2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದೇ ಕಾರಣಕ್ಕೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪದೇಪದೆ ಕೇಂದ್ರದ ವಿರುದ್ಧ ಸಮರ ಸಾರುತ್ತಿದ್ದಾರೆ. ತಮಿಳು ನಾಡಿನಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ, ಕಾನೂನು-ಸುವ್ಯವಸ್ಥೆ ಹಳ್ಳ ಹಿಡಿದಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಇದೆಲ್ಲವನ್ನು ಮರೆ ಮಾಚಲು ಸ್ಟಾಲಿನ್ ತ್ರಿಭಾಷಾ ಸೂತ್ರ, ಕ್ಷೇತ್ರ ಮರು ವಿಂಗಡಣೆಯಂತಹ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. 2026ರ ವಿಧಾನಸಭೆ ಚುನಾವಣೆ ಎಐಎಡಿಎಂಕೆಗೆ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಸೃಷ್ಟಿಸಿದೆ. ಈ ಚುನಾವಣೆಯಲ್ಲಿ ಸೋತರೆ ಪಕ್ಷಕ್ಕೆ ಉಳಿಗಾಲವಿಲ್ಲ. ಹೀಗಾಗಿ ಮತ್ತೆ ಬಿಜೆಪಿ ಜೊತೆ ಮೈತ್ರಿ ಕುರಿತು ಚರ್ಚೆ ನಡೆಸುತ್ತಿದೆ. 2023ಕ್ಕೂ ಮೊದಲು ಮಿತ್ರಪಕ್ಷಗಳಾಗಿದ್ದವರು, 2024ರ ಲೋಕಸಭೆ ಚುನಾವಣೆಗೆ ಮುನ್ನ ಮೈತ್ರಿ ಮುರಿದು ಕೊಂಡಿದ್ದವು. ಈಗ ಮತ್ತೆ ಮೈತ್ರಿ ಮಾಡಿಕೊಳ್ಳಲು ಎರಡು ಪಕ್ಷಗಳು ಮುಂದಾಗುವ ಲಕ್ಷಣಗಳು ಕಂಡು ಬರುತ್ತಿವೆ.
ಎರಡೇ ಎರಡು ಫೋಟೋಗಳು ತಮಿಳುನಾಡಿನ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿವೆ. ಜೊತೆಗೆ ಬಿಜೆಪಿ-ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಮತ್ತೆ ಮೈತ್ರಿ ಮಾಡಿಕೊಳ್ಳಲಿವೆ ಎಂಬ ಗುಸುಗುಸು.. ಪಿಸುಪಿಸು ಮಾತುಗಳಿಗೆ ಕಾರಣವಾಗಿದೆ. ಅದರಲ್ಲಿಯೂ ಮಾರ್ಚ್ 3ರಂದು ಎಐಎಡಿಎಂಕೆಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಎಸ್.ಪಿ.ವೇಲುಮಣಿ ಪುತ್ರನ ವಿವಾಹ ಸಮಾರಂಭದಲ್ಲಿ ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಭಾಗವಹಿಸಿದ್ದರು. ಈ ವೇಳೆ ಎಐಎಡಿಎಂಕೆ ನಾಯಕರು ಅವರಿಗೆ ಸ್ವಾಗತ ಕೋರಿದ ಪರಿ. ಅವರಿಗೆ ಆತಿಥ್ಯ ನೀಡಿದ ವರಸೆಯನ್ನು ಕಂಡು ತಮಿಳುನಾಡಿನ ರಾಜಕೀಯ ಗೊತ್ತಿರುವವರು ಫುಲ್ ಸ್ಟನ್ ಆಗಿದ್ದರು. ಅದೇನು ಗೌರವ, ಅದೇನು ಆತಿಥ್ಯ ಎಂದು ಬೆಕ್ಕಸ ಬೆರಗಾಗಿದ್ದರು. ಈ ವಿಚಾರ ತೆರೆಮರೆಗೆ ಸರಿಯುವ ಮುನ್ನವೇ ದೆಹಲಿಯಲ್ಲಿ ಅಮಿತ್ ಶಾ-ತಮಿಳುನಾಡು ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಭೇಟಿಯಾಗಿದ್ದಾರೆ. ಇಷ್ಟಾಗುತ್ತಿದ್ದಂತೆ ತಮಿಳುನಾಡು ರಾಜಕಾರಣದಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿದೆ.
