ಸಮಾಜದಲ್ಲಿ ಮಂಗಳಮುಖಿಯರ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಅವರನ್ನು ಬೇರೆಯದೇ ದೃಷ್ಟಿಯಿಂದ ನೋಡುವ ಸಾಮಾಜಿಕ ಮನೋಭಾವ ಇನ್ನೂ ಬದಲಾಗಬೇಕಾಗಿದೆ. ಹಿಂದೆ ತೃತೀಯ ಲಿಂಗಿಗಳನ್ನು ಹೀನಾಯವಾಗಿ ನೋಡಲಾಗುತ್ತಿತ್ತು, ಆದರೆ ಇಂದು ಅನೇಕರು ಸ್ವಾವಲಂಬಿಯಾಗಿ ಜೀವಿಸುತ್ತಿದ್ದಾರೆ. ಅಂತಹವರಲ್ಲಿ ಮಂಗಳೂರಿನ ಅನಿ ಮಂಗಳೂರು ಅವರ ಕಥೆ ಸ್ಫೂರ್ತಿದಾಯಕವಾಗಿದೆ.
ಮೂಲತಃ ರಾಯಚೂರು ಜಿಲ್ಲೆಯವರಾದ ಅನಿ, ಶಿಕ್ಷಣಕ್ಕಾಗಿ ಮಂಗಳೂರಿಗೆ ಬಂದು ಅಲ್ಲಿ ನೆಲೆಸಿದರು. ಬಿಎ ಪದವಿ ಮುಗಿಸಿದ ಅನಿ, ಬಿಎಡ್ 2ನೇ ಸೆಮಿಸ್ಟರ್ ವೇಳೆಗೆ ಮಂಗಳಮುಖಿಯಾಗಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೆ ಅರ್ಧಕ್ಕೇ ಮೊಟಕುಗೊಳಿಸಿದರು..
ಅನಿ ಅವರು ಸಾಧನೆಯ ದಾರಿಯನ್ನು ಬಿಡಲಿಲ್ಲ. ಎಲ್ಲಾ ತೃತೀಯ ಲಿಂಗಿಗಳಂತೆ ನಾನು ಆಗಬಾರ್ದು ಎನ್ನುವ ನಿಟ್ಟಿನಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಸದ್ಯ ಜಿಮ್ ಟ್ರೈನರ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿರುವ ಅನಿ, ಶಿವಲೀಲಾ ಎಂಬ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಆಟೋರಿಕ್ಷಾದಲ್ಲಿ ಬರುವ ಆದಾಯದಲ್ಲಿ ಅನಾಥರ, ಬಡ ಮಕ್ಕಳ ಹಸಿವೆ ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಎಲ್ಲವೂ ಇದ್ದೂ ಏನೂ ಸಾಧನೆ ಮಾಡದಿರುವವರ ನಡುವೆ ಅನಿ ಮಂಗಳೂರು ಅವರ ಸಾಧನೆ ನಿಜಕ್ಕೂ ಶ್ಲಾಘನೀಯವಾಗಿದೆ.
ಅದೊಂದು ದಿನ ಕೆಲಸ ಮುಗಿಸಿ ಸಂಜೆ ಮನೆಯತ್ತ ಮರಳುತ್ತಿದ್ದ ಅನಿಯವರಿಗೆ ಯಾವ ಆಟೋರಿಕ್ಷಾಗಳು ನಿಲ್ಲಿಸಿರಲಿಲ್ಲ. ರಾತ್ರಿಯಾದರೂ ಒಂದೇ ಒಂದು ಆಟೊರಿಕ್ಷಾ ಸಿಗದ ಕಾರಣ ಅವರು ಮನೆಗೆ ನಡೆದುಕೊಂಡೇ ಹೋಗಬೇಕಾಯ್ತು. ಅಂದೇ ಅವರು ಆಟೊರಿಕ್ಷಾ ಖರೀದಿಸಿ ಬಾಡಿಗೆಗೆ ಬಿಡುವ ನಿರ್ಧಾರವನ್ನು ಕೈಗೊಂಡರು. ಅದಕ್ಕಾಗಿ ಬ್ಯಾಂಕ್ಗೆ ಓಡಾಟ ಶುರುಮಾಡಿ ಸಾಲ ಸಿಕ್ಕ ತಕ್ಷಣ ನಾಲ್ಕು ಆಟೋಗಳನ್ನು ಖರೀದಿಸಿದರು. ಈ ನಾಲ್ಕೂ ಆಟೋಗಳನ್ನು ಮಂಗಳೂರು ಗ್ರಾಮಾಂತರ ಪ್ರದೇಶ ದೇರಳಕಟ್ಟೆಯಲ್ಲಿ ಬಾಡಿಗೆಗೆ ಬಿಟ್ಟಿದ್ದಾರೆ. ಇದೀಗ ಪ್ರತೀ ಆಟೋದಿಂದ ದಿನವೂ ಅವರಿಗೆ ನಿಶ್ಚಿತ ಮೌಲ್ಯದ ಆದಾಯ ಬರುತ್ತದೆ.
ಅನಿಯವರು ನಾಲ್ಕು ಆಟೋಗಳಲ್ಲಿ ಗರ್ಭಿಣಿಯರಿಗೆ ಹಾಗೂ ಹಿರಿಯ ಮಂಗಳಮುಖಿಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ತನಗಾದ ಸಂಕಷ್ಟ, ಅವಮಾನ, ತೊಂದರೆ ಇನ್ನಾವ ಮಂಗಳಮುಖಿಯರಿಗೆ, ಹೆಣ್ಣಿಗೆ ಆಗಬಾರದೆಂದು ಈ ಉಚಿತ ಸೇವೆಯ ಅವಕಾಶವನ್ನು ಕಲ್ಪಿಸಿದ್ದಾರೆ. ಇವರಿಗೆ ಬಾಡಿಗೆ ನೀಡಿರುವ ಮನೆಯವರು ತಮ್ಮ ಸ್ವಂತ ತಂಗಿಯಂತೆ ನೋಡಿಕೊಂಡಿದ್ದು ಮನೆಯ ವೃದ್ಧ ರ ಆರೈಕೆ ಮಾಡುತ್ತಾ ತಮ್ಮ ಮನೆಯವರಂತೆ ಇದ್ದಾರೆ.