ಅಯೋಧ್ಯೆಯ ಪವಿತ್ರ ಭೂಮಿಯು ಇಂದು ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಿದ್ಧವಾಗಿದೆ. ವರ್ಷಗಳ ಕಾಲ ನಿರೀಕ್ಷಿತವಾಗಿದ್ದ ರಾಮಮಂದಿರದ ನಿರ್ಮಾಣ ಕಾರ್ಯ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ, ಶಿಖರದ ಮೇಲೆ ಧರ್ಮ ಧ್ವಜಾರೋಹಣಕ್ಕೆ ಶುಭ ಮುಹೂರ್ತ ನಿಗದಿಯಾಗಿದೆ. ಈ ಐತಿಹಾಸಿಕ ಧರ್ಮ ಧ್ವಜಾರೋಹಣ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದಾರೆ.
ಇಂದು ಬೆಳಗ್ಗೆ 11:58ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶುಭ ಮುಹೂರ್ತ ನಿಗದಿಯಾಗಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಭಗವಾಧ್ವಜವನ್ನು ಶಿಖರದ ಮೇಲೆ ಹಾರಿಸಲಿದ್ದಾರೆ. ರಾಮಮಂದಿರದ ಮೇಲ್ಭಾಗದಲ್ಲಿ ಹಾರಲಿರುವ 10 ಅಡಿ ಎತ್ತರದ ಭಗವಾಧ್ವಜ ಧಾರ್ಮಿಕವಾಗಿ ಅಪಾರ ಮಹತ್ವವನ್ನು ಹೊಂದಿದೆ.
ಇಂದಿನ ದಿನಾಂಕಕ್ಕೆ ವಿಶೇಷವಾದ ಆಧ್ಯಾತ್ಮಿಕ ಮಹತ್ವವೂ ಇದೆ. ಇಂದು ಮಾರ್ಗಶಿರ ಶುಕ್ಲ ಪಂಚಮಿ ತಿಥಿ. ಪುರಾಣಗಳ ಪ್ರಕಾರ ಇದೇ ದಿನ ಶ್ರೀರಾಮ ಹಾಗೂ ಸೀತೆ ಜೊತೆ ದೈವಿಕ ವಿವಾಹ ನಡೆದಿದ್ದು, ಭಗವಂತನ ಜೀವನದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿದೆ.
ಭಾರತದ ಇತಿಹಾಸದಲ್ಲಿ ಮಹಾನ ವ್ಯಕ್ತಿಗಳಲ್ಲಿ ಒಬ್ಬರಾದ ಸಿಖ್ ಗುರು ತೇಗ್ ಬಹದ್ದೂರ್ ಅವರ ಬಲಿದಾನದ ದಿನವೂ ಇದೇ. ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಈ ಮಹಾನ್ ಗುರುಗಳು ಅಯೋಧ್ಯೆಯಲ್ಲೇ 48 ಗಂಟೆಗಳ ಕಾಲ ನಿರಂತರ ತಪಸ್ಸು ನಡೆಸಿದ್ದರೆಂಬ ಉಲ್ಲೇಖವಿದೆ.
ಧ್ವಜಾರೋಹಣ ಕಾರ್ಯಕ್ರಮಕ್ಕಾಗಿ ಅಯೋಧ್ಯೆಯಾದ್ಯಂತ ವಿಶೇಷ ಸಿದ್ಧತೆ ನಡೆದಿದೆ. ದೇಗುಲದ ಶಿಖರದ ಮೇಲೆ ಹಾರಲಿರುವ ಭಗವಾಧ್ವಜವು ಕೇಸರಿಯ ಬಣ್ಣದಲ್ಲಿ ಆಕರ್ಷಕವಾಗಿ ತಯಾರಾಗಿದ್ದು, ರಾಮನ ನಾಮ ಮತ್ತು ಧಾರ್ಮಿಕ ಚಿಹ್ನೆಗಳೊಂದಿಗೆ ಅಲಂಕರಿಸಲಾಗಿದೆ. ದೇಗುಲದ ಯಜಮಾನರು ಮತ್ತು ವೇದಪಂಡಿತರು ವಿಶೇಷ ಮಂತ್ರೋಚ್ಚಾರಣೆಗಳೊಂದಿಗೆ ಈ ಕಾರ್ಯವನ್ನು ನೆರವೇರಿಸಲಿದ್ದಾರೆ.
