ಅಸ್ಸಾಂನಲ್ಲಿ ಭೀಕರ ರೈಲು ಅಪಘಾತವೊಂದು ಶನಿವಾರ ಮುಂಜಾನೆ ಸಂಭವಿಸಿದ್ದು, ಕಾಡಾನೆಗಳ ಹಿಂಡಿಗೆ ರಾಜಧಾನಿ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಕಾಡಾನೆಗಳು ಸಾವನ್ನಪ್ಪಿವೆ. ಅಪಘಾತದ ತೀವ್ರತೆಯಿಂದ ರೈಲಿನ ಇಂಜಿನ್ ಸೇರಿದಂತೆ ಐದು ಬೋಗಿಗಳು ಹಳಿ ತಪ್ಪಿದ್ದು, ಆದರೆ ಅದೃಷ್ಟವಶಾತ್ ಯಾವುದೇ ಪ್ರಯಾಣಿಕರು ಅಥವಾ ರೈಲ್ವೆ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರ್ಘಟನೆ ಡಿಸೆಂಬರ್ 20ರ ಬೆಳಗಿನ ಜಾವ ಸುಮಾರು 2.17ರ ವೇಳೆಗೆ ಅಸ್ಸಾಂನ ನಾಗಾಂವ್ ಜಿಲ್ಲೆಯ ಈಶಾನ್ಯ ಗಡಿನಾಡು ರೈಲ್ವೆಯ ಲುಮ್ಮಿಂಗ್ ವಿಭಾಗದ ಜಮುನಾಮುಖ್–ಕಂಪುರ ಮಾರ್ಗದಲ್ಲಿ ನಡೆದಿದೆ. ನವದೆಹಲಿಗೆ ತೆರಳುತ್ತಿದ್ದ ರೈಲು ಡಿಎನ್ ಸೈರಂಗ್–ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್, ಹಳಿಯಲ್ಲಿ ಇದ್ದ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ.
ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, ಹಳಿಯಲ್ಲಿ ಆನೆಗಳು ಇರುವುದನ್ನು ಗಮನಿಸಿದ ಲೋಕೋ ಪೈಲಟ್ ತಕ್ಷಣವೇ ತುರ್ತು ಬ್ರೇಕ್ ಹಾಕಿದ್ದಾರೆ. ಆದರೆ ವೇಗದಲ್ಲಿದ್ದ ರೈಲನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದೆ ಆನೆಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಸ್ಥಳದಲ್ಲೇ ಏಳು ಕಾಡಾನೆಗಳು ಸಾವನ್ನಪ್ಪಿವೆ.
ಪ್ರಯಾಣಿಕರು ಸುರಕ್ಷಿತ
ಈ ಅಪಘಾತ ಸಂಭವಿಸಿದ್ದರು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ಸಾವು ಅಥವಾ ಗಾಯಗಳ ವರದಿಯಾಗಿಲ್ಲ. ಘಟನೆ ನಡೆದ ಕೂಡಲೇ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಅಗತ್ಯ ಸಹಾಯ ಒದಗಿಸಲಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಪಘಾತ ಪರಿಹಾರ ರೈಲುಗಳು ಹಾಗೂ ಲುಮ್ಮಿಂಗ್ ವಿಭಾಗೀಯ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಹಳಿ ತಪ್ಪಿದ ಬೋಗಿಗಳನ್ನು ತೆರವುಗೊಳಿಸುವುದು ಮತ್ತು ರೈಲು ಸಂಚಾರ ಪುನಃಸ್ಥಾಪಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲಾಗಿದೆ.
ಈಶಾನ್ಯ ಗಡಿನಾಡು ರೈಲ್ವೆಯ ಜನರಲ್ ಮ್ಯಾನೇಜರ್, ಲುಮ್ಮಿಂಗ್ ವಿಭಾಗೀಯ ರೈಲ್ವೆ ಮ್ಯಾನೇಜರ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಮತ್ತು ಪುನರ್ಸ್ಥಾಪನೆ ಕಾರ್ಯಗಳ ಮೇಲ್ವಿಚಾರಣೆ ನಡೆಸಿದ್ದಾರೆ.





