ಈ ವರ್ಷದ ಬೇಸಿಗೆಯಲ್ಲಿ ಕರ್ನಾಟಕದಾದ್ಯಂತ ಬಿಸಿಲಿನ ತಾಪ ಹೆಚ್ಚಳವಾಗುವ ನಿರೀಕ್ಷೆಯಿದೆ. ‘ಲಾ ನೀನಾ’ ಪ್ರಭಾವ ದುರ್ಬಲವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉಷ್ಣಾಂಶ ಸರಾಸರಿಗಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಲಾ ನೀನಾ ಪ್ರಭಾವ ಕಡಿಮೆಯಾಗುತ್ತಿರುವುದರಿಂದ ಮಳೆ ಕಡಿಮೆಯಾಗಿ ಬಿಸಿಲಿನ ಪ್ರಭಾವ ಹೆಚ್ಚಾಗಲಿದೆ. ಈ ಬೇಸಿಗೆಯಲ್ಲಿ ತಾಪಮಾನ ಎಷ್ಟರ ಮಟ್ಟಿಗೆ ಏರಿಕೆಯಾಗುತ್ತದೆ ಎಂಬುದು ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಸ್ಪಷ್ಟವಾಗಲಿದೆ.
ಉತ್ತರ ಕರ್ನಾಟಕಕ್ಕೆ ಹೆಚ್ಚು ಪರಿಣಾಮ
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮೀರಬಹುದು. ಒಂದೆರಡು ಡಿಗ್ರಿ ಹೆಚ್ಚಳವಾದರೂ ಆ ಪ್ರದೇಶಗಳಲ್ಲಿ ತೀವ್ರ ಬಿಸಿಲಿನ ಅನುಭವವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ನೀರಿನ ಸಮಸ್ಯೆಯ ಸಾಧ್ಯತೆ :
ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ತುಂಗಭದ್ರಾ ಜಲಾಶಯ ಹೊರತುಪಡಿಸಿ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದೆ. ಆದರೆ ಬೋರ್ವೆಲ್ ಅವಲಂಬಿತ ಪ್ರದೇಶಗಳು ಮತ್ತು ಈಗಲೇ ನೀರಿನ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ತೊಂದರೆ ಹೆಚ್ಚಾಗಬಹುದು ಎಂದು ತಜ್ಞರು ಸೂಚಿಸಿದ್ದಾರೆ.
ಪ್ರಸ್ತುತ ತಾಪಮಾನ ಸ್ಥಿತಿ (ಜ.28ರ ವರದಿ ಪ್ರಕಾರ – IMD ಬೆಂಗಳೂರು) :
- ರಾಜ್ಯದಲ್ಲಿ ಒಣ ಹವೆ ಮುಂದುವರಿದಿದೆ
- ಕರಾವಳಿ ಜಿಲ್ಲೆಗಳಲ್ಲಿ ಸರಾಸರಿಗಿಂತ 1.6 ಡಿಗ್ರಿ ಸೆಲ್ಸಿಯಸ್ ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆ
- ಉತ್ತರ ಒಳನಾಡಿನ ಕೆಲವೆಡೆ ಸರಾಸರಿಗಿಂತ 3.1 ಡಿಗ್ರಿ ಸೆಲ್ಸಿಯಸ್ ರಿಂದ 5 ಡಿಗ್ರಿ ಸೆಲ್ಸಿಯಸ್ ಏರಿಕೆ
ಪ್ರಮುಖ ಜಿಲ್ಲೆಗಳ ಗರಿಷ್ಠ ತಾಪಮಾನ (ಜ.28ರಂದು) :
- ಬಳ್ಳಾರಿ: 33.8 ಡಿಗ್ರಿ ಸೆಲ್ಸಿಯಸ್
- ಕಲಬುರಗಿ: 33 ಡಿಗ್ರಿ ಸೆಲ್ಸಿಯಸ್
- ಮಂಗಳೂರು: 32.9 ಡಿಗ್ರಿ ಸೆಲ್ಸಿಯಸ್
- ಕಾರವಾರ: 32.6 ಡಿಗ್ರಿ ಸೆಲ್ಸಿಯಸ್
- ಗೋಕರ್ಣ: 32.6 ಡಿಗ್ರಿ ಸೆಲ್ಸಿಯಸ್
- ಚಿತ್ರದುರ್ಗ: 31.5 ಡಿಗ್ರಿ ಸೆಲ್ಸಿಯಸ್
- ಬೆಂಗಳೂರು ನಗರ: 29.6 ಡಿಗ್ರಿ ಸೆಲ್ಸಿಯಸ್
ಚಳಿ ಕಡಿಮೆಯಾಗುತ್ತಿರುವುದರಿಂದ ಬೇಸಿಗೆಯ ಆರಂಭವೇ ಈಗ ಗೋಚರಿಸುತ್ತಿದೆ. ಬಿಸಿಲಿನ ತಾಪದಿಂದ ರಕ್ಷಣೆಗಾಗಿ ಸೂರ್ಯನ ಬೆಳಕಿನಲ್ಲಿ ಹೆಚ್ಚು ಸಮಯ ಕಳೆಯದಿರಿ, ಸಾಕಷ್ಟು ನೀರು ಕುಡಿಯಿರಿ ಮತ್ತು ಹಗುರ ಬಟ್ಟೆ ಧರಿಸಿ ಎಂದು ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ.