2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದು ತಮಿಳುನಾಡಿನ ಎಲ್ಲ ಪಕ್ಷಗಳಿಗಿಂತಲೂ ಹೆಚ್ಚಾಗಿ ಆಲ್ ಇಂಡಿಯಾ ಅಣ್ಣಾ ಡಿಎಂಕೆ ಪಕ್ಷಕ್ಕೆ ಮಹತ್ವದ ಚುನಾವಣೆಯಾಗಿದೆ. ಈ ಚುನಾವಣೆಯ ಸೋಲು-ಗೆಲುವು ಎಐಎಡಿಎಂಕೆಯ ಭವಿಷ್ಯ ನಿರ್ಧರಿಸಲಿದೆ. ಈ ಚುನಾವಣೆ ಎಐಎಡಿಎಂಕೆಗೆ ಮಾಡು ಇಲ್ಲವೇ ಮಡಿ ಚುನಾವಣೆಯಾಗಿದೆ. 2026ರ ಚುನಾವಣೆಯಲ್ಲಿ ಸೋತರೆ ಎಐಎಡಿಎಂಕೆ ಸರ್ವನಾಶವಾಗುವುದು ಕಟ್ಟಿಟ್ಟ ಬುತ್ತಿ. ಏಕೆಂದರೆ, ಎಐಎಡಿಎಂಕೆಯನ್ನು ಮತ್ತೆ ಕಟ್ಟಿ ಬೆಳೆಸಲು ಎಂಜಿಆರ್ ಅಥವಾ ತಮಿಳರ ಪಾಲಿನ ಅಮ್ಮ ಪುರುಚ್ಚಿ ತಲೈವಿ ಜಯಲಲಿತಾರಂತಹ ಬಲಶಾಲಿ ನಾಯಕರಿಲ್ಲ. ಎಡಪ್ಪಾಡಿ ಪಳನಿಸ್ವಾಮಿ ತಮ್ಮದೇ ಆದ ಬಲ ಹೊಂದಿದ್ದರೂ, ದ್ರಾವಿಡ ಕೇಂದ್ರಿತ ರಾಜಕಾರಣಕ್ಕೆ ಆ ಬಲ ಸಾಕಾಗುವುದಿಲ್ಲ. ಜೊತೆಗೆ ಯಾವುದೇ ಪ್ರಾದೇಶಿಕ ಪಕ್ಷ ನಿರಂತರವಾಗಿ ಎರಡು ಬಾರಿ ಸರ್ಕಾರ ರಚನೆ ಮಾಡದಿದ್ದರೆ, ಅದರ ಬಲ ಕ್ಷೀಣಿಸುತ್ತೆ. ಭಾರತದ ರಾಜಕಾರಣದಲ್ಲಿ ಇದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದು.
ಎಐಎಡಿಎಂಕೆ 2023ರವರೆಗೆ ಎನ್ಡಿಎ ಭಾಗವಾಗಿತ್ತು. ಆದರೆ, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷರಾದ ಬಳಿಕ ಮೈತ್ರಿ ಕಡಿದುಕೊಂಡಿತ್ತು. ಇದಕ್ಕೆ ಮುಖ್ಯ ಕಾರಣ ಅಣ್ಣಾಮಲೈ. ಎಐಎಡಿಎಂಕೆ ಮೈತ್ರಿಯಿಂದ ಬಿಜೆಪಿಗೆ ಲಾಭವಿಲ್ಲ ಎಂದು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಸಿದ್ದ ಅಣ್ಣಾಮಲೈ, ಎನ್ಡಿಎ ಮೈತ್ರಿಯಿಂದ ಅಣ್ಣಾ ಡಿಎಂಕೆ ಹೊರ ನಡೆಯುವಂತೆ ಮಾಡಿದ್ದರು. ಇದಾದ ಬಳಿಕ ಅಣ್ಣಾಮಲೈ ತಮಿಳುನಾಡಿನಲ್ಲಿ ‘‘ಎನ್ ಮಣ್ ಎನ್ ಮಕ್ಕಳ್’’ ಯಾತ್ರೆ ಮಾಡಿದ್ದರು. ಇದರಿಂದಾಗಿ ತಮಿಳುನಾಡಿನ ಮೂಲೆಮೂಲೆಗೂ ಬಿಜೆಪಿ ಹೆಸರನ್ನು ತಲುಪಿಸಲು ಯಶಸ್ವಿಯಾಗಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಅಣ್ಣಾಮಲೈ ಶ್ರಮ ಪ್ರತಿಫಲಿತವಾಗಿತ್ತು.
