ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂಬಂತೆ, ಎಸ್ಎಸ್ಎಲ್ಸಿ (SSLC) ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ 30 ರೂಪಾಯಿಗೆ ಹರಾಜಾಗುತ್ತಿವೆ. ಮೊನ್ನೆಯಷ್ಟೇ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಸುದ್ದಿಯ ಬೆನ್ನಲ್ಲೇ ಈಗ ಎಸ್ಎಸ್ಎಲ್ಸಿ ಸರದಿ ಬಂದಿದ್ದು, ಈ ದಂಧೆಯಿಂದಾಗಿ ವರ್ಷವಿಡೀ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಓಪನ್ ಆಫರ್!
ಯಾವುದೋ ಮೊಬೈಲ್ ಪ್ರಮೋಷನ್ ವಿಡಿಯೋ ಮಾಡುವಂತೆ ಕಿಡಿಗೇಡಿಗಳು ಇನ್ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್ನಲ್ಲಿ ಪ್ರಶ್ನೆ ಪತ್ರಿಕೆ ಬೇಕಿದ್ದರೆ DM ಮಾಡಿ ಎಂದು ಬಹಿರಂಗವಾಗಿ ಪೋಸ್ಟ್ ಹಾಕುತ್ತಿದ್ದಾರೆ. ಪರೀಕ್ಷೆ ಆರಂಭಕ್ಕೂ ಮುನ್ನ ಬೆಳಿಗ್ಗೆ 8:15ಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳು ಲೀಕ್ ಆಗುತ್ತಿವೆ. ಇಷ್ಟೇ ಅಲ್ಲದೆ, ಕ್ಯೂಆರ್ ಕೋಡ್ (QR Code) ಕಳುಹಿಸಿ 30 ರೂ.ಗಳಿಂದ 50 ರೂ. ಹಣ ಪಾವತಿಸಿದರೆ ಸಾಕು, ನಿಮ್ಮ ಕೈಗೆ ಪ್ರಶ್ನೆ ಪತ್ರಿಕೆ ಸೇರುತ್ತದೆ ಎಂಬ ಆಫರ್ಗಳು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿವೆ. ಕೇವಲ ಹಣಕ್ಕಾಗಿ ಮಾತ್ರವಲ್ಲದೆ, ತಮ್ಮ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಇಂತಹ ಕೃತ್ಯವೆಸಗುತ್ತಿರುವುದು ಆಘಾತಕಾರಿ ಸಂಗತಿ.
ಶಿಕ್ಷಣ ಇಲಾಖೆಯು ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಮೂರು ಪ್ರಿಪರೇಟರಿ ಪರೀಕ್ಷೆಗಳ ಪರಿಕಲ್ಪನೆ ತಂದಿತ್ತು. ಆದರೆ ಪ್ರಶ್ನೆ ಪತ್ರಿಕೆ ಸೂರಿಕೆ ಮಾಡುವವ, ಈ ದಂಧೆಯಿಂದಾಗಿ ಇಡೀ ಯೋಜನೆಯ ಉದ್ದೇಶವೇ ಹಾಳಾಗಿದೆ. ಕಷ್ಟಪಟ್ಟು ಓದುವ ಮಕ್ಕಳಿಗಿಂತ, ಕೇವಲ 30 ರೂಪಾಯಿ ಕೊಟ್ಟು ಪ್ರಶ್ನೆ ಪತ್ರಿಕೆ ಪಡೆದ ‘ಶಾರ್ಟ್ಕಟ್’ ಹಾದಿಯ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುತ್ತಿದ್ದಾರೆ. ಇದು ವಿದ್ಯಾರ್ಥಿಗಳ ಆಕ್ರೋಶ ಹೊರ ಹಾಕಿದ್ದಾರೆ.
KSEAB (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ) ಸ್ಪಷ್ಟನೆ ಏನು ?
ಈ ಗಂಭೀರ ವಿಷಯದ ಬಗ್ಗೆ ಮಂಡಳಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಲಾಗಿದೆ. ಐದು ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿಲ್ಲ, ಕೇವಲ ಎರಡು ಮಾತ್ರ ಸೋರಿಕೆಯಾಗಿರಬಹುದು ಎಂಬ ಅನುಮಾನವಿದೆ ಎಂದು ಮಂಡಳಿ ಹೇಳಿದೆ. ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಇದು ಕೇವಲ ಹಣ ಮಾಡುವ ಉದ್ದೇಶದ ಸುಳ್ಳು ಸುದ್ದಿಯೂ ಆಗಿರಬಹುದು ಎಂದು ಮಂಡಳಿ ಶಂಕೆ ವ್ಯಕ್ತಪಡಿಸಿದೆ.





