ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ದೇರಳಕಟ್ಟೆಯಲ್ಲಿರುವ ಕಣಚೂರು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆದರಿಕೆ ಕರೆಯನ್ನು ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯೇ ಮಾಡಿದ್ದಾಳೆ ಎಂಬ ಆಘಾತಕಾರಿ ಸತ್ಯ ಬಯಲಾಗಿದ್ದು, ಈ ಘಟನೆಯ ಹಿಂದಿನ ಕಾರಣ ಸೆಮಿನಾರ್ನಿಂದ ತಪ್ಪಿಸಿಕೊಳ್ಳುವ ಉದ್ದೇಶವಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಬುಧವಾರ (ಜೂನ್ 4) ರಂದು ಬೆಳಿಗ್ಗೆ 8:45ರ ಸುಮಾರಿಗೆ ಕಣಚೂರು ಆಸ್ಪತ್ರೆಯ ಪ್ರಸವ ಕೊಠಡಿಯ (ಲೇಬರ್ ಥಿಯೇಟರ್) ದೂರವಾಣಿಗೆ ಒಟ್ಟು ಐದು ಬಾರಿ ಕರೆ ಮಾಡಲಾಗಿತ್ತು. “ಬೆಳಿಗ್ಗೆ 11 ಗಂಟೆಯೊಳಗೆ ಆಸ್ಪತ್ರೆಯನ್ನು ಖಾಲಿ ಮಾಡಿ, ಇಲ್ಲವಾದರೆ ಬಾಂಬ್ ಸ್ಫೋಟಗೊಳಿಸುವೆವು” ಎಂದು ಬೆದರಿಕೆ ಹಾಕಲಾಗಿತ್ತು. ಈ ಕರೆಯಿಂದ ಆತಂಕಕ್ಕೆ ಒಳಗಾದ ಆಸ್ಪತ್ರೆಯ ಆಡಳಿತ ಮಂಡಳಿಯು ತಕ್ಷಣವೇ ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ತಂಡದೊಂದಿಗೆ ಸಂಪೂರ್ಣ ಆಸ್ಪತ್ರೆ ಮತ್ತು ಕಾಲೇಜು ಆವರಣವನ್ನು ಪರಿಶೀಲಿಸಿದರು. ಆದರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ.ಇದು ಈ ಹುಸಿ ಕರೆಯೆಂದು ಖಾತರಿಯಾಯಿತು.
ಈ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿ ಶ್ರೀಮತಿ ಚಲಸಾನಿ ಮೋನಿಕಾ ಚೌಧರಿಯಿಂದ ದೂರು ಸಲ್ಲಿಕೆಯಾಗಿತ್ತು. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಿದರು. ಬೆದರಿಕೆ ಕರೆಯನ್ನು ದೂರುದಾರೆಯಾದ ಚಲಸಾನಿ ಮೋನಿಕಾ ಚೌಧರಿಯೇ ಮಾಡಿದ್ದಾಳೆ ಎಂದು ತಿಳಿದುಬಂದಿತ್ತು. ವಿಚಾರಣೆಯ ವೇಳೆ, ಆಕೆ ತಾನೇ ಈ ಕೃತ್ಯವನ್ನು ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.
ತನಿಖೆಯಿಂದ ತಿಳಿದುಬಂದಂತೆ, ಜೂನ್ 4ರಂದು ಕಾಲೇಜಿನಲ್ಲಿ ಸೆಮಿನಾರ್ ನಡೆಯಬೇಕಿತ್ತು. ಮೋನಿಕಾ ಚೌಧರಿಯು ಈ ಸೆಮಿನಾರ್ನಲ್ಲಿ ಭಾಗವಹಿಸಬೇಕಿತ್ತು. ಆದರೆ, ಈ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಆಕೆ ಈ ರೀತಿಯ ಹುಸಿ ಬಾಂಬ್ ಬೆದರಿಕೆ ಕರೆಯನ್ನು ಯೋಜಿಸಿದ್ದಳು. ಈ ಕೃತ್ಯವು ಆಸ್ಪತ್ರೆಯ ಸಿಬ್ಬಂದಿ, ರೋಗಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಆತಂಕವನ್ನುಂಟು ಮಾಡಿತ್ತು. ಪೊಲೀಸರು ಆಕೆಯನ್ನು ಬಂಧಿಸಿದ್ದು, ಆಕೆಯ ಮೊಬೈಲ್ ಫೋನ್ನ್ನು ವಶಪಡಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.