2024ರ ಲೋಕಸಭೆ ಚುನಾವಣೆಗೂ ಮೊದಲು ತಮಿಳುನಾಡಿನಲ್ಲಿ ಬಿಜೆಪಿ ಶೇಕಡವಾರು ಮತ ಒಂದಂಕಿಯನ್ನು ದಾಟುತ್ತಿರಲಿಲ್ಲ. ಆದರೆ, 2024ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಎರಡಂಕಿ ಶೇಕಡವಾರು ಮತ ಪಡೆದಿತ್ತು. ಬಿಜೆಪಿ ಶೇಕಡ 11ರಷ್ಟು ಮತ ಪಡೆದಿದ್ದರೆ, ಎನ್ಡಿಎ ಮೈತ್ರಿಕೂಟ ಶೇಕಡ 18ರಷ್ಟು ಮತ ಪಡೆದಿತ್ತು. ಇದಕ್ಕೆ ಪ್ರತಿಯಾಗಿ ಎಐಎಡಿಎಂಕೆ ಶೇಕಡವಾರು ಮತಗಳಿಕೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿತ್ತು. 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಎಐಎಡಿಎಂಕೆ ಅಭ್ಯರ್ಥಿಗಳನ್ನು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತೆ ಮಾಡಿದ್ದರು. ಪ್ರಾದೇಶಿಕ ಪಕ್ಷಗಳ ನಡುವೆ ನಡೆಯುತ್ತಿದ್ದ ಮತ ಯುದ್ಧದಲ್ಲಿ ಹಲವಾರು ದಶಕಗಳ ಬಳಿಕ ರಾಷ್ಟ್ರೀಯ ಪಕ್ಷವೂ ಪಾಲು ಹಂಚಿಕೊಂಡಿತ್ತು.
ತಮಿಳುನಾಡಿನಲ್ಲಿ ಪ್ರಸ್ತುತ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಸರ್ಕಾರದ ನೇತೃತ್ವ ವಹಿಸಿದೆ. ಡಿಎಂಕೆ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕ್ಷೀಣಿಸಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಕಾನೂನು-ಸುವ್ಯವಸ್ಥೆ ಕುರಿತು ಕೇಳುವಂತಿಲ್ಲ. ಹೀಗಾಗಿಯೇ ತಾವು ಮಾಡಿರುವ ಸಾಧನೆಗಳನ್ನು ಜನರ ಮುಂದಿಟ್ಟು ಮತ ಕೇಳಲು ಹಿಂಜರಿಯುತ್ತಿರುವ ಸ್ಟಾಲಿನ್ ತ್ರಿಭಾಷಾ ಸೂತ್ರ ಹೇರಿಕೆ, ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯ ಎಂಬ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದಿದ್ದಾರೆ. ಇದರ ಜೊತೆಗೆ ಕಾಲಿವುಡ್ನ ಖ್ಯಾತ ನಟ ಜೋಸೆಫ್ ವಿಜಯ್ ತಮ್ಮದೇ ಆದ ತಮಿಳಿಗ ವೆಟ್ರಿ ಕಚ್ಚಿ ಎಂಬ ಪಕ್ಷವನ್ನು ಹುಟ್ಟು ಹಾಕಿದ್ದಾರೆ.
ಹಿಂದೆಲ್ಲಾ ಎರಡು ದ್ರಾವಿಡ ಪಕ್ಷಗಳ ನಡುವೆ ಮಾತ್ರ ನಡೆಯುತ್ತಿದ್ದ ಚುನಾವಣೆ ಅಖಾಡದಲ್ಲಿ ಈ ಬಾರಿ ಚತುಷ್ಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳು ಕಂಡು ಬರುತ್ತಿದೆ. ಇದು ಎಐಎಡಿಎಂಕೆಗೆ ಸವಾಲಾಗಿ ಪರಿಣಮಿಸಿದೆ. ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಒಂದೆಡೆ. ಮತ್ತೊಂದೆಡೆ ಅಣ್ಣಾಮಲೈ, ವಿಜಯ್ ಎಂಬ ಯುವ ನಾಯಕರು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಐಎಡಿಎಂಕೆಗೆ ಎನ್ಡಿಎ ಜೊತೆ ಮೈತ್ರಿ ಮಾಡಿಕೊಂಡರೆ ಮಾತ್ರ ಉಳಿಗಾಲ ಎಂಬ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಹೀಗೆಂದು ಸುಲಭವಾಗಿ ಮೈತ್ರಿ ಮಾಡಿಕೊಳ್ಳುವ ಸ್ಥಿತಿ ಇಲ್ಲ. ಎಐಎಡಿಎಂಕೆ ವಿರುದ್ಧ ಅಣ್ಣಾಮಲೈ ನಡೆಸಿದ್ದ ವಾಕ್ಸಮರ ಎನ್ಡಿಎ ಮೈತ್ರಿ ಮುರಿದುಕೊಳ್ಳಲು ಒಂದು ಕಾರಣವಾದರೆ, ಥೇವರ್ ಸಮುದಾಯದ ನಾಯಕರಾದ ಓ.ಪನೀರ್ ಸೆಲ್ವಂ, ಟಿಟಿವಿ ದಿನಕರನ್ ಜೊತೆ ರಾಜಿ ಮಾಡಿಕೊಳ್ಳಲು ಪಳನಿಸ್ವಾಮಿ ಒಪ್ಪದೇ ಇದ್ದುದು, ಮೈತ್ರಿ ಮುರಿದುಕೊಳ್ಳಲು ಮತ್ತೊಂದು ಕಾರಣವಾಗಿತ್ತು.
