ಬೆಂಗಳೂರು, ಮಾ.20: ರಾಜ್ಯದಲ್ಲಿ ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಜೀವನದ ಮೇಲೆ ಅದರ ಪರಿಣಾಮ ಬೀರುತ್ತಿದೆ. ರಾಜಧಾನಿಯಾದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಜನರು ಉಷ್ಣಾಂಶದಿಂದ ಬಳಲುತ್ತಿದ್ದಾರೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಬರುವ ಮೂನ್ಸೂಚನೆ ಇದೆ.
ಇಂದು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವು 34°Cರಿಂದ 35°Cರವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಬೆಳಿಗ್ಗೆಯಿಂದಲೇ ಉಷ್ಣತೆ ಹೆಚ್ಚಾಗಿದ್ದು, ಮಧ್ಯಾಹ್ನ ವೇಳೆ ತೀವ್ರ ಬಿಸಿಲು ಕಾಡಲಿದೆ. ಸಂಜೆಯ ವೇಳೆಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ.
ಉತ್ತರ ಕರ್ನಾಟಕ ಭಾಗಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಕಲಬುರಗಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ತಾಪಮಾನವು 40°C ಗಡಿ ದಾಟುತ್ತಿದೆ. ಈ ಪ್ರದೇಶಗಳಲ್ಲಿ ಬಿಸಿ ಗಾಳಿ (ಹೀಟ್ ವೇವ್) ಬೀಸುವ ಸಾಧ್ಯತೆ ಇದ್ದು, ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಹೊರಗೆ ಹೋಗಬಾರದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಜನರು ಸಾಕಷ್ಟು ನೀರು ಕುಡಿಯುವುದು, ನೆರಳು ಪ್ರದೇಶಗಳಲ್ಲಿ ಇರುವುದನ್ನು ವೈದ್ಯರು ಸಲಹೆ ನೀಡಿದ್ದಾರೆ.
ಇನ್ನು ಕರಾವಳಿ ಭಾಗಗಳಾದ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಸಿಲಿನ ಜೊತೆಗೆ ಆರ್ದ್ರತೆಯೂ ಹೆಚ್ಚಾಗಿದೆ. ಈ ಭಾಗಗಳಲ್ಲಿ ಗರಿಷ್ಠ ತಾಪಮಾನವು ಸುಮಾರು 36°C ತಲುಪುತ್ತಿದ್ದು, ತೇವಾಂಶ ಹೆಚ್ಚಿರುವುದರಿಂದ ಉಸಿರುಗಟ್ಟುವಂತಹ ವಾತಾವರಣ ಉಂಟಾಗಿದೆ. ಜನರು ಹೆಚ್ಚು ಬೆವರು ಕಾಣಿಸಿಕೊಂಡು ದೇಹದಲ್ಲಿ ದಣಿವು ಅನುಭವಿಸುವ ಸಾಧ್ಯತೆ ಇದೆ.
ಮಲೆನಾಡು ಪ್ರದೇಶಗಳಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ತಂಪಾದ ವಾತಾವರಣ ಕಂಡುಬರುತ್ತಿದೆ. ಕೊಡಗು ಮತ್ತು ಶಿವಮೊಗ್ಗ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆ ಇದ್ದು, ಮಳೆಯ ನಿರೀಕ್ಷೆ ಬಹಳ ಕಡಿಮೆ. ಕೆಲವು ಕಡೆಗಳಲ್ಲಿ ಸಂಜೆ ವೇಳೆಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಉತ್ತರ ಒಳನಾಡಿನ ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಶುಷ್ಕ ಹವಾಮಾನ ಮುಂದುವರಿದಿದೆ. ಗದಗದಲ್ಲಿ ಗರಿಷ್ಠ ತಾಪಮಾನ 39°C ಹಾಗೂ ಹಾವೇರಿಯಲ್ಲಿ 38°C ತಲುಪುವ ನಿರೀಕ್ಷೆ ಇದೆ. ಗಾಳಿಯ ವೇಗ ಕಡಿಮೆಯಾಗಿರುವುದರಿಂದ ಸೆಕೆಯ ಅನುಭವ ಮತ್ತಷ್ಟು ಹೆಚ್ಚಾಗಿದೆ.
ಮಲೆನಾಡಿನ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಸಹ ತಾಪಮಾನ ಏರಿಕೆಯಾಗಿದೆ. ಚಿಕ್ಕಮಗಳೂರಿನಲ್ಲಿ ಗರಿಷ್ಠ 33°C ಹಾಗೂ ಹಾಸನದಲ್ಲಿ 34°C ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ರಾಜ್ಯದಾದ್ಯಂತ ಮಳೆಯ ಯಾವುದೇ ಸ್ಪಷ್ಟ ಮುನ್ಸೂಚನೆ ಇಲ್ಲದೆ, ಬಿಸಿಗಾಳಿಯ ಪ್ರಭಾವ ಮುಂದುವರಿಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಗಳನ್ನು ಪಾಲಿಸಿ, ವಿಶೇಷವಾಗಿ ಮಧ್ಯಾಹ್ನ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು ಒಳಿತು. ಸಾಕಷ್ಟು ನೀರು ಕುಡಿಯುವುದು, ತಂಪಾದ ಆಹಾರ ಸೇವಿಸುವುದು ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯುವುದು ಅತ್ಯಗತ್ಯ.





