ವಿಜಯಪುರ, ಮಾರ್ಚ್ 22: ಯುಗಾದಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ವಿಜಯಪುರ ತಾಲೂಕಿನ ಕತಕನಹಳ್ಳಿಯ ಶ್ರೀ ಗುರುಚಕ್ರವರ್ತಿ ಸದಾಶಿವ ಮಠದಲ್ಲಿ ಐದು ದಿನಗಳ ಜಾತ್ರಾ ಮಹೋತ್ಸವ ಭಕ್ತಿಭಾವದಿಂದ ನೆರವೇರಿತು. ಜಾತ್ಯಾತೀತವಾಗಿ ನಡೆಯುವ ಈ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಧಾರ್ಮಿಕ ಸಂಭ್ರಮದಲ್ಲಿ ಪಾಲ್ಗೊಂಡರು. ವಿಶೇಷವಾಗಿ ಜಾತ್ರೆಯ ಕೊನೆಯ ದಿನ ಪೀಠಾಧಿಪತಿಗಳು ನುಡಿಯುವ ಭವಿಷ್ಯವಾಣಿಗೆ ಅಪಾರ ಮಹತ್ವವಿದ್ದು, ಭಕ್ತರಲ್ಲಿ ಅದಕ್ಕೆ ವಿಶೇಷ ನಂಬಿಕೆಯಿದೆ.
ಪ್ರತಿ ವರ್ಷವೂ ಯುಗಾದಿ ಸಂದರ್ಭದಲ್ಲಿ ನಡೆಯುವ ಈ ಜಾತ್ರೆಯ ಅಂತಿಮ ದಿನ ಮಠದ ಪೀಠಾಧಿಪತಿ ಶ್ರೀ ಶಿವಯ್ಯ ಸ್ವಾಮೀಜಿ ಭವಿಷ್ಯದ ಕುರಿತು ಸಾಂಕೇತಿಕವಾಗಿ ನುಡಿಸುವುದು ಸಂಪ್ರದಾಯವಾಗಿದೆ. ಈ ಬಾರಿ ಕೂಡ ಅವರು ಮಳೆ, ಬೆಳೆ, ರಾಜಕೀಯ ಪರಿಸ್ಥಿತಿ ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತು ಭವಿಷ್ಯವಾಣಿ ನೀಡಿದ್ದಾರೆ.
ಸ್ವಾಮೀಜಿಗಳು ತಮ್ಮ ನುಡಿಯಲ್ಲಿ, “ಜಗತ್ತಿನ ಉಳಿವಿಗಾಗಿ ‘ಶು.ನ.ಕ’ ಎಂಬ ತತ್ವಗಳ ಸಭೆ ನಡೆಯುತ್ತಿದೆ” ಎಂದು ಹೇಳಿದರು. ಇದರಲ್ಲಿ ‘ಶು’ ಎಂದರೆ ಶುದ್ಧತೆ, ‘ನ’ ಎಂದರೆ ನಂಬಿಕೆ ಮತ್ತು ‘ಕ’ ಎಂದರೆ ಕರ್ತವ್ಯ. ಈ ಮೂರು ತತ್ವಗಳು ಒಂದಾಗಿದರೆ ಜಗತ್ತಿನ ಉದ್ಧಾರ ಸಾಧ್ಯ ಎಂಬ ಸಂದೇಶವನ್ನು ಅವರು ನೀಡಿದರು. ಸಮಾಜದಲ್ಲಿ ನಡೆಯುತ್ತಿರುವ ಅಶಾಂತಿ, ಗೊಂದಲ ಹಾಗೂ ಬಣ್ಣಗಳ ಆಧಾರದ ಮೇಲೆ ನಡೆಯುತ್ತಿರುವ ಸಂಘರ್ಷಗಳನ್ನು ಉಲ್ಲೇಖಿಸಿ, “ಕಾವಿ, ಖಾದಿ, ಖಾಕಿ ಜೊತೆಗೆ ಇನ್ನಷ್ಟು ಬಣ್ಣಗಳು ಸೇರಿ ಗದ್ದಲ ಹೆಚ್ಚುತ್ತಿದೆ” ಎಂದು ಹೇಳಿದರು.
