ಬೆಂಗಳೂರು, ಮಾರ್ಚ್ 26: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಬಜೆಟ್ ಮಂಡನೆಗೂ ಮುನ್ನ ರಾಹುಕಾಲ ಪರಿಶೀಲಿಸಿದ್ದನ್ನು ಒಪ್ಪಿಕೊಂಡ ಅವರು, ವೈಯಕ್ತಿಕವಾಗಿ ತಮಗೆ ರಾಹುಕಾಲ, ಗುಳಿಕಕಾಲದಲ್ಲಿ ನಂಬಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ, ಯುಗಾದಿ ಮತ್ತು ಶಿವರಾತ್ರಿಯಂಥ ಹಬ್ಬಗಳ ದಿನಗಳಲ್ಲೂ ತಾವು ಮಾಂಸಾಹಾರ ಸೇವನೆ ಮಾಡುತ್ತೇನೆ ಎಂಬ ಹೇಳಿಕೆಯನ್ನು ನೀಡಿ ವಿವಾದಕ್ಕೆ ಎಡೆಮಾಡಿಕೊಟ್ಟರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೂ ಮುನ್ನ ರಾಹುಕಾಲ ಪರಿಶೀಲಿಸಿ ಸಮಯ ನಿಗದಿಪಡಿಸಿದ್ದಾರೆ ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಅಧಿಕಾರಿಗಳು ಮತ್ತು ಮನೆಯವರ ಸಲಹೆಯ ಮೇರೆಗೆ ನಾನು ರಾಹುಕಾಲ ಪರಿಶೀಲಿಸಿದ್ದು ನಿಜ. ಆದರೆ ವೈಯಕ್ತಿಕವಾಗಿ ನನಗೆ ರಾಹುಕಾಲ, ಗುಳಿಕಕಾಲ ಅಥವಾ ಗ್ರಹಣ ಕಾಲಗಳ ಬಗ್ಗೆ ಯಾವುದೇ ನಂಬಿಕೆ ಇಲ್ಲ. ಹಿಂದಿನ ಸರ್ಕಾರಗಳಲ್ಲೂ ರಾಹುಕಾಲದಲ್ಲೇ ಬಜೆಟ್ ಮಂಡಿಸಿದ ಉದಾಹರಣೆಗಳಿವೆ” ಎಂದು ಹೇಳಿದರು.
ನಂತರ ಅವರು, “ಯುಗಾದಿ ದಿನ ಅಥವಾ ಶಿವರಾತ್ರಿ ದಿನ ಯಾರಾದರೂ ಮಾಂಸಾಹಾರ ಸೇವನೆ ಮಾಡುತ್ತಾರಾ? ನಾನು ತಿನ್ನುತ್ತೇನೆ, ಅದು ನನ್ನ ವೈಯಕ್ತಿಕ ಆಯ್ಕೆ” ಎಂಬ ಹೇಳಿಕೆ ನೀಡಿದರು. ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಸಂಪ್ರದಾಯ ಮತ್ತು ಸಂಸ್ಕೃತಿಗೆ ಅವಹೇಳನ ಮಾಡಿದಂತಿದೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




