ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಖುಲಾಸೆಗೊಳಿಸಿ ದೆಹಲಿಯ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಅವರ ವಿರುದ್ಧದ ಗಂಭೀರ ಆರೋಪಗಳನ್ನು ಸಾಬೀತುಪಡಿಸಲು ಸಿಬಿಐ ಸಮರ್ಪಕವಾದ ವಸ್ತು ಸಾಕ್ಷ್ಯಗಳನ್ನು ಒದಗಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ, ಸರ್ಕಾರಕ್ಕೆ ನಷ್ಟ ಉಂಟಾಗಿದೆ ಹಾಗೂ ಕೆಲವರಿಗೆ ಲಾಭ ಕಲ್ಪಿಸಲಾಗಿದೆ ಎಂಬ ಆರೋಪಗಳ ಮೇಲೆ ಸಿಬಿಐ ತನಿಖೆ ಆರಂಭಿಸಿತ್ತು. ಬಳಿಕ ಇಬ್ಬರು ಪ್ರಮುಖ ನಾಯಕರನ್ನೂ ಬಂಧಿಸಲಾಗಿತ್ತು.
ನ್ಯಾಯಾಲಯ ತನ್ನ ತೀರ್ಪಿನಲ್ಲಿ, ಕೇಜ್ರಿವಾಲ್ ವಿರುದ್ಧ ಹೊರಿಸಲಾಗಿದ್ದ ಕೇಂದ್ರ ಪಿತೂರಿ ಸೇರಿದಂತೆ ಗಂಭೀರ ಆರೋಪಗಳಿಗೆ ಸ್ಪಷ್ಟ ಹಾಗೂ ನೇರ ಸಾಕ್ಷ್ಯಾಧಾರಗಳ ಅವಶ್ಯಕತೆ ಇದೆ ಎಂದು ತಿಳಿಸಿದೆ. ಸಾಕ್ಷ್ಯಗಳಿಲ್ಲದೆ ಕೇವಲ ಊಹಾಪೋಹಗಳ ಆಧಾರದ ಮೇಲೆ ಆರೋಪಗಳನ್ನು ಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಸಿಸೋಡಿಯಾ ವಿಚಾರದಲ್ಲೂ ನ್ಯಾಯಾಲಯ ಕಠಿಣ ನಿಲುವು ತಳೆದಿದೆ. ಪ್ರಾಸಿಕ್ಯೂಷನ್ ಮಂಡಿಸಿದ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿದಾಗ, ಅವುಗಳಲ್ಲಿ ಯಾವುದೇ ಕ್ರಿಮಿನಲ್ ಉದ್ದೇಶದ ಸ್ಪಷ್ಟ ಸುಳಿವು ಕಾಣಿಸಿಲ್ಲ ಎಂದು ಕೋರ್ಟ್ ಹೇಳಿದೆ.
ಈ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು 2024ರ ಮಾರ್ಚ್ 14ರಂದು ಬಂಧಿಸಲಾಗಿತ್ತು. ಸುಮಾರು 153 ದಿನಗಳ ಕಾಲ ಅವರು ಜೈಲಿನಲ್ಲಿ ಕಳೆದ ಬಳಿಕ 2024ರ ಸೆಪ್ಟೆಂಬರ್ 13ರಂದು ಜಾಮೀನು ಪಡೆದಿದ್ದರು. ಇದೇ ಅಬಕಾರಿ ಹಗರಣದ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಫೆಬ್ರವರಿ 26, 2023ರಂದು ಬಂಧಿಸಲಾಗಿತ್ತು.
ಅಕ್ರಮ ಅಬಕಾರಿ ನೀತಿ ಜಾರಿಗೆ ತಂದು ಬಹುಕೋಟಿ ಲಿಕ್ಕರ್ ಹಗರಣ ನಡೆಸಲಾಗಿದೆ ಎಂಬ ಆರೋಪದಡಿ ಸಿಬಿಐ ಹಾಗೂ ಇತರೆ ಕೇಂದ್ರ ತನಿಖಾ ಸಂಸ್ಥೆಗಳು ಕ್ರಮ ಕೈಗೊಂಡಿದ್ದವು. ಆದರೆ ಇದೀಗ ನ್ಯಾಯಾಲಯದ ತೀರ್ಪು ಸಿಬಿಐ ತನಿಖೆಯ ಮೇಲೆಯೇ ಪ್ರಶ್ನೆ ಎದ್ದಿದೆ. ಗಂಭೀರ ಆರೋಪಗಳನ್ನು ಸಾಬೀತುಪಡಿಸಲು ವಸ್ತುನಿಷ್ಠ ಸಾಕ್ಷ್ಯಗಳು ಅಗತ್ಯವಾಗಿದ್ದು, ಅವು ಇಲ್ಲದಿದ್ದಲ್ಲಿ ಪ್ರಕರಣ ನ್ಯಾಯಾಂಗ ಪರಿಶೀಲನೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ನ್ಯಾಯಾಲಯ ಮತ್ತೊಂದು ಮಹತ್ವದ ವಿಚಾರವನ್ನೂ ಉಲ್ಲೇಖಿಸಿದೆ. ಪ್ರಾಸಿಕ್ಯೂಷನ್ ತನ್ನ ವಾದಗಳನ್ನು ದೃಢಪಡಿಸಲು ವಿಫಲವಾದರೆ, ಅದು ಸಾರ್ವಜನಿಕ ವಿಶ್ವಾಸದ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಾಕ್ಷ್ಯಾಧಾರಗಳ ಮಹತ್ವವನ್ನು ಪುನರುಚ್ಚರಿಸಿದ ಕೋರ್ಟ್, ಆರೋಪಗಳು ಎಷ್ಟೇ ಗಂಭೀರವಾಗಿದ್ದರೂ ಅವುಗಳನ್ನು ಕಾನೂನುಬದ್ಧವಾಗಿ ಸಾಬೀತುಪಡಿಸುವ ಜವಾಬ್ದಾರಿ ತನಿಖಾ ಸಂಸ್ಥೆಗಳದ್ದೇ ಎಂದು ಸ್ಪಷ್ಟಪಡಿಸಿದೆ.