ಪ್ರಸ್ತುತ ಪರಿಸ್ಥಿತಿಯಲ್ಲಿ ಎಐಎಡಿಎಂಕೆಗೆ ಎನ್ಡಿಎ ಜೊತೆ ಮೈತ್ರಿ ಮಾಡಿಕೊಳ್ಳದೇ ಬೇರೆ ವಿಧಿಯಿಲ್ಲ. ಹೀಗಾಗಿ ಅತ್ತ ಅಣ್ಣಾಮಲೈ ಜೊತೆಗಿನ ಮುನಿಸು ಕಡಿಮೆ ಮಾಡಿಕೊಳ್ಳಬೇಕು. ಅಲ್ಲದೇ, ಪನೀರ್ ಸೆಲ್ವಂ, ಟಿಟಿವಿ ದಿನಕರನ್ ಜೊತೆಗೆ ರಾಜಿಗೂ ಒಪ್ಪಿಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ ಪಳನಿಸ್ವಾಮಿ ಮತ್ತು ಅಮಿತ್ ಶಾ ಭೇಟಿ ನಡೆದಿದೆ. ತಮಿಳುನಾಡಿನಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಮಿತ್ ಶಾಗೆ ಮನವಿ ಮಾಡುವ ನೆಪದಲ್ಲಿ ಈ ಭೇಟಿ ನಡೆದಿದೆ. ಆದರೆ, ಭೇಟಿ ವೇಳೆ 2026ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಪ್ರಮುಖವಾಗಿ ಚರ್ಚಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಒಂದು ವೇಳೆ ಎಐಎಡಿಎಂಕೆ ಮತ್ತೆ ಎನ್ಡಿಎ ತೆಕ್ಕೆಗೆ ಮರಳಿದರೆ, ಆಂಧ್ರದಲ್ಲಿನ ಫಾರ್ಮುಲಾ ಪರಿಗಣಿಸಿ ಎಂದು ಪಳನಿಸ್ವಾಮಿ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಂಧ್ರಪ್ರದೇಶದಲ್ಲಿಯೂ ಸಹ 2018ರಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ, ಎನ್ಡಿಎ ಮೈತ್ರಿಯನ್ನು ಕಡಿದುಕೊಂಡಿತ್ತು. ಇದಾದ ಬಳಿಕ ನಡೆದ 2019ರ ಚುನಾವಣೆಯಲ್ಲಿ ಟಿಡಿಪಿ ಮಕಾಡೆ ಮಲಗಿತ್ತು. 2023ರಲ್ಲಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಮಾಡಿದ ಸತತ ಪ್ರಯತ್ನದ ಫಲವಾಗಿ ಟಿಡಿಪಿ-ಜೆಎಸ್ಪಿ-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು. ಮೂರು ಪಕ್ಷಗಳು ಒಟ್ಟಾಗಿ 2024ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಎದುರಿಸಿದ್ದವು. ಬಳಿಕ ಬಂದ ಫಲಿತಾಂಶ ಕೇವಲ ಆಂಧ್ರಪ್ರದೇಶ ರಾಜಕಾರಣದ ಮೇಲೆ ಮಾತ್ರವೇ ಅಲ್ಲ, ಭಾರತದ ರಾಜಕೀಯದ ಮೇಲೂ ಪ್ರಭಾವ ಬೀರಿತ್ತು. ಒಂದು ವೇಳೆ ಮೈತ್ರಿ ಏರ್ಪಟ್ಟರೆ ಎಐಎಡಿಎಂಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಣ್ಣಾಮಲೈ ಬದಲಿಗೆ ಪಳನಿಸ್ವಾಮಿ ನೇತೃತ್ವ ವಹಿಸಬೇಕು. ಇಲ್ಲದೇ ಹೋದರೆ ಜಂಟಿ ನಾಯಕತ್ವಕ್ಕೆ ಮಣೆ ಹಾಕಬೇಕು. ಯಾವುದೇ ಕಾರಣಕ್ಕೂ ಅಣ್ಣಾಮಲೈ ಮೇಲುಗೈ ಸಾಧಿಸದಂತೆ ಸೂತ್ರ ರೂಪಿಸಬೇಕು ಎಂಬುದು ಎಐಎಡಿಎಂಕೆ ಷರತ್ತುಗಳಾಗಿವೆ ಎಂದು ತಿಳಿದು ಬಂದಿದೆ.
