೋ ಚಾಲಕರಿಗೆ ತಿಂಗಳಿಗೆ ₹25,000 ಸಹಾಯಧನ
-
ಸರ್ಕಾರದಿಂದ ಸ್ವಂತ ಆಪ್ ಅಭಿವೃದ್ಧಿ
ಭಾರತ್ ಬಂದ್ ಪರಿಣಾಮವಾಗಿ ಸಾರ್ವಜನಿಕ ಸೇವೆಗಳಲ್ಲಿ ಹೆಚ್ಚಿನ ವ್ಯತ್ಯಯ ಕಂಡುಬರುವ ಸಾಧ್ಯತೆ ಕಡಿಮೆ ಇದ್ದರೂ ಕೈಗಾರಿಕಾ ಹಾಗೂ ಸರ್ಕಾರಿ ವಲಯಗಳಲ್ಲಿ ಪ್ರತಿಭಟನೆಯ ಪ್ರಭಾವ ಗೋಚರಿಸಬಹುದು.





