ಬೆಂಗಳೂರು: ರಾಜಧಾನಿಯಲ್ಲಿ ಜಾರಿ ನಿರ್ದೇಶನಾಲಯದ (ED) ತನಿಖೆಯ ಬಿಸಿ ಮತ್ತೊಂದು ಜೀವವನ್ನು ಬಲಿಪಡೆದಿದೆ. ಖ್ಯಾತ ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆಯ ಆಘಾತ ಮಾಸುವ ಮುನ್ನವೇ, ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ ಪರಮೇಶ್ವರಯ್ಯ ಅವರು ಇಂದು ಬೆಳ್ಳಂಬೆಳಗ್ಗೆ ಕೋರಮಂಗಲದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಶೇಷವೆಂದರೆ, ಇಂದು ಅವರು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು.
ಘಟನೆಯ ಹಿನ್ನೆಲೆ
ಬಿಬಿಎಂಪಿಯ ಮಹಾದೇವಪುರ ವಲಯದಲ್ಲಿ ಮುಖ್ಯ ಇಂಜಿನಿಯರ್ ಆಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಮೇಶ್ವರಯ್ಯ ಅವರು ಕೋರಮಂಗಲದಲ್ಲಿ ವಾಸವಿದ್ದರು. ಸುಮಾರು 20 ದಿನಗಳ ಹಿಂದೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಮೇಶ್ವರಯ್ಯ ಅವರ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ದಾಳಿಯ ವೇಳೆ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಂದಿನಿಂದ ಪರಮೇಶ್ವರಯ್ಯ ಅವರು ತೀವ್ರ ಆತಂಕಕ್ಕೆ ಒಳಗಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇಂದು (ಫೆಬ್ರವರಿ 25) ಶಾಂತಿನಗರದ ಇಡಿ ಕಚೇರಿಗೆ ಹಾಜರಾಗುವಂತೆ ಪರಮೇಶ್ವರಯ್ಯ ಅವರಿಗೆ ಸಮನ್ಸ್ ನೀಡಲಾಗಿತ್ತು. ಇಂದು ಬೆಳಗ್ಗೆ ಅವರು ವಿಚಾರಣೆಗೆ ತೆರಳಬೇಕಿತ್ತು. ಆದರೆ, ಇಡಿ ಅಧಿಕಾರಿಗಳ ಕಠಿಣ ಪ್ರಶ್ನೆಗಳು ಮತ್ತು ಕಾನೂನು ಸಂಕಷ್ಟಗಳಿಗೆ ಹೆದರಿದ ಅವರು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ತರು ತಿಳಿಸಿದ್ದಾರೆ.
ಮಾನಸಿಕ ಖಿನ್ನತೆ
ಇಡಿ ದಾಳಿಯ ನಂತರ ಪರಮೇಶ್ವರಯ್ಯ ಅವರ ವ್ಯಕ್ತಿತ್ವದಲ್ಲಿ ಭಾರಿ ಬದಲಾವಣೆಯಾಗಿತ್ತು. ಅವರು ಯಾರ ಜೊತೆಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ, ಯಾವಾಗ್ಲೂ ಇಡಿ ಪ್ರಕರಣದ ಬಗ್ಗೆಯೇ ಚಿಂತಿಸುತ್ತಿದ್ದರು ಎನ್ನಲಾಗಿದೆ. ಈ ತೀವ್ರ ಮಾನಸಿಕ ಖಿನ್ನತೆಯಿಂದ ಹೊರಬರಲು ಅವರು ಇತ್ತೀಚೆಗೆ ಮನೋವೈದ್ಯರಿಂದ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಆದರೂ ಇಂದು ಈ ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರದ ಸಂಗತಿ. ಅವರ ಏಕೈಕ ಪುತ್ರ ಆಸ್ಟ್ರೇಲಿಯಾದಲ್ಲಿದ್ದು, ತಂದೆಯ ಸಾವಿನ ಸುದ್ಧಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.
ಸಿಜೆ ರಾಜ್ ಪ್ರಕರಣ
ಇತ್ತೀಚೆಗಷ್ಟೇ ಉದ್ಯಮಿ ಸಿಜೆ ರಾಯ್ ಅವರು ಕೂಡ ಇಡಿ ವಿಚಾರಣೆಯ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಪರಮೇಶ್ವರಯ್ಯ ಅವರ ಸಾವು ಕೂಡ ಅದೇ ಮಾದರಿಯಲ್ಲಿದೆ. ತನಿಖಾ ಸಂಸ್ಥೆಗಳು ವಿಚಾರಣೆಯ ಹೆಸರಿನಲ್ಲಿ ನೀಡುವ ಒತ್ತಡವು ವ್ಯಕ್ತಿಯ ಮಾನಸಿಕ ಸ್ಥಿತಿಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಈಗ ಸಾರ್ವಜನಿಕ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ.
ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.