ಅಮಿತ್ ಶಾ-ಎಡಪ್ಪಾಡಿ ಪಳನಿಸ್ವಾಮಿ ಭೇಟಿ ಬಳಿಕ, ಶೀಘ್ರವೇ ಅಣ್ಣಾಮಲೈ ದೆಹಲಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಕೇಂದ್ರದ ಬಿಜೆಪಿ ನಾಯಕರ ಜೊತೆ ಚರ್ಚಿಸಿ ಮೈತ್ರಿ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಪ್ರಸ್ತುತ ತಮಿಳುನಾಡು ರಾಜಕೀಯದಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡುತ್ತಿರುವ ನಾಯಕರಲ್ಲಿ ಅಣ್ಣಾಮಲೈ ಒಬ್ಬರು. ತಳಮಟ್ಟದಲ್ಲಿ ಅಣ್ಣಾಮಲೈ ಎಷ್ಟು ಪ್ರಭಾವ ಬೀರಿದ್ದಾರೆ ಎಂಬುದು ಗೊತ್ತಿಲ್ಲದೇ ಇದ್ದರೂ, ಸೋಷಿಯಲ್ ಮೀಡಿಯಾ ಸದ್ದು ಮಾಡುವ ಯುಗದಲ್ಲಿ ಅಣ್ಣಾಮಲೈ ಹೆಚ್ಚು ಸೌಂಡ್ ಮಾಡುತ್ತಿದ್ದಾರೆ. ಮೈತ್ರಿಯಿಂದ ಎರಡೂ ಪಕ್ಷಗಳಿಗೂ ಲಾಭವಾಗಲಿದೆ. ಇಲ್ಲದೇ ಹೋದರೆ ಡಿಎಂಕೆ ವಿರೋಧಿ ಮತಗಳು ಒಡೆದು ಡಿಎಂಕೆ ಮೈತ್ರಿಗೆ ವರವಾಗಲಿದೆ.
ಎಐಎಡಿಎಂಕೆ ಈಗ ಕವಲು ದಾರಿಯಲ್ಲಿ ನಿಂತಿದೆ. ಮೈತ್ರಿಯಿಂದ ಆಗುವ ನಷ್ಟಕ್ಕಿಂತಲೂ ಲಾಭವೇ ಹೆಚ್ಚು ಎಂಬುದು ಎಐಎಡಿಎಂಕೆ ನಾಯಕರಿಗೆ ಗೊತ್ತಿದೆ. ಆದರೆ, ಮೈತ್ರಿಯಿಂದಾಗಿ ಅಣ್ಣಾಮಲೈಗೆ ಹೆಚ್ಚಿನ ಮೈಲೇಜ್ ಸಿಗಲಿದೆ ಎಂಬ ಚಿಂತೆ ಎಐಎಡಿಎಂಕೆ ನಾಯಕರಿಗೆ ಕಾಡುತ್ತಿದೆ. ಆದರೆ, ಸೋತು ಸರ್ವನಾಶ ಆಗುವ ಬದಲು, ಮುಳುಗುತ್ತಿರುವವನಿಗೆ ಹುಲುಕಡ್ಡಿಯೂ ಆಸರೆಯಾದಂತೆ ಮೈತ್ರಿಯಿಂದಾಗಿ ಪಕ್ಷವನ್ನು ಉಳಿಸಿಕೊಂಡು, ಭವಿಷ್ಯದಲ್ಲಿ ಬೆಳೆಸುವ ಯೋಚನೆಯನ್ನು ಎಐಎಡಿಎಂಕೆ ನಾಯಕರು ಮಾಡುತ್ತಿದ್ದಾರೆ ಎಂದು ತಮಿಳುನಾಡಿನ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಎರಡು ಪಕ್ಷಗಳ ನಾಯಕರು ಒಬ್ಬರನ್ನೊಬ್ಬರು ಟೀಕಿಸುವ ಬದಲು, ಸಂಬಂಧ ವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.