ಶ್ರೀನಗರ, ಏಪ್ರಿಲ್ 12: ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ ಗುಹೆಗೆ ವಾರ್ಷಿಕ ತೀರ್ಥಯಾತ್ರೆ ಈ ವರ್ಷ ಜುಲೈ 3ರಂದು ಆರಂಭವಾಗಲಿದೆ. ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮತ್ತು ಶ್ರೀ ಅಮರನಾಥ ಶ್ರೈನ್ ಬೋರ್ಡ್ (SASB) ಅಧ್ಯಕ್ಷ ಮನೋಜ್ ಸಿನ್ಹಾ ಅವರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ. 57 ದಿನಗಳ ಕಾಲ ನಡೆಯುವ ಈ ಯಾತ್ರೆಯು ಆಗಸ್ಟ್ 28, ರಕ್ಷಾ ಬಂಧನ ದಂದು ಮುಕ್ತಾಯಗೊಳ್ಳಲಿದೆ. ಜೂನ್ 29ರ ಜೇಷ್ಠ ಪೂರ್ಣಿಮೆಯಂದು ಶಿವನಿಗೆ ಪ್ರಥಮ ಪೂಜೆ ನೆರವೇರಿಸಲಾಗುವುದು.
ನೋಂದಣಿ ಎಪ್ರಿಲ್ 15ರಿಂದ
ಯಾತ್ರೆಗೆ ಮುಂಗಡ ನೋಂದಣಿ (Registration) ಎಪ್ರಿಲ್ 15ರಿಂದ ಆನ್ಲೈನ್ ಮತ್ತು ಆಫ್ಲೈನ್ ವಿಧಾನಗಳಲ್ಲಿ ಪ್ರಾರಂಭವಾಗಲಿದೆ. ದೇಶಾದ್ಯಂತ J&K ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಯಸ್ ಬ್ಯಾಂಕ್ನ 554 ಶಾಖೆಗಳಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ. ಪ್ರತಿ ಪರವಾನಗಿಗೆ ₹150 ಶುಲ್ಕವಿದೆ. ಅರ್ಜಿದಾರರು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಪ್ರಯಾಣದ ದಿನಾಂಕದಂತಹ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
ಯಾತ್ರಾ ಮಾರ್ಗಗಳು: ಎರಡು ಹಳಿಗಳಲ್ಲಿ ಸಂಚಾರ
ಭಕ್ತಾದಿಗಳು ಎರಡು ಮಾರ್ಗಗಳ ಮೂಲಕ ಅಮರನಾಥ ಗುಹೆಯನ್ನು ತಲುಪಬಹುದು.
-
ಸಾಂಪ್ರದಾಯಿಕ 48 ಕಿಲೋಮೀಟರ್ ನನ್ನಾನ್-ಪಹಲ್ಗಾಮ್ ಮಾರ್ಗವು (ಅನಂತ್ನಾಗ್ ಜಿಲ್ಲೆ)
-
ಕಡಿದಾದ 14 ಕಿಲೋಮೀಟರ್ ಬಾಲ್ಟಾಲ್ ಮಾರ್ಗ (ಗಂಡೇರ್ಬಾಲ್ ಜಿಲ್ಲೆ)
ಗಡಿ ರಸ್ತೆಗಳ ಸಂಸ್ಥೆ (BRO) ಎರಡೂ ಮಾರ್ಗಗಳನ್ನು ಡಾಂಬರು ಹಾಕಿ, ಅಗಲೀಕರಣಗೊಳಿಸಿ ಯಾತ್ರಾರ್ಥಿಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ.
ಕಡ್ಡಾಯ ಆರೋಗ್ಯ ಮಾರ್ಗಸೂಚಿಗಳು- ಗಮನಿಸಲೇಬೇಕಾದ ಅಂಶಗಳು
SASB ನೀಡಿರುವ ನಿರ್ದೇಶನದ ಪ್ರಕಾರ
-
13 ವರ್ಷಕ್ಕಿಂತ ಕಡಿಮೆ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ವರ್ಷ ಯಾತ್ರೆಗೆ ನೋಂದಾಯಿಸಲು ಅನುಮತಿಸಿಲ್ಲ.
-
6 ವಾರಗಳಿಗಿಂತ ಹೆಚ್ಚಿನ ಗರ್ಭಿಣಿಯರಿಗೂ ಯಾತ್ರೆಗೆ ಅವಕಾಶ ಇಲ್ಲ.
-
ಕಡ್ಡಾಯ ಆರೋಗ್ಯ ಪ್ರಮಾಣಪತ್ರ (ಎಪ್ರಿಲ್ 8 ಅಥವಾ ನಂತರ ದಿನಾಂಕದ್ದು) ಸಲ್ಲಿಸಬೇಕು. ಇದರಲ್ಲಿ ಉಸಿರಾಟದ ತೊಂದರೆ, ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾ, ಹೃದಯ ಕಾಯಿಲೆ, ಕೀಲುನೋವು, ಪಾರ್ಶ್ವವಾಯು ಇತ್ಯಾದಿ ವಿವರಗಳನ್ನು ನಮೂದಿಸಬೇಕು.
ಭದ್ರತೆ ಮತ್ತು ವಿಮಾ ಹೆಚ್ಚಳ
ಯಾತ್ರೆಯನ್ನು ಸುರಕ್ಷಿತವಾಗಿ ನಡೆಸಲು ಕೇಂದ್ರ ಸರ್ಕಾರ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದೆ. SASB ನೋಂದಾಯಿತ ಯಾತ್ರಿಕರು, ಸೇವಾ ಒದಗಿಸುವವರು, ಅಧಿಕಾರಿಗಳು, ಕೆಲಸಗಾರರು ಮತ್ತು ಪೂಜಾರಿಗಳಿಗೆ ಅಪಘಾತ ವಿಮಾ ರಕ್ಷಣೆಯನ್ನು 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಶ್ರೀನಗರ ಮತ್ತು ಜಮ್ಮುಗಳಲ್ಲಿ ಲೇಸರ್ ಮತ್ತು ಸೌಂಡ್ ಶೋ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಬಾಬಾ ಬರ್ಫಾನಿ ದರ್ಶನಕ್ಕೆ ಭಕ್ತರ ಕಾತರ
ಪಹಲ್ಯಾಮ್ನ ಮೇಲಿನ ಬೆಟ್ಟಗಳಲ್ಲಿರುವ ಅಮರನಾಥ ಗುಹೆಯಲ್ಲಿ ಪ್ರತಿವರ್ಷ ನೈಸರ್ಗಿಕವಾಗಿ ರೂಪುಗೊಳ್ಳುವ ಹಿಮಲಿಂಗ (ಬಾಬಾ ಬರ್ಫಾನಿ) ದರ್ಶನಕ್ಕೆ ದೇಶದಾದ್ಯಂತ ಲಕ್ಷಾಂತರ ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಸುರಕ್ಷಿತ ಮತ್ತು ಸುವ್ಯವಸ್ಥಿತ ಯಾತ್ರೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಮುಂಗಡ ನೋಂದಣಿ ಏಪ್ರಿಲ್ 15ರಿಂದ ಪ್ರಾರಂಭವಾಗಲಿದ್ದು, ಭಕ್ತರು ಗೊತ್ತುಪಡಿಸಿದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಅಥವಾ ಆನ್ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು.





