ರಾಮನಗರ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ವಿಶ್ವದ ಹಲವು ದೇಶಗಳ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದ್ದು, ಭಾರತದಲ್ಲಿಯೂ ಹಲವು ಉದ್ಯಮಗಳಿಗೆ ಬಿಸಿ ತಟ್ಟಿದೆ. ಗ್ಯಾಸ್, ಪೆಟ್ರೋಲಿಯಂ ಸೇರಿದಂತೆ ಹಲವು ಕ್ಷೇತ್ರಗಳಿಗೆ ಈ ಯುದ್ಧದ ಪರಿಣಾಮ ತಟ್ಟಿದ್ದು, ಕರ್ನಾಟಕದ ವಿಶ್ವಪ್ರಸಿದ್ಧ ಚನ್ನಪಟ್ಟಣ ಬೊಂಬೆ ಉದ್ಯಮಕ್ಕೂ ಈಗ ಸಂಕಷ್ಟ ಎದುರಾಗಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರವು “ಗೊಂಬೆಗಳ ನಗರ” ಎಂದು ಹೆಸರುವಾಸಿಯಾಗಿದ್ದು, ಇಲ್ಲಿ ತಯಾರಾಗುವ ಮರದ ಬೊಂಬೆಗಳು ಹಾಗೂ ಆಟಿಕೆಗಳು ದೇಶದಷ್ಟೇ ಅಲ್ಲ, ವಿದೇಶಗಳಲ್ಲಿಯೂ ಅಪಾರ ಜನಪ್ರಿಯತೆ ಹೊಂದಿವೆ. ಆದರೆ ಇತ್ತೀಚಿನ ಯುದ್ಧದ ಪರಿಸ್ಥಿತಿಯಿಂದಾಗಿ ಈ ಬೊಂಬೆಗಳ ರಫ್ತು ಪ್ರಕ್ರಿಯೆಗೆ ದೊಡ್ಡ ಅಡ್ಡಿ ಉಂಟಾಗಿದೆ.
ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್ ಹಾಗೂ ಸಣ್ಣ-ಪುಟ್ಟ ಕೈಗಾರಿಕೆಗಳಲ್ಲಿ ತಯಾರಾಗುವ ಮರದ ಗೊಂಬೆಗಳು, ಆಟಿಕೆಗಳು ಮತ್ತು ಅಲಂಕಾರಿಕ ವಸ್ತುಗಳಲ್ಲಿ ಸುಮಾರು 30 ಶೇಕಡಾ ವಿದೇಶಗಳಿಗೆ ರಫ್ತಾಗುತ್ತವೆ. ವಿಶೇಷವಾಗಿ ಅಮೆರಿಕಾ, ಯುರೋಪ್ ಹಾಗೂ ಗಲ್ಪ್ ದೇಶಗಳಲ್ಲಿ ಚನ್ನಪಟ್ಟಣದ ಬೊಂಬೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಆದರೆ ಕಳೆದ ಎರಡು ವಾರಗಳಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿರುವುದರಿಂದ ವಿದೇಶಿ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಉಂಟಾಗಿದೆ.
ಇದರ ಪರಿಣಾಮವಾಗಿ ಚನ್ನಪಟ್ಟಣದ ಉದ್ಯಮಿಗಳಿಗೆ ಬರಬೇಕಿದ್ದ ಹೊಸ ಆರ್ಡರ್ಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರಬೇಕಿದ್ದ ವಿದೇಶಿ ಆರ್ಡರ್ಗಳು ಇನ್ನೂ ಬಂದಿಲ್ಲ. ಸಾಮಾನ್ಯವಾಗಿ ಈಸ್ಟರ್, ದಸರಾ ಹಾಗೂ ಕ್ರಿಸ್ಮಸ್ ಹಬ್ಬಗಳ ಮುನ್ನವೇ ವಿದೇಶಿ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಗೊಂಬೆಗಳು ಹಾಗೂ ಆಟಿಕೆಗಳಿಗಾಗಿ ಆರ್ಡರ್ ನೀಡುತ್ತಾರೆ. ಆದರೆ ಈ ಬಾರಿ ಯುದ್ಧದ ಆತಂಕದಿಂದಾಗಿ ಗ್ರಾಹಕರು ಹೊಸ ಆರ್ಡರ್ ನೀಡುವುದನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದಾರೆ.
ಈಗಾಗಲೇ ನೀಡಿರುವ ಕೆಲವು ಆರ್ಡರ್ಗಳನ್ನು ಕೂಡ ಗ್ರಾಹಕರು “ಹೋಲ್ಡ್” ಮಾಡುವಂತೆ ಉದ್ಯಮಿಗಳಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ. ಇದರಿಂದಾಗಿ ಕಾರ್ಖಾನೆಗಳಲ್ಲಿ ತಯಾರಾಗಿರುವ ಹಲವಾರು ಉತ್ಪನ್ನಗಳು ಗೋದಾಮುಗಳಲ್ಲೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಡರ್ಗಳು ಮುಂದೂಡಿದರೆ ಉತ್ಪಾದನೆಯನ್ನೂ ತಾತ್ಕಾಲಿಕವಾಗಿ ಕಡಿಮೆ ಮಾಡಬೇಕಾಗುತ್ತದೆ ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಸಾಗಣೆ ವ್ಯವಸ್ಥೆಯಲ್ಲೂ ದೊಡ್ಡ ಸಮಸ್ಯೆ ಉಂಟಾಗಿದೆ. ಚನ್ನಪಟ್ಟಣದ ಬೊಂಬೆಗಳು ಮುಖ್ಯವಾಗಿ ಹಡಗುಗಳ ಮೂಲಕವೇ ವಿದೇಶಗಳಿಗೆ ರಫ್ತಾಗುತ್ತವೆ. ಆದರೆ ಯುದ್ಧದ ಪರಿಣಾಮವಾಗಿ ಕೆಲವು ಸಮುದ್ರ ಮಾರ್ಗಗಳಲ್ಲಿ ಭದ್ರತಾ ಆತಂಕ ಹೆಚ್ಚಿರುವುದರಿಂದ ಸಾಗಣೆ ವ್ಯವಸ್ಥೆಯಲ್ಲೂ ವಿಳಂಬ ಉಂಟಾಗಿದೆ. ಹಡಗುಗಳು ಸಮುದ್ರದಲ್ಲಿ ಸಿಲುಕುವ ಅಥವಾ ಸಾಗಣೆ ವೆಚ್ಚ ಹೆಚ್ಚಾಗುವ ಸಾಧ್ಯತೆಯೂ ಇರುವುದರಿಂದ ಹಲವರು ತಾತ್ಕಾಲಿಕವಾಗಿ ರಫ್ತನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಚನ್ನಪಟ್ಟಣದ ಬೊಂಬೆ ಉದ್ಯಮವು ಸಾವಿರಾರು ಕಾರ್ಮಿಕರ ಜೀವನೋಪಾಯಕ್ಕೆ ಆಧಾರವಾಗಿದೆ. ಕೈಗಾರಿಕೆಯಲ್ಲಿ ಕೆಲಸ ಮಾಡುವ ಶಿಲ್ಪಿಗಳು, ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳಿಗೆ ವಿದೇಶಿ ಮಾರುಕಟ್ಟೆ ಬಹಳ ಮುಖ್ಯವಾಗಿದೆ. ರಫ್ತು ಕಡಿಮೆಯಾಗುವುದರಿಂದ ಉದ್ಯೋಗದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಉದ್ಯಮಿಗಳು ಹೇಳುತ್ತಿದ್ದಾರೆ.