ಭಗವಾನ ರಾಮನ ದೇಗುಲದಲ್ಲಿ ಇಂತಹ ದೈವಿಕ ದೃಶ್ಯ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಅಯೋಧ್ಯೆಗೆ ಆಗಮಿಸಿದ್ದು, ದೀಪಾಲಂಕಾರ, ಧಾರ್ಮಿಕ ಗಾನ, ಭಜನೆ, ಮಂಗಲ ವಾದ್ಯಗಳ ನಾದ ಇವೆಲ್ಲವು ಅಯೋಧ್ಯೆಯ ಈ ಕಾರ್ಯಕ್ರಮಕ್ಕೆ ಮೆರಗು ತಂದಿದೆ.
ನಾಳೆ ಅಯೋಧ್ಯೆ ರಾಮ ಮಂದಿರದಲ್ಲಿ ಧ್ವಜಾರೋಹಣ: ಪ್ರಧಾನಿ ಮೋದಿ ಭಾಗಿ
ಅಯೋಧ್ಯೆ, ನವೆಂಬರ್ 24: ಕಳೆದ ವರ್ಷ ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆಯ ಮೂಲಕ ಜಗತ್ತಿನ ಗಮನ ಸೆಳೆದಿದ್ದ ಅಯೋಧ್ಯಾ ಶ್ರೀ ರಾಮ ಮಂದಿರ ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಿದ್ಧವಾಗಿದೆ. ನಾಳೆ (ನವೆಂಬರ್ 25) ಮಾರ್ಗಶಿರ ಮಾಸದ ಶುಕ್ಲ ಪಂಚಮಿ, ಶ್ರೀ ರಾಮ-ಸೀತೆಯ ವಿವಾಹ ಪಂಚಮಿಯ ಶುಭ ಅಭಿಜಿತ್ ಮುಹೂರ್ತದಲ್ಲಿ ದೇವಾಲಯದ ಶಿಖರದ ಮೇಲೆ ಧ್ವಜಾರೋಹಣ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಧ್ವಜ ಏರಿಸಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆಯಾಗಿದೆ.
ಅಯೋಧ್ಯೆ ನಗರ ಸದ್ಯ ಸಂಪೂರ್ಣವಾಗಿ ಕೇಸರಿಮಯವಾಗಿ ಕಂಗೊಳಿಸುತ್ತಿದೆ. ರಸ್ತೆಗಳು, ಚೌಕಗಳು, ಮಂದಿರದ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಪ್ರವೇಶ ದ್ವಾರಗಳು ಕಳೆಗಟ್ಟಿದ್ದು, ಯಾತ್ರಾರ್ಥಿಗಳು ಹಾಗೂ ಭಕ್ತರ ಆಗಮನದಿಂದ ಸ್ಥಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ದೀಪಗಳನ್ನು ಬೆಳಗಿಸಲಾಗಿದ್ದು, ದೇವಸ್ಥಾನದ ಸುತ್ತಲೂ ಭವ್ಯ ಅಲಂಕಾರ ಮಾಡಲಾಗಿದೆ.
22 ಅಡಿ ಉದ್ದದ ಧಾರ್ಮಿಕ ಧ್ವಜ
ಈ ಸಂದರ್ಭದಲ್ಲಿ ಏರಿಸಲಾದ ಕೇಸರಿ ಬಣ್ಣದ ಧ್ವಜವು 22 ಅಡಿ ಉದ್ದ ಮತ್ತು 11 ಅಡಿ ಎತ್ತರ ಹೊಂದಿದೆ. ಹಿಂದೂ ಸಂಪ್ರದಾಯದಲ್ಲಿ ಧ್ವಜಾರೋಹಣವು ಧರ್ಮದ ವಿಜಯ ಎಂದು ಹೇಳಲಾಗುತ್ತದೆ. ಧ್ವಜದ ಮದ್ಯದಲ್ಲಿ ಸೂರ್ಯನ ಆಕೃತಿ ಮತ್ತು ಅದರ ಮೇಲೆ ‘ಓಂ’ ಅಕ್ಷರ ಕೆತ್ತಲಾಗಿದೆ. ಈ ಸಂಕೇತಗಳು ಭಗವಾನ್ ರಾಮನ ತೇಜಸ್ಸು, ಶೌರ್ಯ ಹಾಗೂ ವೈಭವವನ್ನು ಪ್ರತಿಬಿಂಬಿಸುತ್ತವೆ.
