ತುಮಕೂರು: ತಾಯಿ ಮತ್ತು ಇಬ್ಬರು ಪುಟ್ಟ ಮಕ್ಕಳ ಶವ ಮನೆಯ ಸಂಪ್ನಲ್ಲಿ ಪತ್ತೆಯಾಗುವ ತುಮಕೂರಿನ ಸಿಂಗನಹಳ್ಳಿಯಲ್ಲಿ ನಡೆದಿದೆ. ಈ ಘಟನೆಯು ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದಿದ್ದು, ವಿಜಯಲಕ್ಷ್ಮೀ ಮತ್ತು ಅವರ ಮಕ್ಕಳಾದ ಚೇತನ ಹಾಗೂ ಚೈತನ್ಯ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಘಟನೆಯ ಹಿನ್ನೆಲೆ:
ಮೂಲತಃ ಶಿವಗಂಗೆಯವರಾದ ಸಂಪತ್ ಅವರು ಕಳೆದ 30 ವರ್ಷಗಳಿಂದ ಸಿಂಗನಹಳ್ಳಿಯಲ್ಲಿ ವಾಸವಿದ್ದಾರೆ. ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಇವರು, ಪತ್ನಿ ವಿಜಯಲಕ್ಷ್ಮೀ, ಇಬ್ಬರು ಮಕ್ಕಳು ಹಾಗೂ ಪೋಷಕರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪ್ರತಿದಿನದಂತೆ ಸಂಪತ್ ಮತ್ತು ಅವರ ತಾಯಿ ರೇಣುಕಮ್ಮ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿದ್ದ ಮಾವ ಹನುಮಂತರಾಜು ಕೂಡ ಕೆಲಸದ ನಿಮಿತ್ತ ನೆಲಮಂಗಲಕ್ಕೆ ಹೋಗಿದ್ದರು. ಈ ಸಮಯದಲ್ಲಿ ಮನೆಯಲ್ಲಿ ವಿಜಯಲಕ್ಷ್ಮೀ ಮತ್ತು ಇಬ್ಬರು ಮಕ್ಕಳು ಮಾತ್ರ ಮನೆಲ್ಲಿದ್ದಾರೆ.
ಮಧ್ಯಾಹ್ನದ ವೇಳೆ ಕೆಲಸ ಮುಗಿಸಿ ಸಂಪತ್ ಮನೆಗೆ ಬಂದಾಗ ಪತ್ನಿ ಮತ್ತು ಮಕ್ಕಳು ಕಾಣಿಸಲಿಲ್ಲ. ಆತಂಕಗೊಂಡ ಸಂಪತ್ ಮನೆಯ ಸುತ್ತಮುತ್ತ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಮನೆಯ ಮುಂದಿನ ಸಂಪ್ನ ಮುಚ್ಚಳ ತೆರೆದಿರುವುದನ್ನು ಗಮನಿಸಿ ಇಣುಕಿ ನೋಡಿದಾಗ, ಪತ್ನಿ ಮತ್ತು ಮಕ್ಕಳ ಶವಗಳು ತೇಲುತ್ತಿರುವುದು ಕಂಡುಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡೆತ್ನೋಟ್ ಮತ್ತು ಪೊಲೀಸರ ಶಂಕೆ:
ಸ್ಥಳಕ್ಕೆ ಭೇಟಿ ನೀಡಿದ ಕ್ಯಾತ್ಸಂದ್ರ ಪೊಲೀಸರು ಪರಿಶೀಲನೆ ನಡೆಸಿದಾಗ ಮನೆಯಲ್ಲಿ ವಿಜಯಲಕ್ಷ್ಮೀ ಬರೆದಿದ್ದಾರೆ ಎನ್ನಲಾದ ಡೆತ್ನೋಟ್ ಪತ್ತೆಯಾಗಿದೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ವಿಜಯಲಕ್ಷ್ಮೀ ಅವರು ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಅದೇ ಕಾರಣಕ್ಕೆ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆದರೆ, ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಅಸಹಾಯಕ ಮಕ್ಕಳನ್ನು ಸಂಪ್ಗೆ ದೂಡಿ ಕೊಂದರಾ ಅಥವಾ ಮಕ್ಕಳು ತಾವಾಗಿಯೇ ಬಿದ್ದರಾ ಎಂಬುದು ಪೊಲೀಸರಿಗೆ ಗೊಂದಲ ಸೃಷ್ಟಿಸಿದೆ. ಪ್ರಸ್ತುತ ಮೃತಳ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವುದು ಗ್ರಾಮಸ್ಥರು ಆತಂಕ ಪಡುವಂತೆ ಮಾಡಿದೆ. ಮೃತ ದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದು, ತನಿಖೆ ಮುಂದುವರೆದಿದೆ.





