ಚಾಮರಾಜನಗರ: ನಿಧಿ ದುರಾಸೆಗೆ ವ್ಯಕ್ತಿಯೊಬ್ಬ ತನ್ನನ್ನೇ ಹೆತ್ತು ಪೋಷಿಸಿದ ವೃದ್ಧ ತಾಯಿಯನ್ನು ಬಲಿ ಕೊಡಲು ಮುಂದಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಈ ಘಟನೆಗೆ ಕಾರಣವಾದ ವ್ಯಕ್ತಿ ಕೊಂಡಯ್ಯನ ಮಾದಶೆಟ್ಟಿ. ಈತನಿಗೆ ತನ್ನ ಮನೆಯಲ್ಲಿ ಗುಪ್ತನಿಧಿ ಇದೆ ಎಂಬ ಮೂಢನಂಬಿಕೆ ಬೇರೂರಿತ್ತು. ಆ ನಿಧಿಯನ್ನು ಪಡೆಯಲು ಮಾಂತ್ರಿಕರ ಸಲಹೆ ಪಡೆದುಕೊಂಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಮಾಂತ್ರಿಕರು ನೀಡಿದ ಸೂಚನೆಯಂತೆ, ಕುಟುಂಬದ ಹಿರಿಯ ಮಹಿಳೆಯನ್ನು ಬಲಿ ನೀಡಿದರೆ ಅಪಾರ ಸಂಪತ್ತು ದೊರೆಯುತ್ತದೆ ಎಂಬ ಭ್ರಮೆಗೆ ಒಳಗಾಗಿ, ಆತ ತನ್ನ 80 ವರ್ಷದ ತಾಯಿ ಮಾದಮ್ಮಶೆಟ್ಟಿಯನ್ನು ಬಲಿ ಕೊಡಲು ಮುಂದಾಗಿದ್ದಾನೆ.
ಘಟನೆಯ ದಿನ, ಮಾದಶೆಟ್ಟಿ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿ, ಪೂಜೆಯ ಹೆಸರಿನಲ್ಲಿ ವಿಚಿತ್ರ ವಿಧಿವಿಧಾನಗಳನ್ನು ಮಾಡಲು ಮುಂದಾಗಿದ್ದಾನೆ. ತಾಯಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ, ಅವಳನ್ನು ಬಲಿಕೊಡುವ ಯತ್ನ ಮಾಡಿದ್ದಾನೆ ಎಂದು ತಿಳಿದುಬಂದಿದೆ. ವೃದ್ಧೆ ಚೀರಾಡಿದ ನಂತರ ಗ್ರಾಮಸ್ಥರ ಕಿವಿಗೆ ಬಿದ್ದಾಗ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ, ಈ ಕೃತ್ಯವನ್ನು ತಡೆದಿದ್ದಾರೆ.
ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸಿ ಈ ಕೃತ್ಯವನ್ನು ತಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಗನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಮಾಂತ್ರಿಕರ ಪಾತ್ರದ ಕುರಿತು ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿದ್ದಾರೆ. ಇಂತಹ ಅಂಧನಂಬಿಕೆಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