ಧ್ವಜಾರೋಹಣಕ್ಕಾಗಿ ಕಳೆದ ಕೆಲ ದಿನಗಳಿಂದ ಅಯೋಧ್ಯೆಯಲ್ಲಿ ವಿಶೇಷ ಹೋಮ-ಹವನಗಳು ನಡೆಯುತ್ತಿದೆ. ಸ್ಥಳೀಯ ಪುರೋಹಿತರು, ವೇದ ಪಂಡಿತರು ಮತ್ತು ವಿವಿಧ ಮಠದ ಪ್ರತಿನಿಧಿಗಳು ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಈ ಧ್ವಜಾರೋಹಣ ಮಾರ್ಗಶಿರ ಮಾಸದ ಶುಕ್ಲ ಪಕ್ಷ ಪಂಚಮಿಯ ಪವಿತ್ರ ದಿನ, ಶ್ರೀರಾಮ–ಮಾತಾ ಸೀತೆಯ ವಿವಾಹ ಪಂಚಮಿಯ ಅಭಿಜಿತ್ ಮುಹೂರ್ತದಲ್ಲಿ ನಡೆಯಲಿದೆ. ಇದೇ ದಿನ 9ನೇ ಸಿಖ್ ಗುರು, ಗುರು ತೇಜ್ ಬಹದ್ದೂರ್ ಜಿ ಅವರ ಹುತಾತ್ಮ ದಿನವೂ ಆಗಿದ್ದು, ಅವರಿಗೆ ಅಯೋಧ್ಯೆಯೊಂದಿಗೆ ವಿಶೇಷ ನಂಟಿದೆ. 17ನೇ ಶತಮಾನದಲ್ಲಿ ಗುರು ತೇಜ್ ಬಹದ್ದೂರ್ ಅವರು 48 ಗಂಟೆಗಳ ಕಾಲ ಅಯೋಧ್ಯೆಯಲ್ಲಿ ಧ್ಯಾನ ಮಾಡಿದ್ದರೆಂದು ಐತಿಹಾಸಿಕ ದಾಖಲೆಗಳು ತಿಳಿಸುತ್ತವೆ.
ಯಾತ್ರಾರ್ಥಿಗಳು ಹೆಚ್ಚುತ್ತಿರುವ ಹಿನ್ನೆಲೆ ಅಯೋಧ್ಯೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಭಾರಿ ವಾಹನಗಳ ಪ್ರವೇಶವನ್ನು ಈಗಾಗಲೇ ನಿಷೇಧಿಸಲಾಗಿದ್ದು, ಮುಖ್ಯ ಮಾರ್ಗಗಳಲ್ಲಿ ಸಂಚಾರ ನಿಯಂತ್ರಿಸಲಾಗಿದೆ. ದೇವಸ್ಥಾನದ ಸಮೀಪ ಡ್ರೋನ್ ವ್ಯವಸ್ಥೆ, ಹೆಚ್ಚುವರಿ ಪೊಲೀಸ್ ಪಡೆ ಮತ್ತು ಕ್ಯೂಆರ್-ಟೀಮ್ಗಳನ್ನು ನಿಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಗಣ್ಯರು ಭಾಗವಹಿಸುವ ಹಿನ್ನೆಲೆಯಲ್ಲಿ ಟ್ರಸ್ಟ್ ಮತ್ತು ಸರ್ಕಾರ ಜಂಟಿಯಾಗಿ ಸಮಗ್ರ ಭದ್ರತಾ ಯೋಜನೆ ರೂಪಿಸಿದೆ. RSS ಪ್ರಮುಖರಾದ ಮೋಹನ್ ಭಾಗವತ್ ಸೇರಿದಂತೆ ಅನೇಕ ಧಾರ್ಮಿಕ–ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.





