ಸ್ಪೀಕರ್ ಸಮಗ್ರತೆ ಪ್ರಶ್ನಿಸುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ: ಸಂಸತ್ತಿನಲ್ಲಿ ಅಮಿತ್ ಶಾ ಆಕ್ರೋಶ

Untitled design 2026 03 11T175631.832

ಲೋಕಸಭೆಯಲ್ಲಿ ಅಮಿತ್‌ ಶಾ

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಸಂಸತ್ತಿನಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ಪೀಕರ್ ಈ ದೇಶದ ಅತ್ಯುನ್ನತ ಪಂಚಾಯತ್‌ನ ಮುಖ್ಯಸ್ಥರು. ಅವರ ಉದ್ದೇಶ ಮತ್ತು ಸಮಗ್ರತೆಯನ್ನು ಪ್ರಶ್ನಿಸುವುದು ನಮ್ಮ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನೇ ಅವಮಾನಿಸಿದಂತೆ ಎಂದು ಪ್ರತಿಪಕ್ಷಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪ್ರತಿಪಕ್ಷಗಳ ಆರೋಪವೇನು ?

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಸ್ಪೀಕರ್ ವಿರುದ್ಧ ಪಕ್ಷಪಾತದ ಆರೋಪ ಮಾಡಿದ್ದರು. ಪ್ರಮುಖವಾಗಿ ಬಜೆಟ್ ಅಧಿವೇಶನದಲ್ಲಿ ಎಂಟು ಸಂಸದರನ್ನು ಅಮಾನತುಗೊಳಿಸಿದ್ದು, ರಾಷ್ಟ್ರೀಯ ಭದ್ರತೆಯ ವಿಷಯದ ಬಗ್ಗೆ ಮಾತನಾಡಲು ರಾಹುಲ್ ಗಾಂಧಿಯವರಿಗೆ ಅವಕಾಶ ನಿರಾಕರಿಸಿದ್ದು, ಮಾಜಿ ಸೇನಾ ಮುಖ್ಯಸ್ಥರ ಪುಸ್ತಕದ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲು ತಡೆ ಒಡ್ಡಿದ್ದನ್ನ ಮುಂದಿಟ್ಟುಕೊಂಡು ಸ್ಪೀಕರ್ ಅವರು ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು.

ಅಮಿತ್ ಶಾ ಅವರ ತಿರುಗೇಟು

ಪ್ರತಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ಅಮಿತ್ ಶಾ, ಸದನವು ನಿಯಮಗಳ ಪ್ರಕಾರ ನಡೆಯಬೇಕು ಎಂದು ಒತ್ತಿಹೇಳಿದರು. ನೀವು ನಿಯಮಗಳನ್ನು ಮೀರಿದಾಗ ಸ್ಪೀಕರ್ ಮಧ್ಯಪ್ರವೇಶಿಸುವುದು ಅವರ ಕರ್ತವ್ಯ. ನಾವು ವಿರೋಧ ಪಕ್ಷದಲ್ಲಿದ್ದಾಗಲೂ ಸ್ಪೀಕರ್ ಸ್ಥಾನಕ್ಕೆ ಗೌರವ ನೀಡಿದ್ದೇವೆ. ಆದರೆ ಇಂದಿನ ಪ್ರತಿಪಕ್ಷಗಳು ಕಾಗದಗಳನ್ನು ಹರಿದು ಸ್ಪೀಕರ್ ಮೇಲೆ ಎಸೆಯುತ್ತಿವೆ. ಇದು ಯಾವ ರೀತಿಯ ಪ್ರಜಾಪ್ರಭುತ್ವ? ಎಂದು ಪ್ರಶ್ನಿಸಿದರು.

ಪ್ರಧಾನ ಮಂತ್ರಿಯವರ ಕುರ್ಚಿಗೆ ಪ್ರತಿಪಕ್ಷದ ಮಹಿಳಾ ಸಂಸದರು ಘೇರಾವ್ ಹಾಕಿದ ಘಟನೆಯನ್ನು ನೆನಪಿಸಿದ ಅವರು, ಕುರ್ಚಿ ಎಂದರೆ ಕೇವಲ ಪೀಠವಲ್ಲ, ಅದು ಸಂವಿಧಾನದ ಸಂಕೇತ. ಅದನ್ನು ಗೌರವಿಸುವುದು ಎಲ್ಲರ ಜವಾಬ್ದಾರಿ ಎಂದರು. ಅಲ್ಲದೆ, ಸಂಸದರು ಸ್ಪೀಕರ್ ಅವರ ಕೊಠಡಿಗೆ ನುಗ್ಗುತ್ತಿರುವುದರಿಂದ ಅವರ ಭದ್ರತೆಯ ಬಗ್ಗೆ ಆತಂಕ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಸತ್ತು ಸೌಹಾರ್ದಯುತವಾಗಿ ನಡೆಯಬೇಕು ಎನ್ನುವುದು ಸರ್ಕಾರದ ಆಶಯ. ಆದರೆ ವಿರೋಧ ಪಕ್ಷಗಳು ನೈತಿಕತೆಯ ನಾಟಕವಾಡುತ್ತಿವೆ. ಅವರ ನಡವಳಿಕೆಯೇ ಅವರಿಗೆ ಶಿಕ್ಷೆ ತಂದುಕೊಟ್ಟಿದೆ ಹೊರತು ಸ್ಪೀಕರ್ ಪಕ್ಷಪಾತಿಯಲ್ಲ ಎಂದು ಶಾ ಸ್ಪಷ್ಟಪಡಿಸಿದರು. ಸ್ಪೀಕರ್ ನಿರ್ಧಾರವೇ ಅಂತಿಮ ಎನ್ನುವ ಸಂಪ್ರದಾಯವನ್ನು ಉಳಿಸಿಕೊಳ್ಳಬೇಕು ಎಂದು ಅವರು ಸದನಕ್ಕೆ ಮನವಿ ಮಾಡಿದರು.

Exit mobile version