ಇನ್ನು ರಾಜಕೀಯ ಮತ್ತು ಸಾಮಾಜಿಕ ಸಂಘರ್ಷಗಳ ಬಗ್ಗೆ ಮಾತನಾಡಿದ ಅವರು, “ಗಡ್ಡ, ಗುಡ್ಡ, ಗಿಡ್ಡಗಳ ನಡುವೆ ಜಗಳ ಹೆಚ್ಚಾಗಿ ಗದ್ದಲ ಉಂಟಾಗುತ್ತಿದೆ” ಎಂದು ಹೇಳಿದರು. ಜಗತ್ತಿನ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಭಾವನೆ ತಪ್ಪು ಎಂದು ಎಚ್ಚರಿಸಿದರು. “ಅಲ್ಲಿ ಯುದ್ಧ ನಡೆದಿದೆ ಎಂದು ನಾವು ದೂರವಾಗಲು ಸಾಧ್ಯವಿಲ್ಲ, ಅದರ ಪರಿಣಾಮ ಎಲ್ಲೆಡೆ ಕಾಣುತ್ತದೆ” ಎಂದು ಹೇಳಿದರು.
ಆರ್ಥಿಕ ಸ್ಥಿತಿಯ ಕುರಿತಾಗಿ ಮಾತನಾಡಿದ ಅವರು, ಮೌಲ್ಯಗಳ ಕುಸಿತದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು. “ಆನೆ ಬೆಲೆ ಎತ್ತಿಗೆ, ಎತ್ತಿನ ಬೆಲೆ ಕುರಿಗೆ, ಕುರಿ ಬೆಲೆ ಕೋಳಿಗೆ, ಕೊನೆಗೆ ಮನುಷ್ಯನ ಬೆಲೆ ಕುಸಿದಿದೆ” ಎಂದು ಹೇಳುವ ಮೂಲಕ ಮಾನವೀಯ ಮೌಲ್ಯಗಳ ಹೀನಾಯ ಸ್ಥಿತಿಯನ್ನು ಸೂಚಿಸಿದರು.
ಮಳೆಗಾಲದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ಸ್ವಾಮೀಜಿಗಳು, ಈ ವರ್ಷ ಮಳೆಯಲ್ಲೂ ವೈವಿಧ್ಯಮಯ ಪರಿಸ್ಥಿತಿಗಳು ಕಾಣಿಸಿಕೊಳ್ಳಲಿವೆ ಎಂದು ಹೇಳಿದರು. “ಮಳೆ ಬೆನ್ನ ಬೆಳೆ ಹತ್ತುತ್ತದೆ, ಬೆಳೆ ಬೆನ್ನ ಮಳೆ ಬರುತ್ತದೆ” ಎಂದು ಹೇಳಿದರು. ಅತಿವೃಷ್ಟಿ, ಅಲ್ಪವೃಷ್ಟಿ, ಸಮವೃಷ್ಟಿ ಮತ್ತು ಅನಾವೃಷ್ಟಿ ಈ ನಾಲ್ಕು ರೀತಿಯ ಮಳೆಯೂ ಸಂಭವಿಸಬಹುದೆಂದು ಅವರು ತಿಳಿಸಿದರು. ಇದರಿಂದ ಕೃಷಿ ಹಾಗೂ ವ್ಯಾಪಾರದಲ್ಲಿ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಅಹಂಕಾರದ ಬಗ್ಗೆ ಎಚ್ಚರಿಸಿದ ಅವರು, “ನಾನು ಮೇಲು ಎನ್ನುವ ಅಹಂಕಾರವು ನಾಶಕ್ಕೆ ಕಾರಣವಾಗುತ್ತದೆ” ಎಂದು ಹೇಳಿದರು. ಧರ್ಮ ಮತ್ತು ನೈತಿಕತೆ ಪಾಲಿಸಿದರೆ ಮಾತ್ರ ನಿಜವಾದ ಜಯ ಸಾಧಿಸಲು ಸಾಧ್ಯ ಎಂದು ಭಕ್ತರಿಗೆ ಸಂದೇಶ ನೀಡಿದರು. “ಸದಾಶಿವನ ಸಲುವಾಗಿ ಸೋಲಲು ಕಲಿಯಿರಿ, ಆಗ ನೀವು ಜೀವನದಲ್ಲಿ ಎಲ್ಲೆಡೆ ಗೆಲ್ಲುತ್ತೀರಿ” ಎಂದು ಆಶೀರ್ವದಿಸಿದರು.





