ಬೆಂಗಳೂರು: ಕರ್ನಾಟಕದ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ವಲಯಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಹಿರಿಯ ರಾಜಕಾರಣಿ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರದ್ದು ನಿಜಕ್ಕೂ ಒಂದು ಅಸಾಮಾನ್ಯ ಜೀವನಗಾಥೆ. 95 ವರ್ಷಗಳ ಸುದೀರ್ಘ ಪಯಣದಲ್ಲಿ ಅವರು ಓರ್ವ ಯಶಸ್ವಿ ಉದ್ಯಮಿಯಾಗಿ, ಶಿಕ್ಷಣವಾದಿಯಾಗಿ, ಮತ್ತು ಕಾಂಗ್ರೆಸ್ ಪಕ್ಷದ ಅತ್ಯಂತ ನಿಷ್ಠಾವಂತ ನಾಯಕರಾಗಿ ಸೇವೆ ಸಲ್ಲಿಸಿದರು.
ಶಾಮನೂರು ಶಿವಶಂಕರಪ್ಪ ಅವರು 1931ರ ಜೂನ್ 16ರಂದು ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ಅವರ ತಂದೆ ಶಾಮನೂರು ಕಲ್ಲಪ್ಪ ಮತ್ತು ತಾಯಿ ಸಾವಿತ್ರಮ್ಮ,ಇವರದ್ದು ದಾವಣಗೆರೆಯ ಪ್ರತಿಷ್ಠಿತ ಕುಟುಂಬದವರಾಗಿದ್ದಾರೆ. ಶಿಕ್ಷಣದ ವಿಚಾರಕ್ಕೆ ಬಂದರೆ, ಶಿವಶಂಕರಪ್ಪ ಅವರು ಇಂಟರ್ ಮೀಡಿಯಟ್ ವರೆಗೆ ಶಿಕ್ಷಣ ಪಡೆದಿದ್ದರು.
ಶೈಕ್ಷಣಿಕ ಜೀವನ ಮುಗಿಯುತ್ತಿದ್ದಂತೆಯೇ ಅವರು ಕುಟುಂಬದ ವ್ಯವಹಾರಕ್ಕೆ ಸಂಬಂಧಿಸಿದ ಬಿಸಿನೆಸ್ಗೆ ಸಹಕಾರ ನೀಡಿದರು. ತಂದೆಯ ಒಡೆತನದ ‘ಶಾಮನೂರು ಕಲ್ಲಪ್ಪ ಅಂಡ್ ಸನ್ಸ್’ ಎಂಬ ಅಂಗಡಿಯಲ್ಲಿ ವ್ಯಾಪಾರವನ್ನು ಪ್ರಾರಂಭಿಸಿದ ಅವರು, ತಮ್ಮ ಕಠಿಣ ಪರಿಶ್ರಮದಿಂದ ಯಶಸ್ವಿ ಉದ್ಯಮಿ ಮತ್ತು ಕೈಗಾರಿಕೋದ್ಯಮಿಯಾಗಿ ಬೆಳೆದರು.
1954ರಲ್ಲಿ, ಅವರು ಚನ್ನಗಿರಿ ತಾಲ್ಲೂಕಿನ ವಡ್ನಾಳ್ ಗ್ರಾಮದ ಪಾರ್ವತಮ್ಮ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಮೂವರು ಪುತ್ರರು ಮತ್ತು ನಾಲ್ವರು ಪುತ್ರಿಯರು ಸೇರಿದಂತೆ ಒಟ್ಟು ಏಳು ಜನ ಮಕ್ಕಳಿದ್ದರು.
ವ್ಯಾಪಾರದಲ್ಲಿ ಯಶಸ್ಸು ಕಂಡ ನಂತರ, ಶಿವಶಂಕರಪ್ಪ ಅವರು ಸಾರ್ವಜನಿಕ ಜೀವನದತ್ತ ಆಕರ್ಷಿತರಾದರು. ಸ್ಥಳೀಯ ಆಡಳಿತದಲ್ಲಿ ತಮ್ಮ ಸೇವೆಯನ್ನು ಆರಂಭಿಸಿದ ಅವರು, 1969ರಲ್ಲಿ ಮೊದಲ ಬಾರಿಗೆ ನಗರಸಭೆ ಸದಸ್ಯರಾಗಿ ಆಯ್ಕೆಯಾದರು. ಎರಡು ವರ್ಷಗಳ ನಂತರ, 1971ರಲ್ಲಿ ಪುನರಾಯ್ಕೆಯಾದರು. ಅವರ ನಾಯಕತ್ವದ ಸಾಮರ್ಥ್ಯ ಮತ್ತು ಜನಪ್ರಿಯತೆಯ ಫಲವಾಗಿ, 1971 ರಿಂದ 1973ರವರೆಗೆ ದಾವಣಗೆರೆ ನಗರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಸ್ಥಳೀಯ ಆಡಳಿತಕ್ಕೆ ತಮ್ಮ ಕೊಡುಗೆ ನೀಡಿದರು. 1978 ರಿಂದ 1980ರವರೆಗೆ ಅವರು ಕಾಂಗ್ರೆಸ್ನ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದರು.
ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಗಮನಾರ್ಹ. ಅವರ ರಾಜಕೀಯ ಜೀವನದ ಪ್ರಮುಖ ಮೈಲಿಗಲ್ಲುಗಳನ್ನ ನೋಡುವುದಾದರೆ,
ಕೇವಲ 1999ರ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಅವರಿಗೆ ಸೋಲು ಎದುರಾಗಿತ್ತು. ಉಳಿದಂತೆ, ಅವರು ಸತತವಾಗಿ ದಾವಣಗೆರೆ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿದ್ದರು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅವರು ತೋಟಗಾರಿಕೆ ಮತ್ತು ಎಪಿಎಂಸಿ (APMC) ಸಚಿವರಾಗಿ ಸೇವೆ ಸಲ್ಲಿಸಿ ರಾಜ್ಯದ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದರು.
ಶಿವಶಂಕರಪ್ಪ ಅವರ ರಾಜಕೀಯ ಜೀವನದ ಅತ್ಯಂತ ಪ್ರಮುಖ ಗುರುತು ಎಂದರೆ, ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಯ ಖಾಯಂ ಖಜಾಂಚಿಯಾಗಿ ಬಹು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ಸುದೀರ್ಘ ಅವಧಿಯಲ್ಲಿ ಅವರು ಪಕ್ಷದ ಆರ್ಥಿಕ ಸ್ಥಿರತೆಯನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ರಾಜಕೀಯದ ಹೊರತಾಗಿ, ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯ. 1972ರಲ್ಲಿ ಅವರು ಪ್ರತಿಷ್ಠಿತ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಈ ಸಂಸ್ಥೆಯ ಅಡಿಯಲ್ಲಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಉತ್ತಮ ಶಿಕ್ಷಣ ದೊರಕಲು ಕಾರಣರಾದರು.





